ದ್ರಾಕ್ಷಿ ನಾಡು, ತೋಟಗಾರಿಕೆ ಬೆಳೆಗಳ ರಾಜ,ನದಿ ಮುಖಜ ಭೂಮಿ ಎಂದು ಗುರುತಿಸಲ್ಪಡುವ ವಿಜಯಪುರ ಎಲ್ಲರ ಆಸಕ್ತಿಯ ಪ್ರದೇಶ, ಗೋಲ ಗುಮ್ಮಟ, ಕೂಡಲ ಸಂಗಮದಂತಹ ಪವಿತ್ರ ತಾಣಗಳನ್ನೊಳಗೊಂಡ ಇಲ್ಲಿ ಬಿಸಿಲಿನ ಝಳದಂತೆ ಚುನಾವಣೆಯ ಕಾವೂ ಕೂಡಾ ತೀವ್ರವಾಗಿದೆ.
ವಿಜಯಪುರ ಲೋಕಸಭಾ ಕ್ಷೇತ್ರ ಕಳೆದ 24 ವರ್ಷಗಳಿಂದ ಬಿಜೆಪಿ ಭದ್ರಕೋಟಿಯಾಗಿ ಉಳಿದುಕೊಂಡಿದೆ. ಹೀಗಾಗಿ ಈ ಚುನಾವಣೆಯಲ್ಲೂ ತನ್ನ ಅಧಿಪತ್ಯ ಮುಂದುವರಿಸಲು ಬಿಜೆಪಿ ಕಾರ್ಯತಂತ್ರ ಹೆಣೆದಿದೆ.
ಬಿಜೆಪಿ ಭದ್ರಕೋಟೆಯಾಗಿರುವ ವಿಜಯಪುರ ಲೋಕಸಭಾ ಕ್ಷೇತ್ರ ಕೈ ವಶಕ್ಕೆ ಮಾಡಿಕೊಳ್ಳಲು ಕಾಂಗ್ರೆಸ್ ಪ್ರತಿತಂತ್ರ ಹೆಣೆದಿದ್ದು ಅಖಾಡ ರಂಗೇರಿದೆ ರಾಜ್ಯ ರಾಜಕಾರಣದಲ್ಲಿ ಸೋಲಿಲ್ಲದ ಸರದಾರ ಎಂದು ಕರೆಯಿಸಿಕೊಳ್ಳುವ ಹಿರಿಯ ಸಂಸದ ರಮೇಶ ಜಿಗಜಿಣಗಿಗೆ ಇದು ಕೊನೆಯ ಚುನಾವಣೆ ಆಗಿದ್ದು ಈ ಬಾರಿ ಶತಾಯಗತಾಯವಾಗಿ ಗೆಲ್ಲಲೆಬೇಕೆಂದು ಜಿಗಜಿಣಗಿ ಪಣತೊಟ್ಟಿದ್ದಾರೆ.
.1952 ರಿಂದ 2009ರ ಅವಧಿಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜನತಾದಳದ ಅಭ್ಯರ್ಥಿಗಳು ಸಂಸದರಾಗಿ ಆಯ್ಕೆಯಾಗಿದ್ದಾರೆ. ವಿಜಯಪುರ ಲೋಕಸಭಾ ಕ್ಷೇತ್ರದ ಮತದಾರರು ಎಲ್ಲಾ ಪಕ್ಷದ ಅಭ್ಯರ್ಥಿಗಳ ಅಭಿವೃದ್ಧಿ ಕೆಲಸಗಳನ್ನು ನೋಡಿದ್ದಾರೆ. ಕಳೆದ 2009 ರಿಂದ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿದೆ. 2009ರಿಂದ 2024ರವರೆಗೂ ಬಿಜೆಪಿಯ ರಮೇಶ್ ಜಿಗಜಿಣಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಸೋಲಿಲ್ಲದ ಸರದಾರನಿಗೆ ಸೋಲಿನ ರುಚಿ ಉಣಿಸಬೇಕು ಎಂದು ಪಣತೊಟ್ಟಿದ್ದು, ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ತನ್ನ ನಿಲುವು ಬದಲಾಯಿಸಿದೆ ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿದ ಮಾಜಿ ಶಾಸಕ ರಾಜು ಅಲಗೂರ ಅವರನ್ನು ಕಣಕ್ಕಿಳಿಸುವ ಮೂಲಕ ಸೆಡ್ಡು ಹೊಡೆದಿದೆ 2009, 2014, 2019 ಈ ಮೂರೂ ಚುನಾವಣೆಗಳಲ್ಲಿಯೂ ಬಿಜೆಪಿಯ ರಮೇಶ್ ಜಿಗಜಿಣಗಿ ಗೆದ್ದಿದ್ದಾರೆ.
ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ 1999ರಿಂದ ಸತತ ಗೆಲುವುಗಳನ್ನು ಕಾಣುತ್ತ ಬಂದಿರುವ ಬಿಜೆಪಿ ಸತತ 5 ಬಾರಿ ಗೆದ್ದಿದೆ.
