ಬೆಂಗಳೂರು – ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ ಅನ್ನಭಾಗ್ಯ ಯೋಜನೆ ಅನ್ವಯ ಬಿಪಿಎಲ್ ಕಾರ್ಡುದಾರ ಪ್ರತಿ ಸದಸ್ಯನಿಗೆ ಮಾಸಿಕ ಹತ್ತು ಕಿಲೋ ಅಕ್ಕಿ ನೀಡುವ ಗ್ಯಾರಂಟಿ ಈಗ ಸಾಕಷ್ಟು ಚರ್ಚೆಯಲ್ಲಿದೆ.
ಹೆಚ್ಚುವರಿ ಅಕ್ಕಿ ನೀಡುವಂತೆ ರಾಜ್ಯ ಸರ್ಕಾರ ಮಾಡಿದ ಮನವಿಗೆ ಕೇಂದ್ರ ಸ್ಪಂದಿಸಲಿಲ್ಲ.ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಗೆ ಕೇಂದ್ರದ ಆಹಾರ ನಿಗಮ ನಿಗದಿಪಡಿಸಿದ ಮೊತ್ತ ನೀಡಲು ಸಿದ್ದ ಎಂದು ಪದೇ ಪದೇ ಮನವರಿಕೆ ಮಾಡಿದರೂ ಸ್ಪಂದಿಸದ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಕೇಂದ್ರದ ಈ ಕ್ರಮದಿಂದಾಗಿ ಜುಲೈ ತಿಂಗಳಿಂದಲೇ ಬಿಪಿಎಲ್ ಕಾರ್ಡುದಾರರಿಗೆ ಹೆಚ್ಚುವರಿಯಾಗಿ ಐದು ಕಿಲೋ ಅಕ್ಕಿ ನೀಡುವ ರಾಜ್ಯ ಸರ್ಕಾರದ ಭರವಸೆ ಈಡೇರಿಸುವುದು ಕಷ್ಟ ಸಾಧ್ಯವಾಗಲಿದೆ ಎಂಬ ಅಂಶ ಆತಂಕ ಮೂಡಿಸಿತು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಹಾರ ಇಲಾಖೆಯ ಮಂತ್ರಿ ಹಾಗೂ ಅಧಿಕಾರಿಗಳಿಗೆ ಯಾವ ರಾಜ್ಯದಲ್ಲಿ ಹೆಚ್ಚುವರಿ ಅಕ್ಕಿ ಲಭ್ಯವಿದೆ,ಅದನ್ನು ತಮಗೆ ಮಾರಾಟ ಮಾಡುತ್ತಾರೆಯೇ?ಹಾಗಾದರೆ ಬೆಲೆ ಎಷ್ಟು? ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದರು.
ಅದರಂತೆ ಅಧಿಕಾರಿಗಳು ಎಲ್ಲಾ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಪಂಜಾಬ್, ಉತ್ತರ ಪ್ರದೇಶ, ಜಾರ್ಖಂಡ್, ತೆಲಂಗಾಣ ರಾಜ್ಯಗಳಲ್ಲಿ ಹೆಚ್ಚುವರಿ ಅಕ್ಕಿಯ ಲಭ್ಯತೆ ಇದೆ.ಇದನ್ನು ಅವರು ಮಾರಾಟ ಮಾಡಲು ಸಿದ್ದರಿದ್ದಾರೆ ಎಂಬ ಮಾಹಿತಿ ನೀಡಿದರು.
ಈ ಕುರಿತಂತೆ ಕರ್ನಾಟಕದ ಅಧಿಕಾರಿಗಳು ಹಾಗೂ ಈ ರಾಜ್ಯಗಳ ಅಧಿಕಾರಿಗಳು ವಿಚಾರ ವಿನಿಮಯ ಮಾಡಿದರು.ಈ ವೇಳೆ ಪ್ರತಿ ಕಿಲೋ ಅಕ್ಕಿಗೆ ಆ ರಾಜ್ಯಗಳು ನಿಗದಿ ಪಡಿಸಿದ ಬೆಲೆ ಅದರ ಸಾಗಾಣಿಕೆ ವೆಚ್ಚ ಹಾಗೂ ವಿತರಣೆಯ ವೆಚ್ಚ ನೋಡಿದಾಗ ಪ್ರತಿ ಕಿಲೋ ಅಕ್ಕಿಯ ಬೆಲೆ ಐವತ್ತು ರೂಪಾಯಿ ಆಸುಪಾಸಿಗೆ ಬಂದು ನಿಂತಿತು.
