ಬೆಂಗಳೂರು: ಕಾರು ತಗುಲಿದ್ದಕ್ಕೆ ಉದ್ಯಮಿಯನ್ನು ಥಳಿಸಿ ದುಬಾರಿ ಬೆಲೆಯ ಕಾರು ಹಾಗೂ ಅದರಲ್ಲಿದ್ದ ಐಷರಾಮಿ ವಸ್ತುಗಳನ್ನು ತೆಗೆದುಕೊಂಡಿರುವ ಆರೋಪದಡಿ ಮಹಿಳೆಯ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯಮಿ ವಿನಯ್ ಗೌಡ ಎಂಬವರು ನೀಡಿದ ದೂರಿನಡಿ ದೀಪ್ತಿ ಕಟ್ರಗಡ್ಡ ಹಾಗೂ ಇನ್ನಿತರರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲ್ಯಾವೆಲ್ಲೆ ರಸ್ತೆಯ ಪೂರ್ವಾ ಗ್ರಾಂಡ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿರುವ ವಿನಯ್, ಮೇ 3ರಂದು ಬೆಳಗಿನ ಜಾವ 4.15ರ ಸುಮಾರಿಗೆ ತಮ್ಮ ಪೊರ್ಶೆ ಕಾರನ್ನು ಅಪಾರ್ಟ್ಮೆಂಟ್ ನಿಂದ ರಸ್ತೆಗೆ ರಿವರ್ಸ್ ಪಡೆಯುವಾಗ ದೀಪ್ತಿ ಎಂಬವರ ಕಾರಿಗೆ ಆಕಸ್ಮಿಕವಾಗಿ ಟಚ್ ಆಗಿದೆ.
ಈ ಸಂಬಂಧ ಮಹಿಳೆ ಹಾಗೂ ಆಕೆಯ ಸಚಚರರು ನನಗೆ ಕೈಗಳಿಂದ ಥಳಿಸಿದ್ದಾರೆ ಎಂದು ದೂರಿನಲ್ಲಿ ವಿನಯ್ ಆರೋಪಿಸಿದ್ದಾರೆ.
ಹಲ್ಲೆ ಬಳಿಕ 56 ಲಕ್ಷ ರೂ. ಬೆಲೆಯ ಕಾರು ಹಾಗೂ ಕಾರಿನಲ್ಲಿದ್ದ 1.50 ಲಕ್ಷ ರೂ. ನಗದು, 85 ಸಾವಿರ ರೂ. ಮೌಲ್ಯದ ಸನ್ ಗ್ಲಾಸ್, ಹಾಗೂ ಸೇರಿ ಇನ್ನಿತರ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇದೇ ವೇಳೆ ಮೊಬೈಲ್ ಕೂಡ ನಾಪತ್ತೆಯಾಗಿದೆ. ಕರೆ ಮಾಡಿ ಮೊಬೈಲ್ ನೀಡುವಂತೆ ಕೇಳಿದಾಗ, ಆರೋಪಿತೆಯು ಅಪಾರ್ಟ್ಮೆಂಟ್ನ ಭದ್ರತಾ ಸಿಬ್ಬಂದಿಗೆ ನೀಡಿರುವುದಾಗಿ ಹೇಳಿದ್ದಳು.
ತೆಗೆದುಕೊಂಡಿದ್ದ ಕಾರನ್ನು ಹಿಂತಿರುಗಿಸುವಂತೆ ಕೇಳಿದಾಗ ನನ್ನ ಕಾರಿಗೆ ಡ್ಯಾಮೇಜ್ ಮಾಡಿದ್ದು, 20 ಲಕ್ಷ ನೀಡಿದರೆ ಮಾತ್ರ ಕಾರು ಕೊಡುತ್ತೇನೆ ಎಂದು ಮಹಿಳೆ ಹೇಳಿರುವುದಾಗಿ ದೂರಿನಲ್ಲಿ ಆರೋಪಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿತ ಮಹಿಳೆಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದಾಗ, ವಿನಯ್ ಕಾರಿಗೆ ಗುದ್ದಿದ್ದು ನಿಜ. ವಾಗ್ವಾದ ಸಹ ನಡೆಸಿದ್ದೆ. ಆದರೆ ಸ್ಥಳದಿಂದ ಕಾರನ್ನು ತೆಗೆದುಕೊಂಡು ಹೋಗಿರಲಿಲ್ಲ. ಬದಲಾಗಿ ಆತನೇ ದೇವನಹಳ್ಳಿಯಲ್ಲಿರುವ ನನ್ನ ಮನೆ ಬಳಿ ಕಾರು ಪಾರ್ಕ್ ಮಾಡಿ ಸುಳ್ಳು ದೂರು ನೀಡಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ. ಇಬ್ಬರ ಹೇಳಿಕೆಗಳನ್ನು ಪಡೆದಿರುವ ಪೊಲೀಸರು ಕೂಲಂಕಷವಾಗಿ ಪರಿಶೀಲಿಸಿದಾಗ ಆರೋಪಿತೆ ಹೇಳಿರುವುದು ಮೇಲ್ನೋಟಕ್ಕೆ ನೈಜತೆಯಿಂದ ಕೂಡಿದೆ. ಆದರೂ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ದೂರುದಾರ ವ್ಯಕ್ತಿಯು ಮಾಜಿ ಸಚಿವರೊಬ್ಬರ ಮೊಮ್ಮಗನಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.