ಬೆಂಗಳೂರು – ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳು ಕಳೆಯುತ್ತಾ ಬಂದಿದೆ.ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ಜನತೆಗೆ ನೀಡಿದ ಐದು ಗ್ಯಾರಂಟಿಗಳ ಭರವಸೆ ಈಡೇರಿಸಲು ಪರದಾಡುತ್ತಿದೆ.
ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಅಭಿಪ್ರಾಯ ಒಂದೆಡೆಯಾದರೆ, ಕಾಂಗ್ರೆಸ್ ಪಕ್ಷದ ವಲಯದಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಮತ್ತೊಂದು ರೀತಿಯಲ್ಲಿವೆ.
ಕೆಲವು ಮಂತ್ರಿಗಳೂ ಸೇರಿದಂತೆ ಕಾಂಗ್ರೆಸ್ ನಾಯಕರು ತಾವು ಆಡಳಿತ ಪಕ್ಷ ಎಂಬುದನ್ನೇ ಮರೆತಂತಿದೆ.ಆಡಳಿತ ನಡೆಸುತ್ತಾ ಉತ್ತರದಾಯಿ ಆಗಬೇಕಿರುವ ಕಾಂಗ್ರೆಸ್ ನಾಯಕರು ಪ್ರತಿಪಕ್ಷದಂತೆ ಇನ್ನೂ ಪ್ರಶ್ನೆ ಕೇಳುವ,ಟೀಕೆ ಮಾಡುವ,ದೂರುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಸರ್ಕಾರವಾಗಿ ತಾವೇನು ಮಾಡಬೇಕು ಹಾಗೂ ಮಾಡುತ್ತಿದ್ದೇವೆ ಎಂದು ಹೇಳುವ ಬದಲಿಗೆ ನೀವೇನು ಮಾಡಿದಿರೀ?,ಏನು ಮಾಡುತ್ತಿದ್ದೀರಿ?,ನೀವು ಯಾಕೆ ಹೀಗೆ ಎಂದು ಪ್ರಶ್ನಿಸುವುದರಲ್ಲೇ ಹೆಚ್ಚಿನ ಸಮಯ ವಿನಿಯೋಗ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳ ಪಕ್ಷದ ಅಧಿಕೃತ ಅಕೌಂಟ್ ನಲ್ಲೂ ಪ್ರತಿಪಕ್ಷಗಳ ಟೀಕೆಗೆ ಹೆಚ್ಚಿನ ಸಮಯ ವಿನಿಯೋಗ ಮಾಡಲಾಗುತ್ತಿದೆ. ಕಾರ್ಯಕರ್ತರು ಕೂಡ ಇದನ್ನೇ ಅನುಸರಣೆ ಮಾಡುತ್ತಿದ್ದಾರೆ.ಈ ಅಂಶ ಗಮನಿಸಿದಾಗ ಕಾಂಗ್ರೆಸ್ ರಾಜ್ಯದಲ್ಲಿ ಪ್ರತಿಪಕ್ಷದಲ್ಲಿದೆ ಹಾಗೂ ಚುನಾವಣೆ ಎದುರಿಸುವ ತಯಾರಿಯಲ್ಲಿದೆಯಾ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.ಈ ಸರ್ಕಾರದ ಆದ್ಯತೆಗಳೇನು?ಕಾರ್ಯಕ್ರಮಗಳು ಯಾವುವು?ಮಂತ್ರಿಗಳ ದೃಷ್ಟಿಕೋನ ಹೇಗಿದೆ?ಎಂಬ ಈ ಯಾವ ವಿಷಯಗಳ ಕುರಿತು ಕಾಂಗ್ರೆಸ್ ನ ಜಾಲತಾಣಗಳು ಮತ್ತು ಪಕ್ಷದ ನಾಯಕರು, ಕಾರ್ಯಕರ್ತರು ಸೇರಿದಂತೆ ಮಾಧ್ಯಮದ ಯಾವುದೇ ವಲಯದಲ್ಲೂ ವಿವರಣೆ ಇಲ್ಲ.
ಬದಲಿಗೆ ಬಿಜೆಪಿ ಯಾಕಿನ್ನೂ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಿಕೊಂಡಿಲ್ಲ.ಬಿಜೆಪಿ ರಾಜ್ಯಾಧ್ಯಕ್ಷ ಯಾರಾಗಲಿದ್ದಾರೆ,ಜೆಡಿಎಸ್ ನ ಮುಂದಿನ ನಡೆ ಎನು? ಕುಮಾರಸ್ವಾಮಿ ಏನು ಮಾಡಿದರು ಎಂಬ ಕುರಿತಂತೆ ಚರ್ಚೆ ನಡೆಸುತ್ತಿದ್ದಾರೆ.
ಇದರ ಹೊರತಾಗಿ ಕೆಲವು ಸಚಿವರು ಮಾತ್ರ ತಾವಾಯಿತು ತಮ್ಮ ಇಲಾಖೆಯಾಯಿತು ಎಂಬಂತಿದ್ದಾರೆ.
ಹೀಗಾಗಿ ಜನ ಸಾಮಾನ್ಯರಲ್ಲಿ ಕಾಂಗ್ರೆಸ್ ನಾಯಕರು ಯಾಕೆ ಹೀಗೆ ಎಂಬ ಪ್ರಶ್ನೆಗಳು ಮೂಡುತ್ತಿವೆ.