ಬೆಂಗಳೂರು, ಫೆ.24- ರಾಜ್ಯದ ಪೊಲೀಸರು ದಯಾ ಮರಣ (Mercy Killing) ಕೋರಿದ್ದಾರೆ. ರಾಷ್ಟ್ರಪತಿ ಸೇರಿದಂತೆ ಎಲ್ಲಾ ಪ್ರಮುಖರಿಗೂ ಪತ್ರ ಬರೆದು ದಯಾಮರಣ ಕೋರಿದ್ದಾರೆ. ಅದು ಯಾಕೆಂದರೆ.
ಸುಮಾರು ಮೂರು ವರ್ಷಗಳಿಂದ ಪತಿ-ಪತ್ನಿ ಯಾವುದೇ ಅಂತರ್ ಜಿಲ್ಲಾ ವರ್ಗಾವಣೆ ಮಾಡದಿರುವುದರಿಂದ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕೆಲ ಪೊಲೀಸ್ ಸಿಬ್ಬಂದಿ ದಯಾಮರಣ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
ಪತಿ ಒಂದು ಜಿಲ್ಲೆಯಲ್ಲಿ ವಾಸ, ಪತ್ನಿ ಒಂದು ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ. ಇದರಿಂದ ದಂಪತಿ ಜೊತೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ.ಹೀಗಾಗಿ ವಿಚ್ಛೇದನ ಪ್ರಕರಣ ಕೂಡ ಹೆಚ್ಚುತ್ತಿವೆ.
ಕೆಲ ಸಿಬ್ಬಂದಿ ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳಬೇಕಿದೆ. ಹೀಗಾಗಿ ವರ್ಗಾವಣೆ ಕೋರಿ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳು, ಗೃಹ ಇಲಾಖೆ ಮಂತ್ರಿಗಳು ಬಾಯಿ ಮಾತಿನಲ್ಲಿ ವರ್ಗಾವಣೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಅಂತರ ಜಿಲ್ಲಾ ವರ್ಗಾವಣೆ ಆದೇಶ ಲಿಖಿತ ರೂಪದಲ್ಲಿ ಬರುತ್ತಿಲ್ಲ ಎಂದು ರಾಜ್ಯದ ಹಲವು ಠಾಣೆಗಳಲ್ಲಿನ ಸಿಬ್ಬಂದಿ ಪತ್ರ ಬರೆದಿದ್ದಾರೆ.
ಪತ್ರದ ವಿವರ:
ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸುಮಾರು ಮೂರು ವರ್ಷಗಳಿಂದ ಪತಿ-ಪತ್ನಿ ಯಾವುದೇ ಅಂತರ್ ಜಿಲ್ಲಾ ವರ್ಗಾವಣೆ ಆಗಿಲ್ಲ. ಪತಿ-ಪತ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಮತ್ತು ಕೆಸಿಎಸ್ಆರ್ ನಿಯಮದ ಪ್ರಕಾರ, ಒಂದೆ ಘಟಕ ಹಾಗೂ ಒಂದೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ನಿಯಮ ಇದೆ.ಆದರೂ ಕೊಡ ಕಳೆದ 3 ವರ್ಷಗಳಿಂದ ಮಾನ್ಯ ಕರ್ನಾಟಕ ಸರ್ಕಾರವಾಗಲಿ, ರಾಜ್ಯ ಗೃಹ ಸಚಿವರಾಗಲಿ, ಪೊಲೀಸ್ ಮುಖ್ಯಸ್ಥರಾಗಲಿ ಯಾವುದೆ ವರ್ಗಾವಣೆ ಮಾಡುತ್ತಿಲ್ಲ. ಈ ವಿಚಾರವಾಗಿ ಸುಮಾರು 3 ವರ್ಷಗಳಿಂದ ಮಾನ್ಯ ಗೃಹ ಸಚಿವರಿಗೆ ಪತಿ-ಪತ್ನಿ ಪ್ರಕರಣದಲ್ಲಿ ಅಂತರ್ ಜಿಲ್ಲಾ ವರ್ಗಾವಣೆ ಮಾಡುವಂತೆ ಆನೇಕ ಬಾರಿ ಮನವಿ ಸಲ್ಲಿಸಿದ್ದು, ಈ ವಿಚಾರವಾಗಿ ಶೀಘ್ರದಲ್ಲೇ ವರ್ಗಾವಣೆ ಮಾಡುತ್ತೇವೆ ಅಂತ ಮಾಧ್ಯಮಗಳ ಮುಂದೆ 3 ವರ್ಷಗಳಿಂದ ಹೇಳಿಕೆ ನೀಡಿರುತ್ತಾರೆ ವಿನಃ ಯಾವುದೆ ವರ್ಗಾವಣೆ ಮಾಡುತ್ತಿಲ್ಲ.