ಇದು ಬೊಕ್ಕಸಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂಬ ಅಂಶ ಮನವರಿಕೆಯಾದ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಅಕ್ಕಿ ಗಿರಣಿ ಮತ್ತು ಮಾರಾಟಗಾರ ಬಳಿ ಲಭ್ಯವಿರುವ ಅಕ್ಕಿ ಖರೀದಿಸುವ ಕುರಿತಂತೆ ಮಾತುಗಳು ನಡೆದವು.
ಆಹಾರ ಇಲಾಖೆ ಮಂತ್ರಿ ಮುನಿಯಪ್ಪ ಅವರೆ ಕೆಲವರೊಂದಿಗೆ ಮಾತುಕತೆ ನಡೆಸಿದರು. ಆನಂತರ ಇಲಾಖೆಯ ಕೆಲವು ಅಧಿಕಾರಿಗಳು ಪ್ರಭಾವಿ ವ್ಯಕ್ತಿಗಳ ಮಧ್ಯಸ್ಥಿಕೆಯಲ್ಲಿ ಅಕ್ಕಿ ಖರೀದಿ ಬೆಲೆ ನಿಗದಿ ಕುರಿತಂತೆ ಸಮಾಲೋಚನೆ ನಡೆಸಿದರು. ಇದರ ಪರಿಣಾಮ ಪ್ರತಿ ಕಿಲೋ ಅಕ್ಕಿಗೆ 43 ರೂಪಾಯಿ 60 ಪೈಸೆ ನಿಗದಿ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.
ಇದನ್ನು ಆಧರಿಸಿ ಇನ್ನೇನು ಅಕ್ಕಿ ಖರೀದಿಗೆ ಆದೇಶ ಹೊರಡಿಸಬೇಕು ಎನ್ನುವಷ್ಟರಲ್ಲಿ ಆಘಾತಕಾರಿ ಸುದ್ದಿಯೊಂದು ಮುಖ್ಯಮಂತ್ರಿಗಳನ್ನು ತಲುಪಿತು. ಗುಪ್ತದಳದ ಅಧಿಕಾರಿಗಳು ಈ ಸಂಬಂಧ ನೀಡಿದ ಮಾಹಿತಿ ಕೇಳಿ ಅದನ್ನು ಖಚಿತಪಡಿಸಿಕೊಂಡ ಮುಖ್ಯಮಂತ್ರಿಗಳು ಅಕ್ಕಿ ಖರೀದಿ ಸಂಬಂಧ ಹೊರಡಿಸಬೇಕಿದ್ದ ಎಲ್ಲಾ ಆದೇಶಗಳನ್ನು ತಡೆ ಹಿಡಿದರು ಎನ್ನಲಾಗಿದೆ.
ಅಂದಹಾಗೆ ಗುಪ್ತದಳ ಮುಖ್ಯಮಂತ್ರಿಗಳಿಗೆ ನೀಡಿದ ಮಾಹಿತಿಯಲ್ಲಿ ಖಾಸಗಿಯವರಿಂದ ಖರೀದಿಸುವ ಪ್ರತಿ ಲಾಟ್ ಅಕ್ಕಿಗೆ ಇಪ್ಪತ್ತು ಕೋಟಿ ರೂಪಾಯಿ ಕಿಕ್ ಬ್ಯಾಕ್ ನೀಡುವ ಕುರಿತು ಆಹಾರ ಇಲಾಖೆಯ ಪ್ರಭಾವಿಯೊಬ್ಬರೊಂದಿಗೆ ನಡೆಸಿದ ಮಾತುಕತೆಯ ವಿವರಗಳಿದ್ದವು ಎನ್ನಲಾಗಿದೆ.
ಇಷ್ಟೇ ಅಲ್ಲ ಈ ಮಾಹಿತಿ ಪ್ರತಿಪಕ್ಷ ನಾಯಕರೊಬ್ಬರಿಗೆ ದಾಖಲೆ ರೂಪದಲ್ಲಿ ಸಿಕ್ಕಿದೆ ಎಂದು ವಿವರಿಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.
ಇದಾದ ನಂತರ ಮುಖ್ಯಮಂತ್ರಿಗಳು ತಮ್ಮ ಅಪ್ತ ಸಚಿವರೊಂದಿಗೆ ಸಭೆ ನಡೆಸಿ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸುವ ಬದಲಿಗೆ ಪ್ರತಿ ಕಿಲೋ ಅಕ್ಕಿಗೆ ಕೇಂದ್ರ ಆಹಾರ ನಿಗಮ ನಿಗದಿಪಡಿಸಿದ ಹಣವನ್ನು ತಾತ್ಕಾಲಿಕವಾಗಿ ಬಿಪಿಎಲ್ ಕಾರ್ಡುದಾರರಿಗೆ ನೀಡುವ ತೀರ್ಮಾನ ಕೈಗೊಂಡರೆನ್ನಲಾಗಿದೆ.
ಇದಾದ ಬಳಿಕ ನಡೆದ ಸಂಪುಟ ಸಭೆಯಲ್ಲಿ ಅಕ್ಕಿಯ ಬದಲಿಗೆ ಹಣ ಕೊಡುವ ವಿಷಯದಲ್ಲಿ ಸುದೀರ್ಘ ಚರ್ಚೆ ನಡೆಯಿತು ಅಂತಿಮವಾಗಿ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸುವ ಸಂಬಂಧ ಕರ್ನಾಟಕ ಪಾರದರ್ಶಕ ಕಾಯಿದೆ ಅನ್ವಯ ಟೆಂಡರ್ ಕರೆದು ಶರತ್ತುಗಳನ್ನು ವಿಧಿಸಬೇಕು ಆ ಶರತ್ತುಗಳನ್ನು ಪೂರೈಸಿದ ಸಂಸ್ಥೆಗಳಿಂದ ನಿಗದಿಪಡಿಸಿದ ದರದಲ್ಲಿ ಅಕ್ಕಿ ಖರೀದಿ ಮಾಡಬೇಕು ಅಲ್ಲಿಯವರೆಗೆ ಹಣ ನೀಡಬೇಕು ಎಂಬ ನಿರ್ಧಾರ ಕೈಗೊಳ್ಳಲಾಯಿತು. ಸರ್ಕಾರದ ಈ ನಿರ್ಧಾರದಿಂದ ಖಜಾನೆಗೆ ದೊಡ್ಡ ಪ್ರಮಾಣದ ಉಳಿತಾಯವಾಗಿದೆ ಪ್ರಮುಖವಾಗಿ ಸಾಗಾಣಿಕೆಗೆ ನೀಡಲಾಗುತ್ತಿದ್ದ ಹಣ ಮತ್ತು ನ್ಯಾಯಬೆಲೆ ಅಂಗಡಿಗಳ ವಿತರಕರಿಗೆ ನೀಡುತ್ತಿರುವ ನಿರ್ವಹಣಾ ವೆಚ್ಚ ಪ್ರತಿ ಕಿಲೋ ಗೆ ಒಂದು ರೂಪಾಯಿ 50 ಪೈಸೆ ಸೇರಿ ಸುಮಾರು ನೂರು ಕೋಟಿ ಉಳಿತಾಯವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಅಕ್ಕಿ ಬದಲಿಗೆ ಹಣ – ಹಿಂದೆ ಇದೆ ದೊಡ್ಡ ರಹಸ್ಯ
Previous Articleಮಂತ್ರಿಗಳ ಕಿವಿ ಹಿಂಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Next Article ವಿಧಾನಸಭೆ ಪ್ರವೇಶಿಸಿದ ಅನಾಮಿಕ