ಬೆಂಗಳೂರು, ನ.23- ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಹಾಗೂ ಪ್ರತಿಪಕ್ಷ ನಾಯಕನ ಆಯ್ಕೆ ಕುರಿತ ವರಿಷ್ಠರ ತೀರ್ಮಾನದಿಂದ ಅಸಮಾಧಾನಗೊಂಡಿರುವ ಹಿರಿಯ ನಾಯಕ ರಮೇಶ್ ಜಾರಕಿಹೊಳಿ (Ramesh Jarkiholi) ಅವರನ್ನು ಸಮಧಾನ ಪಡಿಸುವ ಕೆಲಸಕ್ಕೆ ನೂತನ ಅಧ್ಯಕ್ಷ ವಿಜಯೇಂದ್ತ ಮುಂದಾಗಿದ್ದಾರೆ.
ಪ್ರತಿಪಕ್ಷ ನಾಯಕನ ಆಯ್ಕೆಗಾಗಿ ಕರೆದಿದ್ದ ಬಿಜೆಪಿ ಶಾಸಕಾಂಗ ಸಭೆಯಿಂದ ಅರ್ಧಕ್ಕೆ ಹೊರನಡೆದಿದ್ದ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾದ ವಿಜಯೇಂದ್ರ ಉಪಹಾರ ಸೇವಿಸಿ ಸುದೀರ್ಘ ಮಾತುಕತೆ ನಡೆಸಿದರು.
ಇದಕ್ಕೂ ಮುನ್ನ ಜಾರಕಿಹೊಳಿ (Ramesh Jarkiholi) ಅವರಿಗೆ ಕರೆ ಮಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಪುತ್ರನಿಗೆ ಸಹಕಾರ ಕೊಡುವಂತೆ ಮನವಿ ಮಾಡಿದರು. ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಸಮರ್ಥವಾಗಿ ಸಂಘಟಿಸಬೇಕು ಇದಕ್ಕೆ ನಿಮ್ಮ ಸಹಕಾರಬೇಕಿದೆ ಎಂದು ಕೋರಿದರೆನ್ನಲಾಗಿದೆ.
ಇದಾದ ನಂತರ ವಿಜಯೇಂದ್ರ ಅವರನ್ನು ಭೇಟಿಯಾದರು. ಈ ವೇಳೆ ತಾವು ಹಿರಿಯರು ನನಗೆ ತಮ್ಮ ಮಾರ್ಗದರ್ಶನ ಅಗತ್ಯ ಏನೇ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಮರೆತು ಪಕ್ಷದ ಹಿತದೃಷ್ಟಿಯಿಂದ ತಮ್ಮೊಂದಿಗೆ ಸಹಕರಿಸುವಂತೆ ವಿಜಯೇಂದ್ರ ಕೋರಿದರೆನ್ನಲಾಗಿದೆ.
ವಿಧಾನಸಭೆ ಚುನಾವಣೆ ಸೋಲು ಹಲವರನ್ನು ಧೃತಿಗೆಡುವಂತೆ ಮಾಡಿದೆ.ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ಹೊಸ ಉತ್ಸಾಹ ಮೂಡಿಸಬೇಕು.ಈ ವಿಷಯದಲ್ಲಿ ತಮ್ಮ ಸಹಕಾರ ಅಗತ್ಯ ನೀವು ಹೇಳಿದಂತೆ ಕೇಳುತ್ತೇನೆ ಒಟ್ಟಿಗೆ ಕೆಲಸ ಮಾಡೋಣಾ ಎಂದು ಹೇಳಿದರೆನ್ನಲಾಗಿದೆ.
ವರಿಷ್ಠರು ಈ ಹಿಂದೆ ನಮಗೆ ಇಷ್ಟವಿಲ್ಲದಿದ್ದರೂ ಕೆಲವು ನಿರ್ಧಾರಗಳನ್ನು ಕೈಗೊಂಡಾಗ ನಾವು ಕೂಡ ಒಪ್ಪಿಕೊಂಡಿದ್ದೇವೆ. ನನ್ನನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದರಿಂದ ವರಿಷ್ಠರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಪಕ್ಷ ಸಂಘಟನೆ ಮಾಡುತ್ತೇನೆ. ಒಂದು ಪಕ್ಷವೆಂದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುತ್ತವೆ. ಎಲ್ಲವನ್ನು ಬದಿಗೊತ್ತಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದು ಮನವಿ ಮಾಡಿರುವುದಾಗಿ ತಿಳಿದು ಬಂದಿದೆ.
