ಬೆಂಗಳೂರು – ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ನಾಯಕತ್ವದ ವಿರುದ್ಧ ಬಂಡಾಯ ಸಾರಿ ಕಾಂಗ್ರೆಸ್ ಸೇರ್ಪಡೆಯಾದ ಜಗದೀಶ್ ಶೆಟ್ಟರ್ ಇದೀಗ ಲೋಕಸಭೆ ಚುನಾವಣೆ ಸನಿಹದಲ್ಲಿರುವಾಗ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ.
ಸಂಭಾವಿತ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಈ ನಡೆ ರಾಜ್ಯ ರಾಜಕೀಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಶೆಟ್ಟರ್ ಅವರನ್ನು ಕೈ ನಾಯಕರು ಗೌರವಾದರಗಳಿಂದ ನೋಡಿಕೊಳ್ಳುತ್ತಿದ್ದರು ಆದರೆ ಅಧಿಕಾರದ ಆಸೆಗೆ ಸಿಕ್ಕ ಶೆಟ್ಟರ್ ಪಕ್ಷಾಂತರ ಮಾಡಿದ್ದಾರೆ ಎನ್ನಲಾಗುತ್ತಿದೆ.
ಆದರೆ ಇದರ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಅವರ ಪಕ್ಷಾಂತರಕ್ಕೆ ಅಸಲಿ ಕಾರಣ ಬೆಳಕಿಗೆ ಬಂದಿದೆ.ಅದೇನೆಂದರೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಜಗದೀಶ್ ಶೆಟ್ಟರ್ ಬಿಜೆಪಿಯಲ್ಲಿರುವ ಅನೇಕ ಮಂದಿ ತಮ್ಮ ಬೆಂಬಲಿಗರನ್ನು ಕಾಂಗ್ರೆಸ್ ಸೇರ್ಪಡೆ ಮಾಡಲು ಪ್ರಯತ್ನ ನಡೆಸಿದ್ದರು. ಅದರಲ್ಲೂ ಮಾಜಿ ಸಚಿವ ಶಂಕರ ಪಾಟೀಲ ಮುನ್ನೇನಕೊಪ್ಪ ಸೇರಿದಂತೆ ಅನೇಕರು ಶೆಟ್ಟರ್ ಹಾದಿ ತುಳಿಯಲು ಸಜ್ಜುಗೊಂಡಿದ್ದರು. ಆದರೆ ಇಂತಹ ಶೆಟ್ಟರ್ ಏಕಾಏಕಿ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದರು
ಬಿಜೆಪಿಯಲ್ಲಿ ಪ್ರಾಬಲ್ಯ ಗ ಸಾಧಿಸಿರುವ ಬಿ .ಎಲ್. ಸಂತೋಷ್ ಅವರನ್ನು ಮಣಿಸಲು ತಯಾರಿ ನಡೆಸಿದ ಜಗದೀಶ್ ಶೆಟ್ಟರ್ ಹಲವರನ್ನು ಕಾಂಗ್ರೆಸ್ಸಿಗೆ ಕರೆ ತರಲು ಪ್ರಯತ್ನ ನಡೆಸಿ ಈ ಕುರಿತಂತೆ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದರು.
ಈ ವೇಳೆ ಡಿಕೆ ಶಿವಕುಮಾರ್ ಅವರು ತಮ್ಮೊಂದಿಗೆ ಕಾಂಗ್ರೆಸ್ಸಿಗೆ ಬರುತ್ತಿರುವ ಬಿಜೆಪಿ ನಾಯಕರು ಕಿತ್ತೂರು ಕರ್ನಾಟಕ ಪ್ರದೇಶಕ್ಕೆ ಸೇರಿದವರಾಗಿದ್ದಾರೆ ಈ ಪ್ರದೇಶಕ್ಕೆ ಸತೀಶ್ ಜಾರಕಿಹೊಳಿ ಅವರು ಹಿರಿಯ ನಾಯಕರಾಗಿದ್ದು ಪಕ್ಷದ ಕಾರ್ಯಾಧ್ಯಕ್ಷರಾಗಿದ್ದಾರೆ. ಈ ವಿಷಯದಲ್ಲಿ ಅವರ ತೀರ್ಮಾನವೇ ಅಂತಿಮ. ಹೀಗಾಗಿ ತಾವು ಅವರೊಂದಿಗೆ ಮಾತುಕತೆ ನಡೆಸಬೇಕು ಎಂದು ಹೇಳಿದರು.
ಶಿವಕುಮಾರ್ ಅವರ ಸೂಚನೆಯಂತೆ ಜಗದೀಶ್ ಶೆಟ್ಟರ್ ಅವರು ಸತೀಶ್ ಜಾರಕಿಹೊಳಿ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದರಾದರೂ ಅವರಿಂದ ಅಂತಹ ಸಕಾರಾತ್ಮಕ ಪ್ರತಿಕ್ರಿಯೆ ಹೊರಬೀಳಲಿಲ್ಲ ಎನ್ನಲಾಗಿದೆ. ಇದು ಜಗದೀಶ್ ಶೆಟ್ಟರ್ ಅವರ ಉತ್ಸಾಹಕ್ಕೆ ತಣ್ಣೀರೇರಚಿತು ಎಂದು ಉನ್ನತ ಮೂಲಗಳು ತಿಳಿಸಿವೆ.
ಇದಾದ ನಂತರ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಚಿಕ್ಕೋಡಿ ಧಾರವಾಡ ಮತ್ತು ಹಾವೇರಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಮತ್ತು ಕಾರ್ಯತಂತ್ರದ ಕುರಿತು ಸತೀಶ್ ಜಾರಕಿಹೊಳಿ ಅವರೊಂದಿಗೆ ಮಾತುಕತೆ ನಡೆಸಲು ಯತ್ನಿಸಿದರು. ಇದಕ್ಕೂ ಅವರಿಂದ ನಿರೀಕ್ಷಿತ ಫಲಿತಾಂಶ ಬರಲಿಲ್ಲ ಎಂದು ಹೇಳಲಾಗಿದೆ.
ಅದರಲ್ಲೂ ಬೆಳಗಾವಿ ಲೋಕಸಭಾ ಚುನಾವಣೆ ಕಾರ್ಯತಂತ್ರ ಮತ್ತು ಅಭ್ಯರ್ಥಿ ಆಯ್ಕೆ ಕುರಿತಂತೆ ಜಗದೀಶ್ ಶೆಟ್ಟರ್ ಸ್ಪಷ್ಟ ನಿರ್ಧಾರದೊಂದಿಗೆ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಕೇಳಿದಾಗ ತಾವು ಈಗಾಗಲೇ ತೀರ್ಮಾನ ತೆಗೆದುಕೊಂಡಿದ್ದೇವೆ ಚಿಕ್ಕೋಡಿಯಿಂದ ಲಿಂಗಾಯಿತ ಸಮುದಾಯಕ್ಕೆ ಸೇರಿದವರು ಮತ್ತು ಬೆಳಗಾವಿಯಿಂದ ಕುರುಬ ಸಮುದಾಯಕ್ಕೆ ಸೇರಿದವರನ್ನು ಅಭ್ಯರ್ಥಿ ಮಾಡುತ್ತೇವೆ ಎಂದು ಖಡಾ ಖಂಡಿತವಾಗಿ ಹೇಳಿದರೆನ್ನಲಾಗಿದೆ.
ಇದರಿಂದ ಬೇಸರವಾದರೂ ಅದನ್ನು ತೋರ್ಪಡಿಸಿಕೊಳ್ಳದೆ ಶೆಟ್ಟರ್ ಅವರು ಈ ವಿಷಯದಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ವಸ್ತುಸ್ಥಿತಿ ತಿಳಿಸಿ ಮನವರಿಕೆ ಮಾಡಿಕೊಡಲು ಪ್ರಯತ್ನ ನಡೆಸಿದ್ದಾರೆ. ಬೆಳಗಾವಿಯಲ್ಲಿ ಲಿಂಗಾಯತ ಸಮುದಾಯದವರಿಗೆ ಟಿಕೆಟ್ ನೀಡಿದರೆ ಗೆಲುವು ಸುಲಭವಾಗಲಿದೆ ಕಾಂಗ್ರೆಸ್ ಪಕ್ಷ ಬಯಸುವುದಾದರೆ ಹಾಲಿ ಸಂಸದರಾದ ಮಂಗಳ ಅಂಗಡಿ ಅವರು ಕಾಂಗ್ರೆಸ್ ಸೇರಲಿದ್ದಾರೆ ಪಕ್ಷ ಅವರ ಪುತ್ರಿ ಶ್ರದ್ಧಾ ಅಂಗಡಿಯವರಿಗೆ ಟಿಕೆಟ್ ಕೊಡಬಹುದು ಇಲ್ಲವಾದರೆ ಅವರನ್ನು ಪಕ್ಷ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳಬಹುದು ಎಂದು ಹೇಳಿದರು.ಆದರೆ ಸತೀಶ್ ಜಾರಕಿಹೊಳಿ ಅವರು ಈ ವಿಷಯವನ್ನು ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಎಂದು ಗೊತ್ತಾಗಿದೆ.
ಸತೀಶ್ ಜಾರಕಿಹೊಳಿ ಅವರ ಇಂತಹ ನಕಾರಾತ್ಮಕ ಧೋರಣೆಯ ಬಗ್ಗೆ ಜಗದೀಶ್ ಶೆಟ್ಟರ್ ಅವರು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರ ಗಮನ ಸೆಳೆದರು.ಆದರೆ ಶಿವಕುಮಾರ್ ಅವರು ಈ ವಿಷಯದಲ್ಲಿ ತಾವು ಅಸಹಾಯಕ ಇಲ್ಲಿ ಸತೀಶ್ ಜಾರಕಿಹೊಳಿ ಅವರ ತೀರ್ಮಾನವೇ ಅಂತಿಮ.ಒಂದು ವೇಳೆ ತಾವು ಇದರಲ್ಲಿ ಹಸ್ತಕ್ಷೇಪ ಮಾಡಿದರೆ ಬೇರೆ ರೀತಿಯ ವ್ಯಾಖ್ಯಾನಗಳು ಕೇಳಿ ಬರುತ್ತದೆ ಎಂದು ಹೇಳಿದರೆನ್ನಲಾಗಿದೆ.
ಇಂತಹ ನಕಾರಾತ್ಮಕ ಧೋರಣೆಯಿಂದ ಬೇಸತ್ತಿದ್ದ ಜಗದೀಶ್ ಶೆಟ್ಟರ್ ಅವರಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ ಆಹ್ವಾನ ಆಸೆ ಚಿಗುರುವಂತೆ ಮಾಡಿದೆ ಇದರ ಜೊತೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಶೆಟ್ಟರ್ ಜೊತೆ ಮಾತನಾಡಿ ಬಿಜೆಪಿಗೆ ಮರಳುವಂತೆ ಮನವಿ ಮಾಡಿದರು ಇದಾದ ಬಳಿಕ ಪಕ್ಷದ ಹಿರಿಯ ನಾಯಕ ಅಮಿತ್ ಶಾ ಅವರು ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಹೇಳಿದವರಿಗೆ ಬಿಜೆಪಿ ಟಿಕೆಟ್ ಕೊಡಲಿದೆ ಹಾವೇರಿ ಮತ್ತು ಧಾರವಾಡ ಕ್ಷೇತ್ರದಲ್ಲೂ ಶೆಟ್ಟರ್ ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುವುದು ಎಂಬ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ತೀರ್ಮಾನ ಕೈಗೊಂಡರು ಎಂದು ಶೆಟ್ಟರ್ ಅವರ ಆಪ್ತ ಮೂಲಗಳು ತಿಳಿಸಿವೆ.
ಅಷ್ಟೇ ಅಲ್ಲ ಇನ್ನು ಮುಂದೆ ತಮ್ಮ ವಿಷಯದಲ್ಲಿ ಬಿ.ಎಲ್.ಸಂತೋಷ್ ಪ್ರಹ್ಲಾದ ಜೋಷಿ ಅವರ ಅಭಿಪ್ರಾಯ ಕೇಳುವುದಿಲ್ಲ ಎಂದು ಖಚಿತ ಪಡಿಸಿದರೆನ್ನಲಾಗಿದೆ.ಹೀಗಾಗಿ ತಾವು ಬಯಸಿದ್ದು ಸಿಗುವುದು ಖಚಿತವಾದ ನಂತರ ಶೆಟ್ಟರ್ ಪಕ್ಷಾಂತರ ಮಾಡಿದರೆನ್ನಲಾಗಿದೆ


1 ಟಿಪ್ಪಣಿ
If you’re looking for an exciting challenge, try playing king thimbles today!
Whether you are a professional or a craft lover, king thimbles enhance safety and effectiveness.