ರಾಜಕೀಯ ಪಂಡಿತರ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಅಧಿಕಾರ ಚುಕ್ಕಾಣಿ ಹಿಡಿಯುವ ರಾಜ್ಯ ಕಾಂಗ್ರೆಸ್ ನಲ್ಲಿ (Congress) ಇದೀಗ ಎಲ್ಲಾ ಆಯೋಮಯ.
ಸರ್ಕಾರದ ಚುಕ್ಕಾಣಿ ಹಿಡಿದವರಲ್ಲಿ ಪರಸ್ಪರ ಅಪನಂಬಿಕೆ ಎಲ್ಲರೂ ಒಟ್ಟಾಗಿದ್ದೇವೆ ಎಂದು ಸಾರಿದರೂ ಯಾರೂ ಯಾರನ್ನೂ ನಂಬಲಾರದ ಸ್ಥಿತಿ.
ಹಿಂದಿನ ಬಿಜೆಪಿ ನೇತೃತ್ವ ರಾಜ್ಯ ಸರ್ಕಾರದ ಆಡಳಿತ ವೈಖರಿಗೆ ಬೇಸತ್ತ ರಾಜ್ಯದ ಮತದಾರರು, ಕಾಂಗ್ರೆಸ್ ನಾಯಕರು ನೀಡಿದ ಭರವಸೆಗಳು ತೋರಿದ ಹೋರಾಟ, ಪ್ರದರ್ಶಿಸಿದ ಒಗ್ಗಟ್ಟನ್ನು ಕಂಡು ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಎನಿಸಬಹುದಾದ ಬಹುಮತವನ್ನು ನೀಡುವ ಮೂಲಕ ದೊಡ್ಡ ಸಂದೇಶವನ್ನು ರವಾನಿಸಿದರು.
ಜನತೆಯ ಬಾರಿ ನಿರೀಕ್ಷೆಯೊಂದಿಗೆ ಆಡಳಿತ ಚುಕ್ಕಾಣಿ ಹಿಡಿದ ಸರ್ಕಾರ ಆರು ತಿಂಗಳು ಪೂರೈಸುವುದು ಭಿನ್ನಮತದ ಒಳಸುಳಿಗೆ ಸಿಲುಕಿ ಪರದಾಡತೊಡಗಿದೆ. ಬಿಕ್ಕಟ್ಟು ಪರಿಹರಿಸಲು ಹೈಕಮಾಂಡ್ ನಾಯಕರು ರಾತ್ರೋರಾತ್ರಿ ದೆಹಲಿಯಿಂದ ದೌಡಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ವಿದ್ಯಮಾನಕ್ಕೆ ಹಿಡಿದ ಕೈಗನ್ನಡಿ.
ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಆಯ್ಕೆ ವಿಷಯವಾಗಿ ದೆಹಲಿಯಲ್ಲಿ ಅಂದು ಗಾಯ ಮುಂದೊಂದು ದಿನ ಇದು ದೊಡ್ಡ ಸ್ವರೂಪದ ರಣವಾಗಲಿದೆ ಎಂಬ ಸೂಚನೆಯನ್ನು ನೀಡಿದ್ದವು.ಆದರೆ,ಅದು ಇಷ್ಟು ಬೇಗನೆ ತನ್ನ ಪ್ರಭಾವ ತೋರಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.
ಅಂದು ಹೈಕಮಾಂಡ್ ನ ನಾಲ್ಕೈದು ಮಂದಿ ಕುಳಿತು ಚರ್ಚೆ ನಡೆಸಿ,ಮುಖ್ಯಮಂತ್ರಿ ಆಯ್ಕೆ ಹಾಗೂ ಅಧಿಕಾರ ಹಂಚಿಕೆ ಸೂತ್ರ ಅಂತಿಮಗೊಳಿಸಿದರು. ಅಂದು ಅಲ್ಲಿ ನಡೆದ ಮಾತುಕತೆ ಏನು? ಯಾವ ರೀತಿಯ ಒಪ್ಪಂದವಾಗಿದೆ ಎಂಬ ಬಗ್ಗೆ ಇಲ್ಲಿಯವರೆಗೆ ಯಾರೊಬ್ಬರೂ ಬಹಿರಂಗವಾಗಿ ಹೇಳಿಲ್ಲ.ಎರಡೂ ವರೆ ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಆನಂತರ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ ಎನ್ನುವುದು ಕೇವಲ ಅಂತೆ- ಕಂತೆಗಳಷ್ಟೆ.
ಅಂದು ಮುಖ್ಯಮಂತ್ರಿ ಆಯ್ಕೆ ವಿಷಯಗಳ ಹಗ್ಗ- ಜಗ್ಗಾಟ ನಡೆಯುತ್ತಿದ್ದಾಗ ತಮ್ಮ ಸೋದರನ ಪರ ಧ್ವನಿ ಎತ್ತಿದ ಸಂಸದ ಡಿ.ಕೆ.ಶಿವಕುಮಾರ್ ಅವರ ಬಾಯಿಗೆ ಹೈಕಮಾಂಡ್ ಬೀಗ ಹಾಕಿತು. ಅಷ್ಟೇ ಅಲ್ಲ ಈ ವಿಚಾರವಾಗಿ ಯಾರೊಬ್ಬರೂ ಮಾತನಾಡದಂತೆ ಬೀಗ ಹಾಕಿತ್ತು. ಆದರೂ,ಮಂತ್ರಿಗಳು ಸೇರಿದಂತೆ ಅಲ್ಲೊಬ್ಬರು ಇಲ್ಲೊಬ್ಬರು ಮಾತನಾಡಿದರೂ ಅದು ಅಷ್ಟೊಂದು ತೀವ್ರ ಸ್ವರೂಪ ಪಡೆದುಕೊಂಡಿರಲಿಲ್ಲ.
ಆದರೆ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಯಾವಾಗ ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಯ ಪ್ರಸ್ತಾಪ ಮಾಡಿ ಅದಕ್ಕೆ ಸತೀಶ್ ಜಾರಕಿಹೊಳಿ, ಡಾ.ಪರಮೇಶ್ವರ್ ಸೇರಿ ಹಲವರ ಬೆಂಬಲ ಸಿಕ್ಕಿತೋ ಅಂದೇ ಇದು ಬೇರೆಯೇ ಆದ ಸ್ವರೂಪ ಪಡೆದುಕೊಂಡಿತು.ಈ ಹೇಳಿಕೆ ಮುಂದೆ ನಡೆಯಬಹುದಾದ ವಿದ್ಯಮಾನಗಳಿಗೆ ದಿಕ್ಸೂಚಿಯಾಗಿತ್ತು.ಇದು ಎಲ್ಲಿಯಾದರೂ ತೀವ್ರ ಸ್ವರೂಪ ಪಡೆಯಬಹುದು ಎಂದು ಎಚ್ಚರಿಕೆ ವಹಿಸಿದ ಹೈಕಮಾಂಡ್ ಈ ಬಗ್ಗೆ ಮಾತನಾಡದಂತೆ ರಾಜಣ್ಣ ಸೇರಿದಂತೆ ಎಲ್ಲಾ ಮಂತ್ರಿಗಳಿಗೂ ಬಾಯಿಗೆ ಹೊಲಿಗೆ ಹಾಕಿತು.
ಇಲ್ಲೊಂದು ಗಮನಿಸಬೇಕಾದ ಅಂಶವೆಂದರೆ ಅಧಿಕಾರ ಹಂಚಿಕೆ ಕುರಿತಾಗಿ ಮಂತ್ರಿಗಳು, ಹಿರಿಯ ನಾಯಕರ ನಡುವೆ ಹಲವಾರು ರೀತಿಯ ಚರ್ಚೆ ನಡೆಯುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಎಲ್ಲಿಯೂ ತಮ್ಮ ಅಭಿಪ್ರಾಯ ತಿಳಿಸಲಿಲ್ಲ.
