ಬೆಂಗಳೂರು, ಫೆ.3: ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಜಾತಿ,ಧರ್ಮದ ಹೆಸರಿನಲ್ಲಿ ಯಾವುದೇ ರೀತಿಯ ತಾರತಮ್ಯಕ್ಕೆ ಅವಕಾಶವಿಲ್ಲ.ಈ ಬಗ್ಗೆ ದೂರುಗಳು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಸಿದ್ದಾರೆ.
ಚಿತ್ರದುರ್ಗದ ಬಾಗೂರಿನ ದೇವಸ್ಥಾನದಲ್ಲಿ ಕನಕಪೀಠದ ಈಶ್ವರಾನಂದ ಪುರಿ ಸ್ವಾಮೀಜಿಯವರಿಗೆ ಗರ್ಭಗುಡಿಯೊಳಗೆ ಪ್ರವೇಶಕ್ಕೆ ಅವಕಾಶ ಕೊಡದೆ ತಾರತಮ್ಯ ಮಾಡಿದ್ದಲ್ಲದೆ, ದೇವಾಲಯ ಸ್ವಚ್ಛಗೊಳಿಸಿದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗದ ದೇವಾಲಯದಲ್ಲಿ ಕನಕಪೀಠದ ಗುರುಗಳಿಗೆ ದೇವರ ದರ್ಶನ ವಿಷಯವಾಗಿ ತಾರತಮ್ಯ ಮಾಡಿರುವ ಕುರಿತು ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಕೆಲವು ದೇವಸ್ಥಾನಗಳಲ್ಲಿ ಭಕ್ತರನ್ನು ಗರ್ಭಗುಡಿಯೊಳಗೂ ಬಿಟ್ಟು ದೇವರ ಮೂರ್ತಿ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾರೆ. ತಾವು ಇತ್ತೀಚೆಗೆ ಶ್ರೀಶೈಲಕ್ಕೆ ಭೇಟಿ ನೀಡಿದಾಗ ಗರ್ಭಗುಡಿಗೆ ಕರೆದುಕೊಂಡು ಹೋಗಿದ್ದರು. ದೇವರ ಲಿಂಗ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ ಬಹಳಷ್ಟು ದೇವಸ್ಥಾನಗಳಲ್ಲಿ ಗರ್ಭಗುಡಿಯೊಳಗೆ ಬಿಡುವುದಿಲ್ಲ ಎಂದು ನಮ್ಮ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ. ಬಾಗೂರು ದೇವಸ್ಥಾನದ ಪಟ್ಟಣದಲ್ಲಿ ಸ್ವಾಮೀಜಿ ಹೋದ ಬಳಿಕ ದೇವಾಲಯ ಸ್ವಚ್ಛಗೊಳಿಸಿರುವುದು ಸರಿಯಲ್ಲ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಮುಜರಾಯಿ ಅಷ್ಟೇ ಅಲ್ಲ ಯಾವುದೇ ದೇವಸ್ಥಾನಗಳಲ್ಲಿ ಜಾತಿ, ಅಸ್ಪೃಶ್ಯತೆ, ಅಸಮಾನತೆ ಆಚರಣೆಯಾಗಬಾರದು. ಬಸವಣ್ಣ, ಕನಕದಾಸರ ಆಶಯದಂತೆ ಸಹಬಾಳ್ವೆಯ ಪರಿಪಾಠ ಇರಬೇಕು ಎಂದು ಹೇಳಿದರು. ಶ್ರೀಗಳ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ 35 ಸಾವಿರಕ್ಕೂ ಹೆಚ್ಚು ಮುಜರಾಯಿ ದೇವಸ್ಥಾನಗಳಿವೆ. ಎಲ್ಲಿಯೂ ಅಸ್ಪೃಶ್ಯತೆ ಆಚರಣೆಯಾಗುತ್ತಿಲ್ಲ. ಇತ್ತೀಚೆಗೆ ಈ ಪ್ರಕರಣ ವರದಿಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಇಲಾಖೆಯ ಆಯುಕ್ತರಿಗೆ ಸ್ಪಷ್ಟ ಸೂಚನೆ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಜೊತೆಗೆ ಅಸ್ಪೃಶ್ಯತೆ ಮತ್ತು ತಾರತಮ್ಯವನ್ನು ಆಚರಣೆ ಮಾಡಬಾರದು ಎಂದು ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ನಾಮಫಲಕಗಳನ್ನು ಮತ್ತಷ್ಟು ಗೋಚರ ಸ್ಥಿತಿಯಲ್ಲಿ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
100 ರಾಮ ಮಂದಿರ:
ಬಿಜೆಪಿ ಮತ್ತು ಸಂಘ ಪರಿವಾರ ಒಂದು ರಾಮ ಮಂದಿರ ನಿರ್ಮಾಣ ಮಾಡಿ ದೊಡ್ಡ ಸುದ್ದಿ ಮಾಡುತ್ತಿದೆ ಆದರೆ ರಾಜ್ಯ ಸರ್ಕಾರ ರಾಜ್ಯದಲ್ಲಿನ 100 ರಾಮಮಂದಿರಗಳನ್ನು ಪುನರ್ ನಿರ್ಮಾಣ ಮಾಡಲು ತೀರ್ಮಾನಿಸಿದೆ ಇದಕ್ಕಾಗಿ ಬಜೆಟ್ ನಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಕೋರಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ರಾಮಮಂದಿರ, ಹನುಮಮಂದಿರ, ದುರ್ಗಾ ದೇವಸ್ಥಾನಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಬಜೆಟ್ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಬಿಜೆಪಿಯ ರಾಜಕಾರಣಕ್ಕೆ ತಿರುಗೇಟು ಎಂದು ಭಾವಿಸುವ ಅಗತ್ಯವಿಲ್ಲ. ಆಯಾ ಇಲಾಖೆಗಳು ತಮ್ಮ ಪಾಲಿನ ಜವಾಬ್ದಾರಿಯನ್ನು ಪ್ರತಿ ವರ್ಷವೂ ನಿಭಾಯಿಸುತ್ತವೆ ಎಂದರು.