ಇದಕ್ಕೆ ಸ್ಪಂದಿಸಿದ ಜಾರಕಿಹೊಳಿ,ನನಗೆ ನಿಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ವಿರೋಧವಿಲ್ಲ. ಆದರೆ ರಾಜ್ಯ ನಾಯಕರ ಬಳಿ ಒಂದು ಬಾರಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕೆಂಬುದು ನನ್ನ ಒತ್ತಾಸೆಯಾಗಿತ್ತು. ಹಿಂದೆ ಕಷ್ಟಕಾಲದಲ್ಲಿದ್ದಾಗಲೂ ಯಡಿಯೂರಪ್ಪನವರ ಜೊತೆ ಇದ್ದೆ. ಮುಂದೆಯೂ ಇರುತ್ತೇನೆ ಎಂದು ಭರವಸೆ ನೀಡಿದರೆನ್ನಲಾಗಿದೆ.
ಯಾವುದೇ ನಿರ್ಧಾರವನ್ನು ಪಕ್ಷದ ವೇದಿಕೆಯಲ್ಲೇ ತೀರ್ಮಾನವಾಗಬೇಕು. ಆತುರದ ಇಲ್ಲವೇ ಯಾರದೋ ಒತ್ತಡಕ್ಕೆ ಮಣಿದು ತೀರ್ಮಾನಿಸಬೇಡಿ. ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಪಕ್ಷ ಸಂಘಟನೆಗೆ ಒತ್ತು ಕೊಡಿ. ನಿಮ್ಮೊಂದಿಗೆ ನಾವು ಕೂಡ ಇರುತ್ತೇವೆ ಎಂದು ಸಲಹೆ ಮಾಡಿದರು ಎಂದು ಗೊತ್ತಾಗಿದೆ.
ಸಂಪೂರ್ಣ ಸಹಕಾರ:
ಇದಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿ, ಏನೇ ಅಸಮಾಧಾನವಿದ್ದರೂ ವರಿಷ್ಠರು ತೆಗೆದುಕೊಂಡ ನಿರ್ಧಾರಕ್ಕೆ ನಾವೆಲ್ಲರೂ ಬದ್ದರಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಸೇರಿದಂತೆ ಎಲ್ಲ ಹಂತದಲ್ಲೂ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಸಹಕಾರ ನೀಡುವುದಾಗಿ ತಿಳಿಸಿದ್ದೇನೆ ಎಂದು ಹೇಳಿದರು.
ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಚರ್ಚಿಸಿ ಪರಿಹರಿಸಿಕೊಳ್ಳಲಾಗುವುದು. ವರಿಷ್ಠರ ತೀರ್ಮಾನವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಅದಕ್ಕೆ ನಾನು ಕೂಡ ಹೊರತಾಗಿಲ್ಲ. ಬುಧವಾರ ನಾನು ಮಾಜಿ ಸಚಿವರಾದ ವಿ.ಸುನೀಲ್ಕುಮಾರ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಮನೆಯಲ್ಲೇ ಸಭೆ ಸೇರಿ ಪಕ್ಷದ ಬೆಳವಣಿಗೆ ಕುರಿತಂತೆ ಮಾತುಕತೆ ನಡೆಸಿದ್ದೇವೆ. ಅಸಮಾಧಾನವೆಂಬುದು ಮುಗಿದ ಅಧ್ಯಾಯ, ವಿಜಯೇಂದ್ರ ಇನ್ನು ಮುಂದೆ ನಮ್ಮ ಹುಡುಗ. ಅವರಿಗೆ ಸಹಕಾರ ನೀಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಕೆಲವು ತೀರ್ಮಾನಗಳಿಂದ ಬೇಸರವಾಗಿದ್ದು ನಿಜ. ಇದನ್ನೇ ವಿವಾದ ಮಾಡಿದರೆ ಪ್ರತಿಪಕ್ಷಗಳಿಗೆ ಇದು ಅಸ್ತ್ರವಾಗಲಿದೆ. ಬರುವ ದಿನಗಳಲ್ಲಿ ಇದಕ್ಕೆ ಅವಕಾಶ ಕಲ್ಪಿಸಿಕೊಡಬಾರದು. ಇನ್ನು ಮುಂದೆ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದೇವೆ ಎಂದು ಆಶ್ವಾಸನೆ ನೀಡಿದರು.
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸಲು ವಿಜಯೇಂದ್ರಗೆ ಸಲಹೆ ಕೊಟ್ಟಿದ್ದೇನೆ. ಅವರು ಎಲ್ಲವನ್ನು ಸಹನೆಯಿಂದ ಕೇಳಿದ್ದಾರೆ. ಬರುವ ದಿನಗಳಲ್ಲಿ ಬಿಜೆಪಿಗೆ ಖಂಡಿತವಾಗಿಯೂ ಒಳ್ಳೆಯ ದಿನಗಳು ಬರಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.