ರಾಜ್ಯದಲ್ಲಿ ಹಸಿವಿನಿಂದ ಯಾರೂ ಸಾಯಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೊದಲ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ರೂಪಿಸಲಾಗಿತ್ತು.
ಅತ್ಯಂತ ಕಡಿಮೆ ದರದಲ್ಲಿ ಬೆಳಗಿನ ಉಪಹಾರ ಮಧ್ಯಾಹ್ನ ಮತ್ತು ರಾತ್ರಿ ಊಟ ವಿತರಿಸುವ ಈ ಯೋಜನೆ ಅತ್ಯಂತ ಜನಪ್ರಿಯ ಯೋಜನೆಯಾಗಿತ್ತು.
ರಾಜ್ಯದ ಎಲ್ಲಾ ನಗರ ಪಟ್ಟಣ ಮತ್ತು ತಾಲೂಕು ಕೇಂದ್ರಗಳಲ್ಲಿ ಇಂದಿರ ಕ್ಯಾಂಟೀನ್ ಆರಂಭಿಸಲು ಅಂದಿನ ಸರ್ಕಾರ ತೀರ್ಮಾನಿಸಿ ಅದಕ್ಕೆ ತಕ್ಕಂತೆ ಅನುದಾನ ಬಿಡುಗಡೆ ಮಾಡಿತ್ತು.
ಕ್ಯಾಂಟೀನ್ ಗೆ ಇಟ್ಟ ಹೆಸರಿನ ಕಾರಣವೋ ಅಥವಾ ಇದು ಕಾಂಗ್ರೆಸ್ ಸರ್ಕಾರ ರೂಪಿಸಿದ ಯೋಜನೆ ಎಂಬ ಕಾರಣಕ್ಕೋ ಏನೋ ನಂತರ ಬಂದ ಸರ್ಕಾರ ಇವುಗಳ ಬಗ್ಗೆ ಆಸಕ್ತಿ ವಹಿಸಲಿಲ್ಲ. ಕೊಡಗು ಜಿಲ್ಲೆಯ ಅತ್ಯಂತ ಹಿಂದುಳಿದ ತಾಲೂಕು ಎಂದು ಹಣೆಪಟ್ಟಿಕೊಂಡಿರುವ ಸೋಮವಾರಪೇಟೆಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಸ್ಥಳ ಮತ್ತು ಆರ್ಥಿಕ ಅನುದಾನ ಎಲ್ಲವೂ ಸಿಕ್ಕಿದರೂ ಕೂಡ ಯೋಜನೆ ಆರಂಭವಾಗಲಿಲ್ಲ.
ಸೋಮವಾರಪೇಟೆಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು ಎಂದು ಒತ್ತಾಯಿಸಿ ಅಲ್ಲಿನ
ಇಂದಿರಾಗಾಂದಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ.ನಾಗರಾಜ್ ಸರ್ಕಾರದ ಎಲ್ಲಾ ಅಧಿಕಾರಿಗಳು ಶಾಸಕರು ಮಂತ್ರಿಗಳಿಗೆ ಕೊಟ್ಟ ಮನವಿಗೆ ಲೆಕ್ಕವೇ ಇಲ್ಲ ಇದಕ್ಕಾಗಿ ಸತತ ಏಳು ವರ್ಷಗಳ ಕಾಲ ಹೋರಾಟ ನಡೆಸಿದರು.
ಅಂತಿಮವಾಗಿ ಮಡಿಕೇರಿ ಕ್ಷೇತ್ರದ ಉತ್ಸಾಹಿ ಮತ್ತು ಜನಪ್ರಿಯ ಶಾಸಕ ಡಾ. ಮಂತರ್ ಗೌಡ ಈ ಬೇಡಿಕೆಗೆ ಸ್ಪಂದಿಸಿದರು.
ಸೋಮವಾರಪೇಟೆ ಪಟ್ಟಣಕ್ಕೆ ದಿನನಿತ್ಯದ ಕೆಲಸಕ್ಕಾಗಿ ದೂರದ ಊರುಗಳಿಂದ ಬರುವವರು ಕೃಷಿ ಕೂಲಿ ಕಾರ್ಮಿಕರು ಸೇರಿದಂತೆ ಹಲವರಿಗೆ ಅಗ್ಗದ ದರದಲ್ಲಿ ಉಪಹಾರ ಮತ್ತು ಊಟ ಸಿಗಬೇಕು ಅದು ಇಂದಿರಾ ಕ್ಯಾಂಟೀನ್ ನಿಂದ ಮಾತ್ರ ಸಾಧ್ಯ ಎಂದು ಮನಗಂಡ ಅವರು ಈ ಕ್ಯಾಂಟೀನ್ ಆರಂಭಕ್ಕೆ ಇದ್ದ ಎಲ್ಲಾ ಅಡೆತಡೆಗಳನ್ನು ಸತತ ಸಭೆಗಳ ಮೂಲಕ ನಿವಾರಿಸಿದರು.
