ಬಂಡೀಪುರ, ಜ.25: ಬಂಡಿಪುರ (Bandipur) ಅರಣ್ಯ ಪ್ರದೇಶದೊಳಗಿನ ರಸ್ತೆಯ ಮೂಲಕ ಕೇರಳದ ವೈನಾಡಿಗೆ ಹೋಗುವ ಮಾರ್ಗದಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ತುರ್ತು ಮತ್ತು ಅನಿವಾರ್ಯ ಕಾರಣದಿಂದ ಸಂಚರಿಸುವ ಪ್ರಯಾಣಿಕರ ವಾಹನಗಳ ಓಡಾಟಕ್ಕೆ ಅವಕಾಶ ನೀಡಲು ಪರಿಶೀಲನೆ ನಡೆಸುವುದಾಗಿ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಈ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿರ್ಬಂಧಿಸಿರುವ ಕುರಿತಂತೆ ಖುದ್ದು ಪರಿಶೀಲನೆ ನಡೆಸಿದ ಅವರು ಮಧ್ಯರಾತ್ರಿ 12 ಗಂಟೆಯಿಂದ ನಸುಕಿನ 2 ಗಂಟೆಯವರೆಗೆ ಈ ಮಾರ್ಗವಾಗಿ ಕೇರಳದ ಗಡಿಯವರೆಗೂ ಅಧಿಕಾರಿಗಳೊಂದಿಗೆ ಪ್ರಯಾಣ ಮಾಡಿದರು.
ರಸ್ತೆಯನ್ನು ದಾಟುವ ಜಿಂಕೆಗಳು, ಆನೆಗಳನ್ನು ವೀಕ್ಷಿಸಿ, ಕರ್ನಾಟಕದ ಗಡಿಯೊಳಗಿನ ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ ನಡೆಸಿದರು.
ನಿತ್ಯ ಎಷ್ಟು ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ, ರಾತ್ರಿಯ ವೇಳೆ ವಾಹನ ಸಂಚಾರದಿಂದ ಎಷ್ಟು ವನ್ಯಜೀವಿಗಳು ಮೃತಪಟ್ಟಿವೆ ಎಂಬ ಬಗ್ಗೆಯೂ ಮಾಹಿತಿ ಪಡೆದರು.
ಈ ಮಾರ್ಗದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕು ಎಂಬ ಕೇರಳದ ಬೇಡಿಕೆಯ ಕುರಿತಂತೆಯೂ ಅಧಿಕಾರಿಗಳ ಜೊತೆ ಸಮಾಲೋಚಿಸಿದರು.
ಚೆಕ್ ಪೋಸ್ಟ್ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ ಸಚಿವರು, ಕುಂದುಕೊರತೆಯನ್ನೂ ಆಲಿಸಿದರು. ಚೆಕ್ ಪೋಸ್ಟ್ ಸಿಬ್ಬಂದಿಗೆ ನೀಡಿರುವ ಸೌಲಭ್ಯಗಳ ಪರಿಶೀಲನೆ ನಡೆಸಿದರು.
ರಾತ್ರಿ 9ರ ನಂತರ ಆಂಬುಲೆನ್ಸ್ ಗಳಿಗೆ ಮತ್ತು ಕರ್ನಾಟಕದ 5 ಹಾಗೂ ಕೇರಳದ 5 ಬಸ್ ಗಳ ಸಂಚಾರಕ್ಕೆ ಮಾತ್ರವೇ ಅವಕಾಶ ನೀಡಲಾಗಿದ್ದು, ಉಳಿದಂತೆ ತೀರಾ ತುರ್ತು ಸನ್ನಿವೇಶದಲ್ಲಿ ಪ್ರಯಾಣಿಕರ ವಾಹನಗಳ ಪ್ರಯಾಣಿಕರ ವಿವರ ಪಡೆದು ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಲಾಯಿತು.