ಬೆಂಗಳೂರು,ಜೂ.9:
ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ 11 ವರ್ಷ ತುಂಬಿದೆ. ಇಷ್ಟೊಂದು ಸುಧೀರ್ಘ ಅವಧಿಯಲ್ಲಿ ಅವರ ಸಾಧನೆ ಸಂಪೂರ್ಣ ಶೂನ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಪ್ರಚಾರದಿಂದಷ್ಟೇ ಬದುಕಿದ್ದಾರೆ. 1 ಸಾವಿರ ಹಾಗೂ 500 ಮುಖಬೆಲೆಯ ನೋಟುಗಳ ಚಲಾವಣೆ ರದ್ದತಿಯಿಂದ ಯಾರಿಗೆ ಅನುಕೂಲವಾಯಿತು ಎಂದು ಪ್ರಶ್ನಿಸಿದರು.
ಒಳ್ಳೆಯ ದಿನಗಳು ಬರುತ್ತವೆ ಎಂದಿದ್ದರು, ಏನಾಯಿತು? ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದಿದ್ದರು, ಏನಾಯಿತು? ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದಿದ್ದರು, ಆಗಿದೆಯೇ? ರೈತರೇಕೆ ಒಂದು ವರ್ಷ ಸರ್ಕಾರದ ವಿರುದ್ಧ ದೆಹಲಿಯ ಗಡಿಗಳಲ್ಲಿ ಚಳವಳಿ ನಡೆಸಿದ್ದರು? ಮುಖ್ಯವಾಗಿ ಹೇಳಿದ್ದ ಒಂದನ್ನೂ ಮೋದಿ ಮಾಡಲಿಲ್ಲ. 11 ವರ್ಷ ತುಂಬಿಸಿದ್ದಾರಷ್ಟೆ’ ಎಂದು ಟೀಕಿಸಿದರು.
‘ಅವರು ಸುಳ್ಳು ವಿಚಾರಗಳನ್ನು ಹೇಳುತ್ತಾರೆ. ಮಾಧ್ಯಮದವರು ಅವರಿಗೆ ಹೆಚ್ಚು ಪ್ರಚಾರ ಕೊಡುತ್ತಾರೆ’ಇಂತಹ ಸುಳ್ಳು ಪ್ರಚಾರಗಳಿಂದಲೇ ಅವರು ಬದುಕಿದ್ದಾರೆ ಎಂದು ವ್ಯಂಗ್ಯವಾಡಿದರು.
‘ನಾವು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ, ಅವುಗಳನ್ನೆಲ್ಲಾ ಜಾರಿಗೊಳಿಸಲಾಗುವುದಿಲ್ಲ. ಒಂದು ವೇಳೆ ಜಾರಿಗೊಳಿಸಿದರೆ ರಾಜ್ಯ ಸರ್ಕಾರಗಳು ದಿವಾಳಿ ಆಗುತ್ತವೆ ಎಂದಿದ್ದರು. ಅವರೇ ಅದನ್ನೆಲ್ಲಾ ಕಾಪಿ ಮಾಡಿಬಿಟ್ಟರು. ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ದೆಹಲಿಯಲ್ಲಿ ಏನು ಮಾಡಿದರು? ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ತೆರಿಗೆಯಲ್ಲಿ ಶೇ 50ರಷ್ಟು ಪಾಲು ರಾಜ್ಯಕ್ಕೆ ಬರಬೇಕು ಎಂದಿದ್ದರು. ಅವರೇ ಪ್ರಧಾನಿಯಾದರಲ್ಲಾ ಆ ವಿಷಯದಲ್ಲಿ ಏನು ಮಾಡಿದರು? ಏನನ್ನೂ ಮಾಡಲಿಲ್ಲ. ನೀವು ಅದನ್ನೆಲ್ಲಾ ಹೇಳುವುದೇ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಕೊಡುತ್ತೇವೆ ಎಂದಿದ್ದರು, ಕೊಟ್ರಾ? ರಾಜ್ಯಕ್ಕೆ 11,495 ಕೋಟಿ ಕೊಡಬೇಕು ಎಂದು 15ನೇ ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಕೊಟ್ಟರಾ? ಇವೆಲ್ಲವೂ ಮುಖ್ಯವಾದವಲ್ಲವೇ? ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆಯಲ್ಲಾ ಆ ಬಗ್ಗೆ ಪ್ರಶ್ನಿಸಿರೆಂದು ಬಿಜೆಪಿಯವರಿಗೆ ಹೇಳಿದರೆ, ಅವರು ಜನರಿಗೆ ಸುಳ್ಳುಗಳನ್ನು ಹೇಳಿ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
Previous Articleಪರಮೇಶ್ವರ್ ಗೆ ಕೋಪ ಬಂದಿದೆ.
Next Article ಜಾತಿವಾರು ಜನಗಣತಿಗೆ ಹೈಕಮಾಂಡ್ ಸೂಚನೆ.