ಇದರಲ್ಲಿ ಎರಡು ಚುನಾವಣೆಗಳಲ್ಲಿ ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಗೆದ್ದಿದ್ದರೆ, ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಗೆದ್ದಿದ್ದಾರೆ.
ಲೋಕಸಭಾ ಕ್ಷೇತ್ರದ ಒಟ್ಟು ಮತದಾರರರು 19,19,048. ಅವರಲ್ಲಿ 9,76,073 ಪುರುಷ ಮತದಾರರು, 9,42,757 ಮಹಿಳಾ ಮತದಾರರು ಮತ್ತು 218 ಇತರ ಮತದಾರರು ಇದ್ದಾರೆ.
ಕ್ಷೇತ್ರದಲ್ಲಿ ನ ಚಿತ್ರಣ ರಾಜಕೀಯವಾಗಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸದಾ ರಮೇಶ್ ಜಿಗಜಣಗಿ ಅವರ ಬೆನ್ನಿಗೆ ಇರುತ್ತಿದ್ದ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಈ ಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ ಇವರ ಬೆಂಬಲಿಗರ ಪಡೆ ಕೂಡ ಚಿತ್ರದುರ್ಗಕ್ಕೆ ವರ್ಗಾವಣೆಯಾಗಿದೆ.
ಜಿಗಜಿಣಗಿ ಅವರ ಪ್ರಬಲ ರಾಜಕೀಯ ವಿರೋಧಿ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದು ರಾಜ್ಯದ ಹಲವೆಡೆ ಪ್ರಚಾರ ನಡೆಸುತ್ತಿದ್ದಾರೆ ಆದರೆ ವಿಜಯಪುರದಲ್ಲಿ ಅವರು ಕೈಗೊಳ್ಳುವ ನಿರ್ಧಾರ ಜಿಗಜಿಣಗಿ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.
ಈ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿರುವ ಜಿಗಜಿಣಗಿ ಈ ಬಾರಿ ಸ್ವಪಕ್ಷೀಯರಿಂದಲೇ ಕೊಂಚಮಟ್ಟಿನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಆದರೆ ಕ್ಷೇತ್ರದ ಎಲ್ಲಾ ಸಮುದಾಯಗಳೊಂದಿಗೆ ಇವರು ಹೊಂದಿರುವ ಉತ್ತಮ ಒಡನಾಟ ಮತ್ತು ಬಾಂಧವ್ಯ ಇನ್ನೂ ಗಟ್ಟಿಯಾಗಿದೆ.
ಕಬ್ಬು, ದ್ರಾಕ್ಷಿ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿದ ಸಂಸದ ಜಿಗಜಿಣಗಿ ಅವರ ಕಾರ್ಯವೈಖರಿ ಕ್ಷೇತ್ರದ ಮತದಾರರ ಮೆಚ್ಚುಗೆಗೆ ಪಾತ್ರವಾಗಿದೆ ಇದರೊಂದಿಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಪರವಾದ ಅಲೆ ದೊಡ್ಡ ಮಟ್ಟದ ಶ್ರೀರಕ್ಷೆಯಾಗಿ ಪರಿಣಮಿಸಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಸಕ್ರಿಯವಾಗಿರುವುದು ಜಿಗಜಿಣಗಿ ಅವರ ಪಾಲಿಗೆ ದೊಡ್ಡ ಪ್ಲಸ್ ಪಾಯಿಂಟ್. ಕ್ಷೇತ್ರದ ಎಲ್ಲಾ ಕಡೆ ಮೋದಿ ಮತ್ತು ಯಡಿಯೂರಪ್ಪ ಅವರ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು ಇವುಗಳೆಲ್ಲ ಮತಗಳಾಗಿ ಪರಿವರ್ತನೆಯಾದರೆ ಜಿಗಜಿಣಗಿ ಮತ್ತೊಂದು ಅವರಿಗೆ ಸಂಸತ್ ಪ್ರವೇಶಿಸಲಿದ್ದಾರೆ
ಆದರೆ ಅವರ ಈ ಕನಸಿಗೆ ಬಿಜೆಪಿಯಲ್ಲಿ ಕಾಣಿಸಿಕೊಂಡಿರುವ ಭಿನ್ನಮತ ಹಾಗೂ ಸತತವಾಗಿ ಆಯ್ಕೆಯಾದರೂ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ವಿಶೇಷ ಯೋಜನೆಗಳನ್ನು ತಂದಿಲ್ಲ ಎನ್ನುವ ಆಡಳಿತ ವಿರೋಧಿ ಅಲೆ ದೊಡ್ಡ ಅಡ್ಡಿ ಉಂಟು ಮಾಡುವ ಸಾಧ್ಯತೆ ಇದೆ. ಜೆಡಿಎಸ್ ಕ್ಷೇತ್ರದಲ್ಲಿ ಕೂಡ ಶಾಸಕರು ಸೇರಿದಂತೆ ಪಕ್ಷದ ಕಾರ್ಯಕರ್ತರು ನಿರೀಕ್ಷಿತ ಮಟ್ಟದಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತಿಲ್ಲ.
ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ. ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರವನ್ನು ಗೆದ್ದಿರುವ ಜೆಡಿಎಸ್, ಇಂಡಿ, ಬಸವನ ಬಾಗೇವಾಡಿ, ನಾಗಠಾಣಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ತನ್ನದೇ ಆದ ಮತಗಳನ್ನು ಹೊಂದಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಸುನಿತಾ ಚವ್ಹಾಣ್ ಅವರು 4 ಲಕ್ಷ ಮತಗಳನ್ನು ಪಡೆದಿದ್ದರು. ಆದರೆ ಇವರೆಲ್ಲರೂ ತೆರೆಮರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ.
ಮತ್ತೊಂದೆಡೆಯಲ್ಲಿಷಕಳೆದ 24 ವರ್ಷಗಳಿಂದ ಬಿಜೆಪಿ ತೆಕ್ಕೆಯಲ್ಲಿರುವ ವಿಜಯಪುರವನ್ನು ಕಾಂಗ್ರೆಸ್ ಈ ಸಲ ತನ್ನದಾಗಿಸಿಕೊಳ್ಳುವ ಯತ್ನದಲ್ಲಿದೆ. ಇಬ್ಬರು ಸಚಿವರು, ನಾಲ್ವರು ಶಾಸಕರು, ವಿಧಾನ ಪರಿಷತ್ತಿನ ಇಬ್ಬರು ಸದಸ್ಯರಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ರಾಜಕೀಯವಾಗಿ ಪ್ರಬಲ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಆ ಪಕ್ಷವು ನೆಚ್ಚಿಕೊಂಡಿದೆ. ಜಿಲ್ಲೆಗೆ ಎರಡು ಮಂತ್ರಿ ಸ್ಥಾನಗಳನ್ನು ನೀಡಲಾಗಿರುವುದು ಕೂಡ ಲೋಕಸಭಾ ಚುನಾವಣೆಯಲ್ಲಿ ನೆರವಾಗಬಹುದು.
ರಾಜು ಅಲಗೂರ ಈ ಹಿಂದೆ ಎರಡು ಬಾರಿ ಶಾಸಕರಾಗಿದ್ದರು.
ಅವರು ಪ್ರಬಲ ಛಲವಾದಿ ಸಮುದಾಯಕ್ಕೆ ಸೇರಿದವರಾಗಿದ್ದು, ಸಮುದಾಯದ ಬಲ ಅವರ ಕೈಹಿಡಿಯಲಿದೆ ಎನ್ನಲಾಗುತ್ತಿದೆ. ರೈತ, ದಲಿತ ಹೋರಾಟಗಳ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದ ಮಾಜಿ ಉಪನ್ಯಾಸಕ ರಾಜು ಆಲಗೂರ ಒಮ್ಮೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿಯೂ ಅನುಭವ ಹೊಂದಿದ್ದಾರೆ
ಬೃಹತ್ ಕೈಗಾರಿಕೆ ಸಚಿವ ಎಂಬಿ ಪಾಟೀಲ ಅವರು ಈ ಚುನಾವಣೆಯಲ್ಲಿ ತಾವೇ ಸ್ಪರ್ಧಿಸಿದ್ದೇನೆ ಎಂಬಂತೆ ಸಂಘಟನೆಯಲ್ಲಿ ತೊಡಗಿರುವುದು ಎಂಬಿ ಪಾಟೀಲ್ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವುದು ಅವರಿಗೆ ಹೆಚ್ಚಿನ ಲಾಭ ತಂದು ಕೊಟ್ಟಿದೆ.
ಸ್ಥಳೀಯ ರಾಜಕೀಯ ಕಾರಣಕ್ಕಾಗಿ ಒಂದೇ ಪಕ್ಷದಲ್ಲಿದ್ದರೂ ಪರಸ್ಪರ ಎದುರಾಳಿಗಳಾಗಿರುವ ಎಂಬಿ ಪಾಟೀಲ್ ಮತ್ತು ಶಿವಾನಂದ ಪಾಟೀಲ್ ನಡುವಿನ ಆಂತರಿಕ ಕಲಹ ಪ್ರತಿ ಚುನಾವಣೆಯಲ್ಲೂ ಸಾಕಷ್ಟು ಸದ್ದು ಮಾಡುತ್ತಿತ್ತು ಆದರೆ ಈ ಬಾರಿ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತ ಪಾಟೀಲ್ ನೆರೆಯ ಬಾಗಲಕೋಟೆ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಶಿವಾನಂದ ಪಾಟೀಲ್ ಸಂಪೂರ್ಣವಾಗಿ ಬಾಗಲಕೋಟೆಯಲ್ಲಿ ತೊಡಗಿದ್ದಾರೆ ಹೀಗಾಗಿ ಕಾಂಗ್ರೆಸ್ಸಿಗೆ ಆಂತರಿಕ ಬಿಕ್ಕಟ್ಟು ಈ ಬಾರಿ ಕಾಡುವುದಿಲ್ಲ ಎಂದು ಅಂದಾಜಿಸಲಾಗಿದೆ.