ಆದರೆ ಇದೀಗ ಏಕಾಏಕಿ ರಂಗ ಪ್ರವೇಶಿಸಿದ ಅವರು ಪೂರ್ಣ ಅವಧಿಗೆ ತಾವೇ ಮುಖ್ಯಮಂತ್ರಿ ಎಂದು ಹೇಳಿದ್ದಾರೆ .
ಇದಕ್ಕೆ ಪ್ರಮುಖ ಕಾರಣ ಇದೆ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಗಣಿಗ ರವಿಕುಮಾರ್, ಶಿವಗಂಗಾ ಬಸವರಾಜ್, ಉದಯ್ ಗೌಡ ಅವರುಗಳು ಮಾತನಾಡಿ ಎರಡೂವರೆ ವರ್ಷಗಳ ಅಧಿಕಾರ ಅವಧಿಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಆ ಹುದ್ದೆಗೆ ಸದ್ಯ ಉಪಮುಖ್ಯಮಂತ್ರಿ ಯಾಗಿರುವ ಡಿಕೆ ಶಿವಕುಮಾರ್ ನೇಮಕಗೊಳ್ಳಲಿದ್ದಾರೆ ಎಂದು ಹೇಳಿದ್ದರು.
ಇದು ಸಿದ್ದರಾಮಯ್ಯ ಅವರಮ್ಮ ಕೆರಳುವಂತೆ ಮಾಡಿದೆ.ಯಾರಾದರೂ ಹಿರಿಯ ಶಾಸಕ ಅಥವಾ ನಾಯಕರು ಈ ಮಾತು ಹೇಳಿದ್ದರೇ ಸಿಎಂ ಸಿದ್ದರಾಮಯ್ಯ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.
ಆದರೆ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿರುವ ಈ ಮೂವರು ಶಾಸಕರು ಡಿಕೆ ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಶಿವಕುಮಾರ್ ಅವರೇ ಇಂತಹ ಹೇಳಿಕೆ ನೀಡಲು ಅವರಿಗೆ ಪ್ರಚೋದನೆ ನೀಡಿದ್ದಾರೆ ಎಂಬುದು ಸಿಎಂ ಸಿದ್ದರಾಮಯ್ಯ ಅವರ ನಂಬಿಕೆಯಾಗಿದೆ. ಅಲ್ಲದೆ, ಈ ಹಿಂದೆ ಶಿವಗಂಗಾ ಬಸವರಾಜ ಅವರು ಮುಖ್ಯಮಂತ್ರಿಗಳಿಗೆ ಪತ್ರವೊಂದು ನೀಡಿ ತಾವು ಶಾಸಕರಾಗಿದ್ದರೂ ತಮ್ಮ ಯಾವುದೇ ಕೆಲಸಗಳು ಸರ್ಕಾರದಲ್ಲಿ ಆಗುತ್ತಿಲ್ಲ ಅಧಿಕಾರಿಗಳು ತಮ್ಮ ಪತ್ರಕ್ಕೆ ಕಿಂಚಿತ್ತು ಗೌರವ ನೀಡುವುದಿಲ್ಲ ಅದರ ಬದಲಿಗೆ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಇಲ್ಲವೇ ವಿಶೇಷ ಕಾರ್ಯದರ್ಶಿ ಆಗಿದ್ದರೆ ಈ ಎಲ್ಲ ಪತ್ರಗಳಿಗೂ ಮುಕ್ತಿ ಸಿಗುತ್ತಿತ್ತು.ತಾವು ಹೇಳಿದ ಕೆಲಸಗಳು ಆಗುತ್ತಿದ್ದವು. ಹೀಗಾಗಿ ತಮ್ಮನ್ನು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಎಂದು ನೇಮಕ ಮಾಡಬೇಕು ಎಂಬ ಪತ್ರವನ್ನು ಶಾಸಕಾಂಗ ಸಭೆಯಲ್ಲಿ ನೀಡುವ ಮೂಲಕ ಗಮನ ಸೆಳೆದಿದ್ದರು.
ಅಂದಿನಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಶಿವಗಂಗಾ ಬಸವರಾಜ್ ಎಂದರೆ ಅಷ್ಟಕಷ್ಟೇ.ಈ ರೀತಿಯ ಪತ್ರ ನೀಡಲು ಶಿವಕುಮಾರ್ ಅವರ ಒತ್ತಾಸೆ ಇತ್ತು ಎಂಬುದು ಸಿಎಂ ಅವರ ಅನಹೊರತಾಗಿ ರಾಜ್ಯದಲ್ಲಿ ಇದ್ದ ಕಾಂಗ್ರೆಸ್ (Congress) ಪರವಾದ ಅಲೆ ಮತ್ತು ತಮ್ಮ ಪರವಾಗಿ ಕೇಳಿಬರುತ್ತಿದ್ದ ಜನಾಭಿಪ್ರಾಯದಿಂದ ಈ ಮೂವರೂ ಮೊದಲಬಾರಿಗೆ ಶಾಸಕರಾಗಿದ್ದಾರೆ. ಈ ರೀತಿಯಲ್ಲಿ ಆಯ್ಕೆಯಾಗಿ ಬಂದಿರುವ ಶಾಸಕರು ತಮ್ಮ ಅಧಿಕಾರ ಅವಧಿಯ ಬಗ್ಗೆ ಮಾತನಾಡುತ್ತಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.
ಹೀಗಾಗಿಯೇ ಅವರು ಪೂರ್ಣ ಅವಧಿಗೆ ತಾವೇ ಮುಖ್ಯಮಂತ್ರಿ ಎಂಬ ಹೇಳಿಕೆ ನೀಡಿರುವುದು.ಇದರ ಹೊರತಾಗಿ,ಸಿದ್ದರಾಮಯ್ಯ ಅವರು ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿರಲಿದ್ದಾರೆ ಆನಂತರ ಪದತ್ಯಾಗ ಮಾಡಬೇಕು ಎನ್ನುವುದು ಹೈಕಮಾಂಡ್ ರೂಪಿಸಿರುವ ಸೂತ್ರ. ಇದಕ್ಕೆ ಸಮ್ಮತಿಸಿರುವ ಸಿದ್ದರಾಮಯ್ಯ ತಮ್ಮ ನಂತರ ಯಾರು ಎಂಬ ವಿಷಯದ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದಾರೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಶಿವಕುಮಾರ್ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಕಾರ್ಯ ನಿರ್ವಹಿಸುವ ವೇಳೆ ಹಲವಾರು ವಿಷಯಗಳಲ್ಲಿ ಉಭಯತ್ರಯರ ನಡುವೆ ಇದ್ದ ಭಿನ್ನಮತ ಜಗಜ್ಜಾಹೀರು. ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಇಲ್ಲಿಯವರೆಗೆ ನಡೆದಿರುವ ಬೆಳವಣಿಗೆಗಳನ್ನು ಗಮನಿಸಿದಾಗ ಇಬ್ಬರ ನಡುವೆ ಅಂತಹ ಹೊಂದಾಣಿಕೆ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಈ ಎಲ್ಲಾ ಬೆಳವಣಿಗೆಗಳನ್ನು ಅವಲೋಸಿದಾಗ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಶಿವಕುಮಾರ್ ಅವರ ಕೈ ಮೇಲಾಗಲು ಬಿಡುತ್ತಿಲ್ಲ. ಅದಕ್ಕಾಗಿ ಅವರು ತಮ್ಮ ಆಪ್ತಮಂತ್ರಿ ರಾಜಣ್ಣ ಅವರ ಮೂಲಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತ ಮತ್ತು ಲಿಂಗಾಯತ ಸಮುದಾಯಕ್ಕೆ ತಲಾ ಒಂದೊಂದು ಉಪಮುಖ್ಯಮಂತ್ರಿ ಹುದ್ದೆ ಸಿಗಬೇಕು ಎಂಬ ವಾದ ಮಂಡಿಸುವಂತೆ ಮಾಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಈ ಸಮುದಾಯದ ಮತದಾರರು ಕಾಂಗ್ರೆಸ್ ಬೆಂಬಲಿಸಿದ್ದು ಅವರಿಗೆ ಮಾನ್ಯತೆ ನೀಡಬೇಕು. ಈ ಮೂಲಕ ಕಾಂಗ್ರೆಸ್ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳಬೇಕು ಎಂಬ ಸಮರ್ಥನೆ.
