ಬೆಂಗಳೂರು,ಡಿ.27- ಅಂಗಡಿ, ಮುಂಗಟ್ಟು, ವಾಣಿಜ್ಯ ಸಂಕೀರ್ಣ ಮತ್ತು ಕಚೇರಿಗಳ ಕನ್ನಡೇತರ ನಾಮಫಲಕಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (Kannada Rakshana Vedike) ಸಮರ ಸಾರಿದೆ.
ವಾಣಿಜ್ಯ ಮಳಿಗೆಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಇರಲೇಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ವಿಮಾನ ನಿಲ್ದಾಣ ರಸ್ತೆ ಸಾದಹಳ್ಳಿ ಟೋಲ್ ಗೇಟ್ನಿಂದ ಕಬ್ಬನ್ ಪಾರ್ಕ್ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಈ ಪ್ರದೇಶದಲ್ಲಿ ಹಾಕಲಾಗಿದ್ದ ಅನ್ಯ ಭಾಷೆಯ ನಾಮಫಲಕ,ಜಾಹೀರಾತುಗಳು, ಬ್ಯಾನರ್ ,ಕಟೌಟ್ ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಸಾದಹಳ್ಳಿಯ ಬ್ಲೂಮ್ ಹೋಟೆಲ್ ಬಳಿ ಅನ್ಯ ಭಾಷೆಯ ಲೈಟಿಂಗ್ ಬೋರ್ಡ್ ಒಡೆದು ಹಾಕಿದರು. ಇಲ್ಲಿ ಕನ್ನಡ ನಾಮಫಲಕ ಇರಲೇಬೇಕು ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಮೆರವಣಿಗೆ ನಡುವೆ ಕನ್ನಡ ನಾಮಫಲಕಗಳನ್ನು ಹಾಕದ ಅಂಗಡಿ ಮುಂಗಟ್ಟುಗಳಿಗೆ ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡಿದರು. ಈ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ ಟೋಲ್ ಗೇಟ್ನಿಂದ ಆರಂಭಗೊಂಡ ರಕ್ಷಣಾ ವೇದಿಕೆ ಕಾರ್ಯಕರ್ತರ ಮೆರವಣಿಗೆ ಯಲಹಂಕ,ಹೆಬ್ಬಾಳ ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಎಸ್ ಪಿ ರಸ್ತೆ, ಬ್ರಿಗೇಡ್ ರಸ್ತೆ, ಎಂಜಿ ರಸ್ತೆ, ಚಿಕ್ಕ ಪೇಟೆ, ಸಿಟಿ ಮಾರ್ಕೆಟ್, ಅವೆನ್ಯೂ ರಸ್ತೆ ಮುಖಾಂತರ ಕಬ್ಬನ್ ಪಾರ್ಕ್ ವರೆಗೆ ನಡೆಯಿತು.
ಕನ್ನಡ ಕಡೆಗಣಿಸಿದ ಮಾಲ್, ಅಂಗಡಿ ಮಾಲೀಕರಿಗೆ ಎಚ್ಚರಿಕೆ ಕೊಟ್ಟಿರುವ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು, ನಾಮಫಲಕಗಳಲ್ಲಿ ಶೇ. 60 ಕನ್ನಡ ಬಳಕೆ ಮಾಡಬೇಕು. ಕನ್ನಡ ಬಳಕೆ ಮಾಡದ ಮಾಲ್, ಅಂಗಡಿ, ಇತರೆ ವಾಣಿಜ್ಯ ಮಳಿಗೆಗಳ ಇಂಗ್ಲಿಷ್ ಹಿಂದಿ ನಾಮಫಲಕ ತೆರವು ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.
ಮೆರವಣಿಗೆಗೆ ಮುನ್ನ ಜತೆ ಮಾತನಾಡಿದ ಅಧ್ಯಕ್ಷ ನಾರಾಯಣ ಗೌಡ ಅವರು, ವರನಟ ರಾಜ್ ಕುಮಾರ್ ಅವರ ಗೋಕಾಕ್ ಚಳುವಳಿ ಮಾದರಿಯಲ್ಲೇ ಈ ಹೋರಾಟ ನಡೆಸುತ್ತಿದ್ದೇವೆ. ರಾಜಧಾನಿ ಬೆಂಗಳೂರು ಕನ್ನಡಿಗರ ಕೈತಪ್ಪಿ ಹೋಗುವ ಸ್ಥಿತಿಯಲ್ಲಿದೆ. ಬೇರೆ ರಾಜ್ಯಗಳಿಂದ ಬಂದಿರುವ ಅನ್ಯ ಭಾಷಿಕರು ಕನ್ನಡ ಬಳಸದೆ ಧಿಮಾಕು ಪ್ರದರ್ಶನ ಮಾಡುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಎಚ್ಚರಿಕೆ ನೀಡುವುದಕ್ಕಾಗಿ ಈ ಮೆರವಣಿಗೆ ಎಂದು ಹೇಳಿದರು.
ಪೊಲೀಸ್ ಇಲಾಖೆ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕರವೇ ಕಾರ್ಯಕರ್ತರು ಇಡೀ ಬೆಂಗಳೂರಿಗೆ ಏನು ಮಾಡುತ್ತಾರೋ ಎಂಬ ಭಯ ಸರ್ಕಾರ ಹಾಗೂ ಪೊಲೀಸರಿಗೆ ಕಾಡುತ್ತಿದೆ. ಪೊಲೀಸರು ಮತ್ತು ಜನರು ಜಾಗೃತಿ ರ್ಯಾಲಿ ಮಾಡಲು ಅವಕಾಶ ಕೊಟ್ಟರೆ ಬೆಂಗಳೂರು ಸುರಕ್ಷಿತವಾಗಿ ಇರುತ್ತದೆ. ನಮ್ಮನ್ನು ಕೆಣಕುವುದು, ಕೆರಳಿಸುವುದು ಮಾಡಿದರೆ ಹೋರಾಟದ ರೂಪ ಬದಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ನಾನು ನಮ್ಮ ಕಾರ್ಯಕರ್ತರಿಗೆ ಒಂದು ಸಂದೇಶ ಕೊಡುತ್ತಿದ್ದೇನೆ. ನಾನು ಬಂಧನಕ್ಕೆ ಒಳಗಾದರೂ ನೀವು ಯಾರು ಹೋರಾಟದಿಂದ ಹಿಂದೆ ಸರಿಯಬೇಡಿʼʼ ಎಂದು ಅವರು ಹೇಳಿದರು.
ಮೆರವಣಿಗೆ ವೇಳೆ ಯಲಹಂಕದ ಬ್ಯಾಟರಾಯನಪುರದಲ್ಲಿರುವ ಮಾಲ್ ಆಫ್ ಏಷ್ಯಾ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಾಲ್ನ ಮುಖ್ಯ ಗೇಟ್ ಬಳಿ ಪೊಲೀಸ್ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದ್ದು, ದೊಡ್ಡ ಸಂಖ್ಯೆಯ ಪೊಲೀಸ್ ಸಿಬ್ಬಂದಿ ನಿಂತಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.