ಇವರ ವಿಶೇಷ ಪ್ರಯತ್ನದ ಪರಿಣಾಮವಾಗಿ ಇದೀಗ ಸೋಮವಾರಪೇಟೆಯ ಪಟ್ಟಣ ಪಂಚಾಯತಿ ಕಛೇರಿ ಸಮೀಪದಲ್ಲಿ ಇಂದಿರಾ ಕ್ಯಾಂಟೀನ್ ತಲೆಯೆತ್ತಿ ನಿಂತಿದೆ. ಈ ಕ್ಯಾಂಟೀನ್ ಅನ್ನು ನಾಡಿಗೆ ಸಮರ್ಪಿಸಿ ಅಲ್ಲಿಯೇ ಉಪಹಾರ ಸೇವಿಸಿ ಸಂತೃಪ್ತಿಯ ಭಾವ ಅನುಭವಿಸಿದ ಶಾಸಕ ಮಂತರ ಗೌಡ ಸಾರ್ವಜನಿಕರೊಂದಿಗೆ ಖುಷಿ ಪಟ್ಟರು.
ನಂತರ ಮಾತನಾಡಿದ ಅವರು ಬಡವರಿಗೆ ಸರಿಯಾದ ಸಮಯದಲ್ಲಿ ಕನಿಷ್ಠ ದರದಲ್ಲಿ ಆಹಾರ ನೀಡಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರ ಹೆಸರಿನಲ್ಲಿ ಕ್ಯಾಂಟೀನ್ ಪ್ರಾರಂಭಿಸಿದ್ದು, ಇದರ ಸೌಲಭ್ಯ ಎಲ್ಲರಿಗೂ ಸಿಗುವಂತಾಗಬೇಕೆಂದು ಹೇಳಿದರು
ಪಟ್ಟಣ ಹಾಗೂ ಸುತ್ತಮುತ್ತಲಿನ ಬಡವರು ಹಾಗೂ ಕೂಲಿ ಕಾರ್ಮಿಕರು, ಬಡ ರೈತರು, ಗ್ರಾಮೀಣ ಜನರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಜನತೆ ಇಂದಿರಾ ಕ್ಯಾಂಟೀನ್ ಸೌಲಭ್ಯ ಪಡೆದುಕೊಳ್ಳಬೇಕು. ಈಗಾಗಲೇ ಜಿಲ್ಲೆಯಲ್ಲಿ ಮೂರು ಇಂದಿರಾ ಕಾಂಟೀನ್ ಪ್ರಾರಂಭವಾಗಿವೆ. ಬೆಳಿಗ್ಗೆ ಒಬ್ಬರು ಸೇವಿಸುವ ತಿಂಡಿಗೆ ಸರ್ಕಾರ 45 ರೂಪಾಯಿ ಖರ್ಚು ಮಾಡಿದರೆ, ಗ್ರಾಹಕರು ಕೇಎ 5 ನಗದು ನೀಡಬೇಕಿದೆ. ಮಧ್ಯಾಹ್ನ ಹಾಗು ರಾತ್ರಿಯ ಊಟಕ್ಕೆ ಸರ್ಕಾರ 55 ರೂಪಾಯಿ ನೀಡುತ್ತದೆ, ಜನರು 10 ರೂಪಾಯಿ ನೀಡಿ ಊಟ ಮಾಡಬಹುದು. ಇಂತಹ ಜನಕಲ್ಯಾಣ ಯೋಜನೆಗಳು ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಕ್ಯಾಂಟೀನ್ ನಡೆಸುವವರು ಸ್ವಚ್ಛತೆಗೆ ಹೆಚ್ಚಿನ ಅಧ್ಯತೆ ನೀಡಬೇಕು. ಸ್ವಚ್ಛತೆ ಕಾಪಾಡದಿದ್ದರೆ ಸೂಕ್ರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಶುಚಿ, ರುಚಿಯಾದ ಊಟವನ್ನು ಮಾತ್ರ ಇಲ್ಲಿನ ಜನತೆ ಇಷ್ಟಪಡುತ್ತಾರೆ. ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಕಿವಿಮಾತು ಹೇಳಿದರು. ವೇದಿಕೆಯಲ್ಲಿ ತಿಂಡಿ ತಿಂದ ಶಾಸಕರು ರುಚಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಉಪಾಧ್ಯಕ್ಷೆ ಮೋಹಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್. ಮಹೇಶ್, ಸದಸ್ಯರಾದ ಶೀಲಾ ಡಿಸೋಜ, ಬಿ.ಸಿ.ವೆಂಕಟೇಶ್, ಪಿ.ಕೆ.ಚಂದ್ರು, ಮೃತ್ಯಂಜಯ, ಕಿರಣ್ ಉದಯ ಶಂಕರ್, ಎಚ್.ಎ.ನಾಗರಾಜ್, ತಹಶೀಲ್ದಾರ್ ಕೃಷ್ಣಮೂರ್ತಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ.ಕಾಂತಾರಾಜು, ಸುಡಾ ಅಧ್ಯಕ್ಷ ಕೆ.ಎ.ಆದಂ, ಇಒ ಪರಮೇಶಕುಮಾರ್, ಸಿಒ ಸತೀಶ್, ಇಂಜಿನಿಯರ್ ಹೇಮಂತ್ ಇದ್ದರು.
Previous Articleಮಡಿಕೇರಿಯ ಮುಕುಟ ಇಂದಿರಾ ಕ್ಯಾಂಟೀನ್
Next Article ತಮನ್ನಾ ಬೆಂಬಲಕ್ಕೆ ನಿಂತ ಎಂ.ಬಿ.ಪಾಟೀಲ್

1 ಟಿಪ್ಪಣಿ
Your luck just filed for full custody of the pot – https://www.producthunt.com/@new_user___0832026d15674f3a3a265fb , Where “maybe next time” got permanently banned .