ಆದರೆ, ಇದರ ಹಿಂದಿನ ಒಳಗುಟ್ಟು ಬೇರೇಯೇ ಇದೆ.
ಸದ್ಯ ಇರುವ ಏಕೈಕ ಉಪಮುಖ್ಯಮಂತ್ರಿ ಎನ್ನುವ ಬದಲಿಗೆ ನಾಲ್ಕೈದು ಉಪಮುಖ್ಯಮಂತ್ರಿಗಳು ಬರುವ ಮೂಲಕ ಪರ್ಯಾಯ ಅಧಿಕಾರ ಶಕ್ತಿ ಕೇಂದ್ರಗಳು, ಉದ್ಭವಿಸಲಿ ಎನ್ನುವುದು ಅವರ ಲೆಕ್ಕಾಚಾರ. ಈ ಮೂಲಕ ಶಿವಕುಮಾರ್ ಅಧಿಕಾರ ಕ್ಕೆ ಕತ್ತರಿ ಹಾಕಬೇಕು ಎನ್ನುವುದು ಅವರ ಕಾರ್ಯತಂತ್ರ.
ಮತ್ತೊಂದೆಡೆ ಹೈಕಮಾಂಡ್ ಅಧಿಕಾರ ಹಂಚಿಕೆ ಸೂತ್ರದಂತೆ ಎಲ್ಲವೂ ನಡೆದರೆ ತಮ್ಮಿಂದ ತೆರವಾಗುವ ಸ್ಥಾನಕ್ಕೆ ತಾವು ಬಯಸುವ ವ್ಯಕ್ತಿಯೇ ಮುಖ್ಯಮಂತ್ರಿ ಆಗಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿಯುತ್ತಾರೆ. ಇದಕ್ಕಾಗಿ ರಣತಂತ್ರ ರೂಪಿಸಿರುವ ಅವರು ತಮ್ಮ ರಾಜೀನಾಮೆ ನಂತರ ದಲಿತ ಸಮುದಾಯಕ್ಕೆ ಈ ಹುದ್ದೆ ಸಿಗಬೇಕು ಎಂದು ವಾದ ಮಂಡಿಸುತ್ತಾರೆ ಅದಕ್ಕಾಗಿ ಅವರ ಮುಂದೆ ಇರುವ ಏಕೈಕ ಅರ್ಹ ಆಯ್ಕೆ ಡಾ. ಜಿ ಪರಮೇಶ್ವರ್.
ಕಳೆದ 2013ರಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಗಿದ್ದ ಪರಮೇಶ್ವರ್. ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದರು.ಹೈಕಮಾಂಡ್ ಕೂಡಾ ಪರಮೇಶ್ವರ್ ಅವರ ಪರವಾಗಿತ್ತು. ಆದರೆ ಅಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಅವರು ಸೋತ ಪರಿಣಾಮ ಸಿದ್ದರಾಮಯ್ಯ ಅವರ ಹಾದಿ ಸುಗಮವಾಗಿತ್ತು.
ಹೀಗಾಗಿ ಸಿದ್ದರಾಮಯ್ಯ ಅವರು ಅಂದು ತಮ್ಮಿಂದ ಉನ್ನತ ಹುದ್ದೆ ವಂಚಿತರಾದ ಪರಮೇಶ್ವರ್ ಅವರಿಗೆ ಈಗ ಉನ್ನತ ಹುದ್ದೆ ಕೊಡಿಸಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ. ಪರಮೇಶ್ವರ್ ಅವರನ್ನು ಮುಂದಿಟ್ಡು ಶಿವಕುಮಾರ್ ಅವರನ್ನು ಕಟ್ಟಿ ಹಾಕಬಹುದು ಎಂಬ ಲೆಕ್ಕಾಚಾರ ಹಾಕಿದ್ದಾರೆ.