ರಾಮಮಂದಿರ ಹಾಗೂ ರಾಮನ ಭಕ್ತಿ ಬಿಜೆಪಿಗೆ ಹೊಸದು ಎನ್ನಿಸುತ್ತದೆ. ಆದರೆ ದೇಶದ ಜನರಿಗೆ ಇದು ಹಳೆಯದು. ಅದರಲ್ಲೂ ಕಾಂಗ್ರೆಸ್ ಪಕ್ಷದಿಂದ ಪ್ರಧಾನಿಯಾಗಿದ್ದ ರಾಜೀವ್ಗಾಂಧಿಯವರು 1980 ರಲ್ಲಿ ರಾಮಮಂದಿರದ ಬಾಗಿಲು ತೆರೆದು ಪೂಜೆಗೆ ಅವಕಾಶ ಮಾಡಿಕೊಟ್ಟರು.ಆದರೆ ಬಿಜೆಪಿಯವರು ಇದನ್ನು ರಾಜಕೀಯವಾಗಿ ಬಳಸಿಕೊಂಡು ಮತ ಪಡೆಯಲು ಹುನ್ನಾರ ನಡೆಸಿದರು. ಆದರೆ ನಾವು ಧರ್ಮವನ್ನು ರಾಜಕೀಯಕ್ಕೆ ಬಳಸುವುದಿಲ್ಲ. ರಾಮನವಮಿಯಲ್ಲಿ ಮಜ್ಜಿಗೆ, ಪಾನಕ ಹಂಚಿ ನಮ್ಮ ಆಚರಣೆಗಳನ್ನು ನಾವು ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾಲ ಮಾಡಿ ತುಪ್ಪ ತಿನ್ನು ಎನ್ನುವಂತೆ ದೇಶದ ಜನರನ್ನು ಸಾಲದ ಸುಳಿವಿಗೆ ಸಿಲುಕಿಸುವುದನ್ನು ಬಿಟ್ಟರೆ ಬೇರೆ ಯಾವ ಸಾಧನೆಯನ್ನೂ ಮಾಡಿಲ್ಲ.1947ರಿಂದ 2017 ರವರೆಗೆ 67 ವರ್ಷಗಳ ಕಾಲ ದೇಶದ ಒಟ್ಟು ಸಾಲ 52 ಲಕ್ಷ ಕೋಟಿ ರೂ. ಮಾತ್ರ. ಅಂದಿನಿಂದ ಈವರೆಗೆ ಕೇವಲ ಹತ್ತು ವರ್ಷದಲ್ಲಿ ನರೇಂದ್ರಮೋದಿಯವರು ಸಾಲದ ಪ್ರಮಾಣವನ್ನು 150 ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ. 11 ಲಕ್ಷ ಕೋಟಿ ರೂ. ಬಡ್ಡಿಯನ್ನೇ ಪಾವತಿಸಬೇಕಾಗುತ್ತದೆ ಎಂದು ವಿವರಿಸಿದರು. ಪ್ರತಿಯೊಂದಕ್ಕೂ ಮೋದಿಯವರನ್ನು ವೈಭವೀಕರಿಸಿದವರಿಗೆ ಸಾಲ ಮಾಡಿ ತುಪ್ಪ ತಿನ್ನುತ್ತಿರುವುದು ಕಂಡುಬಂದಿಲ್ಲ. ದೇಶದ ಜನರನ್ನು ಸಾಲದ ಸುಳಿಗೆ ಸಿಲುಕಿಸಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.