ಬೆಂಗಳೂರು, ಸೆ.7 – ಹಿಂದೂ ಧರ್ಮದ (Hinduism) ಕುರಿತಂತೆ ಗೃಹ ಸಚಿವ ಪರಮೇಶ್ವರ್ ನೀಡಿರುವ ಹೇಳಿಕೆ ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಪರ-ವಿರೋಧದ ಟೀಕೆಗೂ ವೇದಿಕೆ ಸೃಷ್ಟಿಸಿದೆ.ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಪರಮೇಶ್ವರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿದ್ದಾರೆ.
ಜಗತ್ತಿನಲ್ಲಿ ಇಸ್ಲಾಂ, ಜೈನ ಸೇರಿದಂತೆ ಹಲವು ಧರ್ಮಗಳಿವೆ ಇವುಗಳಿಗೆ ಸಂಸ್ಥಾಪಕರು ಹಾಗೂ ಕಾಲಧರ್ಮಗಳಿವೆ. ಹಿಂದೂ ಧರ್ಮಕ್ಕೆ ಅದಿಲ್ಲ ಎಂದು ಜನ ಕೇಳುತ್ತಾರೆ. ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದೇನೆ. ಅಷ್ಟಕ್ಕೇ ಬೊಬ್ಬೆ ಹೊಡೆದರೆ ನಾನು ಏನು ಹೇಳಲು ಸಾಧ್ಯ ಎಂದರು.
ಹಿಂದು ಧರ್ಮದ (Hinduism) ಬಗ್ಗೆ ನಾನು ಅವಹೇಳನಕಾರಿಯಾಗಿ ಮಾತನಾಡಿದ್ದೇನೆಯೇ ಹಿಂದೂ ಧರ್ಮ ಯಾವಾಗ ಹುಟ್ಟಿತು ಎಂಬುದನ್ನು ನಾನು ಪ್ರಶ್ನೆ ಮಾಡಿದ್ದೇನೆ. ಅದನ್ನು ಪದೆ ಪದೆ ಪ್ರಸ್ತಾಪಿಸುವ ಅಗತ್ಯವಿಲ್ಲ. ಅದೇ ಉದ್ಯೋಗವೂ ಅಲ್ಲ. ಸರ್ವಪಲ್ಲಿ ರಾಧಾಕೃಷ್ಣ ಅವರು ಈ ದೇಶದಲ್ಲಿ ಹುಟ್ಟಿದ ಧರ್ಮಗಳ ಬಗ್ಗೆ ಹೋಲಿಕೆಯಾತ್ಮಕ ಅಧ್ಯಯನ ಮಾಡಿದ್ದಾರೆ ಬೇಕಾದವರು ಅದನ್ನು ಓದಲಿ ಎಂದು ಸಲಹೆ ಮಾಡಿದರು.
ಧರ್ಮದ ಬಗ್ಗೆ ನಮಗಿರುವ ಗೌರವ ಅವರಿಗಿದೆಯೇ, ಈ ರೀತಿಯ ವ್ಯಾಖ್ಯಾನಗಳು ಅನಗತ್ಯ.ತಾವು ಬೆಳಿಗ್ಗೆ ಏಳುವಾಗ ಮತ್ತು ರಾತ್ರಿ ಮಲಗುವಾಗ ಶ್ಲೋಕಗಳನ್ನು ಪಠಿಸುವ ರೂಢಿ ಇಟ್ಟುಕೊಂಡಿದ್ದೇನೆ. ಹಿಂದೂ ಧರ್ಮದ ಬಗ್ಗೆ ಬಿಜೆಪಿಯವರಿಗಿಂತಲೂ ನಮಗೆ ಹೆಚ್ಚು ಗೌರವ ಇದೆ. ಧರ್ಮದ ಬಗ್ಗೆ ಅವರಿಂದ ಪಾಠ ಕಲಿಯಬೇಕಿಲ್ಲ ಎಂದರು.
ಹಿಂದೂ ಧರ್ಮವನ್ನು (Hinduism) ನಾನು ಎಂದಿಗೂ ಬೇರೆ ರೀತಿ ಅರ್ಥೈಸಿಲ್ಲ. ನಾವೆಲ್ಲಾ ಹಿಂದೂಗಳೆ. ಬೆಳಿಗ್ಗೆ ಎದ್ದು ಗಣಪತಿಯನ್ನು ಸ್ಮರಿಸಿಕೊಳ್ಳುತ್ತೇವೆ. ಪ್ರತಿದಿನವೂ ತಾವು ಕರಾಗ್ರೆ ವಸತೇಲಕ್ಷ್ಮಿ, ಕರಮಧ್ಯೆ ಸರಸ್ವತಿ, ಕರಮೂಲೆ ಸ್ಥಿತಾಗೌರಿ, ಪ್ರಭಾತೆ ಕರದರ್ಶನಂ ಎಂಬ ಶ್ಲೋಕವನ್ನು ಪಠಿಸುತ್ತಲೇ ಮುಂಜಾನೆ ಏಳುತ್ತೇನೆ. ಮಲಗುವಾಗ ರಾಮಸ್ಕಂದಂ ಹನುಮಂತಂ, ವೈನತೆ ಋಕೋದರ, ಶಯನೇನ ಸ್ಮರೇನಿತ್ಯಂ, ದುಸ್ವಪ್ನಂ ತಸ್ಯನಸ್ಯತಿ ಶ್ಲೋಕವನ್ನು ಹೇಳುತ್ತೇವೆ ನನ್ನನ್ನು ಟೀಕಿಸುವವರು ಇದನ್ನು ಹೇಳುತ್ತಾರೆಯೇ ಎಂದು ಕೇಳಿದರು.
ಹಿಂದೂ ಧರ್ಮದಲ್ಲೂ ಸಮಾನತೆ ಇರಬೇಕೆಂದೇ ಎಲ್ಲರೂ ಕೇಳುವುದು. ಸಂವಿಧಾನದ ಪ್ರಥಮ ಪುಟದ ಪೀಠಿಕೆಯಲ್ಲಿಯೇ ಸಮಾನತೆ, ನ್ಯಾಯ, ಒಕ್ಕೂಟ ವ್ಯವಸ್ಥೆ ಇರಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಬರೆದಿದ್ದಾರೆ. ಈ ಪದಗಳು ಬಿಜೆಪಿಯವರಿಗೆ ಸರಿಕಾಣಿಸುವುದಿಲ್ಲ ಎಂದು ಲೇವಡಿ ಮಾಡಿದರು. ಬಿಜೆಪಿಯವರಿಗೆ ಧರ್ಮದ ಹೆಸರಿನಲ್ಲೇ ರಾಜಕಾರಣ ಮಾಡುವುದೇ ಉದ್ಯೋಗ. ಅಭಿವೃದ್ಧಿ ವಿಷಯದಲ್ಲಿ ಮಾತನಾಡುವುದು ಅವರಿಗೆ ಗೊತ್ತಿಲ್ಲ ಎಂದರು.