ರಾಜ್ಯದಲ್ಲಿ ದಲಿತ ಸಮುದಾಯದವರೊಬ್ಬರು ಮುಖ್ಯಮಂತ್ರಿ ಆಗಬೇಕು ಎಂಬ ವಾದವಿದೆ. ಪರಮೇಶ್ವರ್ ಅವರಿಗೆ ಈ ವಿಷಯವಾಗಿ ಅನ್ಯಾಯವಾಗಿದೆ ಅವರಿಗೊಂದು ಅವಕಾಶ ಸಿಗಬೇಕು ಎನ್ನುವುದು ಸಾರ್ವತ್ರಿಕವಾಗಿ ಕೇಳಿ ಬರುತ್ತಿರುವ ಅಭಿಪ್ರಾಯ.
ಇದರ ಜೊತೆಯಲ್ಲಿ ಹಲವು ಶಾಸಕರು ಕೂಡ
ಈಗ ಪರಮೇಶ್ವರ್ ಪರ ವಲವು ವ್ಯಕ್ತಪಡಿಸುತ್ತಿದ್ದು ಹೈಕಮಾಂಡ್ ಕೂಡ ಪರಮೇಶ್ವರ್ ಗೆ ಉನ್ನತ ಹುದ್ದೆ ಸಿಗಬೇಕು ಎಂಬ ಅಭಿಪ್ರಾಯವೊಂದಿರುವುದನ್ನು ಸಿದ್ದರಾಮಯ್ಯ ತಮ್ಮ ರಾಜಕೀಯ ತಂತ್ರಗಾರಿಕೆಗೆ ಬಳಸಲು ಮುಂದಾಗಿದ್ದಾರೆ.
ಹೀಗಾಗಿ ತುಮಕೂರು ಜಿಲ್ಲಾ ರಾಜಕಾರಣಕ್ಕೆ ಸಂಬಂಧಿಸಿದಂತೆ ಪರಮೇಶ್ವರ್ ಅವರೊಂದಿಗೆ ಇದ್ದ ಮುನಿಸಿಗೆ ತಿಲಾಂಜಲಿ ಹಾಡಿರುವ ಮಂತ್ರಿ ರಾಜಣ್ಣ ಅವರು ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಪರಮೇಶ್ವರ್ ಪರ ಅಭಿಪ್ರಾಯ ಮೂಡಿಸುವಲ್ಲಿ ನೀರತರಾಗಿದ್ದಾರೆ ರಾಜಣ್ಣ ಅವರ ಇಂತಹ ಪ್ರತಿಯೊಂದು ನಡೆಯ ಹಿಂದೆ ಸಿದ್ದರಾಮಯ್ಯ ಅವರ ನೆರಳಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.