ದಾಂಪತ್ಯದಲ್ಲಿ ಬಿರುಕು:
ನಾವುಗಳು 10 ರಿಂದ 15 ವರ್ಷಗಳ ಕಾಲ ತಂದೆ ತಾಯಿ ಹೆಂಡತಿ ಮಕ್ಕಳನ್ನು ಬಿಟ್ಟು, ನಾವು ಒಂದು ಕಡೆ, ಹೆಂಡತಿ ಒಂದು ಕಡೆ ನೌಕರಿ ಮಾಡುತ್ತಾ ಹೆತ್ತ ಮಕ್ಕಳ ಲಾಲನೆ ಪಾಲನೆ ಮಾಡದೆ ಜನ್ಮ ಕೊಟ್ಟ ಅಪ್ಪ ಅಮ್ಮ ಇವರ ಪೋಷಣೆ ಮಾಡಲಾಗದೆ ಜೀವನ ನಡೆಸುವಂತಾಗಿದೆ. ನಮಗೆ ವರ್ಗಾವಣೆ ಆಗದೆ ಇರುವುದಕ್ಕೆ ದಾಂಪತ್ಯದಲ್ಲಿ ಬಿರುಕು ಬಿಟ್ಟು ಎಷ್ಟೋ ಸಂಸಾರಗಳು ವಿಚ್ಛೇದನ ಪಡೆಯುವ ಹಂತಕ್ಕೆ ತಲುಪಿವೆ. ಕೆಲವರು ವಿಚ್ಛೇದನ ಕೊಟ್ಟಾಗಿದೆ.
ಇನ್ನು ಕೆಲವರಲ್ಲಿ ಪತಿ-ಪತ್ನಿ ಯಾರು ಬೇರೆ ಬೇರೆ ಇರುವುದರಿಂದ ಮದುವೆಯಾಗಿ 5 ವರ್ಷ ಕಳೆದರೂ ಇನ್ನು ಕೂಡ ಮಕ್ಕಳು ಆಗುತ್ತಿಲ್ಲ. ನಮ್ಮದು ಶಿಸ್ತಿನ ಇಲಾಖೆ ಹಾಗಾಗಿ ಬೇರೆ ಇಲಾಖೆಯವರಂತೆ ಪ್ರತಿಭಟನೆ ಮಾಡಲು ಅವಕಾಶ ವಿರುವುದಿಲ್ಲ. ಬೇರೆ ಇಲಾಖೆಯಲ್ಲಿ ಅಂತರ್ ಜಿಲ್ಲಾ ವರ್ಗಾವಣೆ ನಡೆದಿದೆ. ಆದರೆ ಪೊಲೀಸ್ ಇಲಾಖೆಯಲ್ಲಿ 2021 ರಿಂದ ಯಾವುದೆ ವರ್ಗಾವಣೆ ಆಗಿರುವುದಿಲ್ಲ.
ಆರೋಗ್ಯದಲ್ಲಿ ಸಮಸ್ಯೆ:
ಆದ ಕಾರಣ ನಮಗೆ ನೆಮ್ಮದಿಯಾಗಿ ಕರ್ತವ್ಯ ನಿರ್ವವಹಿಸಲು ಆಗುತ್ತಿಲ್ಲ. ನಮಗೆ ನೆಮ್ಮದಿ ಅನ್ನೋದು ಹಾಳಾಗಿ ಆರೋಗ್ಯದಲ್ಲಿ ತೊಂದರೆ ಉಂಟಾಗಿವೆ. ಆದ ಕಾರಣ ದಯಾಳುಗಳಾದ ತಾವುಗಳು ನಮಗೆ ಸಾಮೂಹಿಕ ಮರಣ ಪಡೆಯಲು ದಯಾಮಾಡಿ ದಯಾಮರಣ ಕಲ್ಪಿಸಿಕೊಂಡಬೆಕೆಂದು ಸೊಂದ ಮನಸ್ಸಿನಿಂದ ಈ ಮೂಲಕ ಕಳಕಳಿಯಿಂದ ಬೇಡಿಕೊಳ್ಳುತ್ತೆವೆ”. ಎಂದು ಪೊಲೀಸ್ ಸಿಬ್ಬಂದಿ ಪತ್ರ ಬರೆದಿದ್ದಾರೆ.

1 ಟಿಪ್ಪಣಿ
mcluck OR online casino McLuck mcluck ID