ಮುಂಬಯಿ, ನ.13- ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಬೋನಸ್ ಕೊಡದಿದ್ದಕ್ಕೆ ರೊಚ್ಚಿಗೆದ್ದ ನೌಕರರಿಬ್ಬರು ತಮಗೆ ಕೆಲಸಕೊಟ್ಟಿದ್ದು ಡಾಬಾದ ಮಾಲೀಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಾಗ್ಪುರದಲ್ಲಿ ನಡೆದಿದೆ.
ನಾಗ್ಪುರ ನಿವಾಸಿ ರಾಜು ಡಾಬಾ ಮಾಲೀಕ ಭಾವುರಾವ್ ಧೆಂಗ್ರೆ (48) ಎಂಬುವವರು ದೀಪಾವಳಿ ಬೋನಸ್ ನೀಡದ ಕಾರಣಕ್ಕೆ ಕೊಲೆಯಾಗಿದ್ದಾರೆ. ರಾಜು ಭಾವುರಾವ್ ಧೆಂಗ್ರೆ ಅವರು ನಾಗ್ಪುರ ಡಾಬಾದ ಮಾಲೀಕರಾಗಿದ್ದು,ಅವರನ್ನು ನಿನ್ನೆ ರಾತ್ರಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಚೋಟು ಹಾಗೂ ಆದಿ ಸೇರಿ ಇಬ್ಬರು ಕಟ್ಟಿಹಾಕಿ, ಚಾಕು ಇರಿದು ಹತ್ಯೆ ಮಾಡಿದ್ದಾರೆ
ಕೃತ್ಯ ನಡೆಸಿದ ಚೋಟು ಹಾಗೂ ಆದಿ ಇಬ್ಬರೂ ಮಧ್ಯಪ್ರದೇಶದವರಾಗಿದ್ದು, ಏಜೆಂಟ್ ಮೂಲಕ ಕೆಲ ತಿಂಗಳ ಹಿಂದಷ್ಟೇ ಡಾಬಾದಲ್ಲಿ ಕೆಲಸಕ್ಕೆ ಸೇರಿದ್ದಾರೆ ಊರು ಬಿಟ್ಟು ಊರು ಬಂದವರು ಎಂದು ರಾಜು ಭಾವುರಾವ್ ಧೆಂಗ್ರೆ ಅವರು ಒಳ್ಳೆಯ ಸಂಬಳ, ವಸತಿ, ಊಟ ಕೊಟ್ಟು ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಆದರೆ, ದೀಪಾವಳಿ ಬೋನಸ್ ಹಾಗೂ ರಜೆಯ ವಿಷಯಕ್ಕೆ ಧೆಂಗ್ರೆ ಹಾಗೂ ಇಬ್ಬರು ಕೆಲಸಗಾರರ ಮಧ್ಯೆ ಜಗಳ ನಡೆದಿದೆ ಎಂದು ತಿಳಿದುಬಂದಿದೆ.
ಊರಿಗೆ ಹೋಗಲು ರಜೆ ಬೇಕು ಹಾಗೂ ದೀಪಾವಳಿ ಬೋನಸ್ ಕೊಡಬೇಕು ಎಂದು ಇಬ್ಬರೂ ಆಗ್ರಹಿಸಿದ್ದಾರೆ. ಆಗ ಇದಕ್ಕೆ ರಾಜು ಭಾವುರಾವ್ ಧೆಂಗ್ರೆ ನಿರಾಕರಿಸಿದ್ದಾರೆ. ರಾಜು ಭಾವುರಾವ್ ಧೆಂಗ್ರೆ ಅವರು ಮಲಗುವ ತನಕ ಕಾದ ಚೋಟು ಹಾಗೂ ಆದಿ, ಮಲಗಿಕೊಂಡ ಬಳಿಕ ರಾಜು ಭಾವುರಾವ್ ಧೆಂಗ್ರೆ ಅವರನ್ನು ಹತ್ಯೆ ಮಾಡಿದ್ದಾರೆ.
ಹತ್ಯೆಯ ನಂತರ ಮಾಲೀಕನ ಕಾರನ್ನೇ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಅವರು ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗುವಾಗ ಕಾರು ಅಪಘಾತವಾಗಿದ್ದು, ಅದನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ಇಬ್ಬರಿಗಾಗಿ ಬಲೆ ಬೀಸಿದ್ದಾರೆ.