ಇಂತಹ ಬೆಳವಣಿಗೆ ನಡೆದಿರುವ ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಮೂವರು ಶಾಸಕರು ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಹೇಳಿಕೆ ನೀಡುತ್ತಿದ್ದಂತೆ ಸಿದ್ದರಾಮಯ್ಯ ವಿದ್ಯಮಾನದ ಅಖಾಡಕ್ಕೆ ಧುಮುಕಿದರು. ಬೆಳಗಾವಿ ಜಿಲ್ಲೆ ರಾಜಕಾರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಅವರೊಂದಿಗೆ ಸಮರ ಸಾರಿರುವ ಲೋಕೋಪಯೋಗಿ ಸಚಿವ ಹಾಗೂ ತಮ್ಮ ಆಪ್ತ ಸತೀಶ್ ಜಾರಕಿಹೊಳಿ ಮೂಲಕ ಮತ್ತೊಂದು ಸುತ್ತಿನ ತಂತ್ರಗಾರಿಕೆಯನ್ನು ಆರಂಭಿಸಿದರು. ಹೈಕಮಾಂಡ್ ಮಟ್ಟದಲ್ಲಿ ಸತೀಶ್ ಜಾರಕಿಹೊಳಿ ಕೂಡ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ ಇದನ್ನು ಬಳಸಿಕೊಂಡಿರುವ ಸಿದ್ದರಾಮಯ್ಯ ಇದೀಗ ಶಿವಕುಮಾರ್ ಅವರಿಗೆ ಬುದ್ಧಿ ಕಲಿಸಲು ಮುಂದಾಗಿದ್ದಾರೆ ಶಿವಕುಮಾರ್ ಬೆಂಬಲಿಗ ಶಾಸಕರ ಹೇಳಿಕೆ ಬೆನ್ನಲ್ಲೇ ಸಿಎಂ ಗೃಹ ಮಂತ್ರಿ ಪರಮೇಶ್ವರ್ ಅವರ ನಿವಾಸಕ್ಕೆ ತಮ್ಮ ಬೆಂಬಲಿಗ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಮಹದೇವಪ್ಪ ಅವರೊಂದಿಗೆ ತೆರಳಿ ಭೋಜನಕೂಟ ನಡೆಸಿದರು ಈ ಮೂಲಕ ಡಿ.ಕೆ ಶಿವಕುಮಾರ್ ಎಂಬ ಒಕ್ಕಲಿಗ ಅಸ್ತ್ರಕ್ಕೆ ದಲಿತ ಎಂಬ ಬಳಸಲು ಸಜ್ಜುಗೊಂಡಿದ್ದಾರೆ.
ಅಷ್ಟೇ ಅಲ್ಲ , ಒಂದು ವೇಳೆ ತಮ್ಮ ಈ ಲೆಕ್ಕಾಚಾರ ಏನಾದರೂ ತಲೆಕೆಳಗಾಗುತ್ತದೆ ಎನಿಸಿದರೆ ಲಿಂಗಾಯತ ಅಲ್ಪಸಂಖ್ಯಾತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನಾಲ್ವರನ್ನು ಉಪಮುಖ್ಯಮಂತ್ರಿ ಮಾಡಿ ತಮ್ಮೊಂದಿಗೆ ಇಟ್ಟುಕೊಳ್ಳುವ ಮೂಲಕ ಶಿವಕುಮಾರ್ ಅವರ ರೆಕ್ಕೆ ಪುಕ್ಕ ಕತ್ತರಿಸುವ ಪ್ರಯತ್ನ ಮಾಡಲಿದ್ದಾರೆ ಅದು ಸಾಧ್ಯವಾಗಲಿಲ್ಲ ಎಂದರೆ ರಾಜಸ್ಥಾನದಲ್ಲಿ ಈ ಹಿಂದೆ ನಡೆದ ವಿದ್ಯಮಾನಗಳು ಕರ್ನಾಟಕದಲ್ಲೂ ಮರುಕಳಿಸಿದರು ಆಶ್ಚರ್ಯ ಇಲ್ಲ ಇದಕ್ಕೆ ಕಾರಣ ಇಷ್ಟೇ ಎಲ್ಲ ಶಾಸಕರನ್ನು ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗುತ್ತಿದ್ದು ನಾಯಕತ್ವ ಬದಲಾವಣೆ ಸಮಯದಲ್ಲಿ ಶಾಸಕರ ಅಭಿಪ್ರಾಯ ಕೇಳಬೇಕೆಂಬ ವಾದ ವ್ಯಕ್ತವಾದರೆ ಅಲ್ಲಿಯೂ ತಾವು ಜಯಗಳಿಸಬೇಕು ಎನ್ನುವ ದೂರಾಲೋಚನೆ ಹೊಂದಿದ್ದಾರೆ ಹೀಗಾಗಿ ಕರ್ನಾಟಕ ಕಾಂಗ್ರೆಸ್ ವಿದ್ಯಮಾನ ತೀವ್ರ ಕುತೂಹಲಕರ ಘಟ್ಟದಲ್ಲಿದೆ.