ಬೆಂಗಳೂರು, ಮೇ 24-
ವಿಧಾನಸೌಧದ ಸಮ್ಮೇಳನ ಸಭಾಂಗಣದ ಆವರಣದಲ್ಲಿ ಇಂದು ಬೆಳಗ್ಗೆ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸಂಸದರೊಬ್ಬರ ನಡವಳಿಕೆಯಿಂದ ಬೆಚ್ಚಿದ ಕಾಂಗ್ರೆಸ್ ಶಾಸಕರು ಏನ್ರೀ ಇದು ರೌಡಿಸಂ ಎಂದು ಪ್ರತಿಕ್ರಿಸಿದರು.
ವಿಧಾನಸಭೆಯ ನೂತನ ಅಧ್ಯಕ್ಷರ ಆಯ್ಕೆ ಸಂಬಂಧಪಟ್ಟಂತೆ ಚರ್ಚಿಸಲು ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿತ್ತು.
ಸಭೆ ವಿದ್ಯುಕ್ತವಾಗಿ ಮುಕ್ತಾಯವಾದ ಬಳಿಕ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಎಂ.ಬಿ.ಪಾಟೀಲ್ ಪರಸ್ಪರ ಮುಖಾಮುಖಿಯಾದರು. ಸಚಿವಎಂಬಿ ಪಾಟೀಲ್ ಅವರನ್ನು ಕಂಡೊಡನೆ ಸಂಸದ ಡಿ.ಕೆ. ಸುರೇಶ್ ಅವರು, ಕೈಯನ್ನು ತೋರಿಸುತ್ತಾ ಏರಿದ ಧ್ವನಿಯಲ್ಲಿ ಇದೆಲ್ಲಾ ಸರಿಯಿಲ್ಲ ಎಂದು ಎಚ್ಚರಿಸಿದರು.
ಇದನ್ನು ಕಂಡ ಸಚಿವ ಎಂ ಬಿ ಪಾಟೀಲ್ ಅವರ ಪಕ್ಕದಲ್ಲಿದ್ದ ಕೆಲ ಶಾಸಕರು ಏನ್ರೀ ಇದು ಈ ರೀತಿಯ ನಡವಳಿಕೆ ಸರಿಯಲ್ಲ ರೌಡಿಸಂ ಎಲ್ಲಾ ಯಾರು ಕೇಳುವುದಿಲ್ಲ ಎಂದು ಹೇಳಿದರೆ, ಯಾವುದೇ ಪ್ರತಿಕ್ರಿಯೆ ನೀಡದ ಎಂಬಿ ಪಾಟೀಲ್ ಅವರು ಸಂಸದ ಸುರೇಶ್ ಅವರ ಕೈಯನ್ನು ಹಿಡಿದು ನನ್ನ ಕಚೇರಿಗೆ ಬನ್ನಿ ಮಾತನಾಡೋಣ ಎಂದು ಹೇಳಿದರು.
ಆದರೆ ಅವರ ಕೈಯನ್ನು ಕಿತ್ತುಕೊಂಡು ಮುಂದೆ ನಡೆದ ಸಂಸದ ಡಿಕೆ ಸುರೇಶ್ ಮತ್ತೊಮ್ಮೆ ಎಂಬಿ ಪಾಟೀಲ್ ಅವರನ್ನು ದಿಟ್ಟಿಸಿ ನೋಡುತ್ತಾ ಸ್ವಲ್ಪ ಬಿಗಿಯಾಗಿರಲಿ ನಡವಳಿಕೆ ಎಂದು ಹೇಳಿ ಮುಂದೆ ನಡೆದರು.
ಶಾಸನಸಭೆಯಿಂದ ಹೊರ ಬರುತ್ತಿದ್ದ ಹಲವಾರು ಮಂದಿ ಶಾಸಕರು ಈ ಘಟನೆಯನ್ನು ನೋಡಿ ತೀವ್ರ ಅಸಮಾಧಾನ ಹೊರಹಾಕಿದರು ಏನಿದು ರೌಡಿಸಂ, ಯಾಕೆ ಈ ರೀತಿ ಆಗುತ್ತಿದೆ. ಇದೆಲ್ಲ ಸರಿಯಲ್ಲ.ಎಂದು ಹೇಳಿ ಎಂಬಿ ಪಾಟೀಲ ಅವರನ್ನು ಸಮಾಧಾನಪಡಿಸಿದರು.
ಅವರೇ ಸಿಎಂ ಆಗಲಿ:-
ಈ ಘಟನೆಯ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿಕೆ ಸುರೇಶ್ ಸಚಿವ ಎಂ ಬಿ ಪಾಟೀಲ್ ಅವರೇ ಮುಖ್ಯಮಂತ್ರಿಯಾಗಲಿ ನಮಗೇನು ಎಂದರು.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು ಈಗ ಮತ್ತೆ ಮುಖ್ಯಮಂತ್ರಿ ಆಗಿದ್ದಾರೆ ಅವರು ಐದು ವರ್ಷ ಪೂರ್ಣಗೊಳಿಸಲಿ ಮತ್ತೆ ಸಿಎಂ ಆಗಲಿ ನಮಗೇನು ಅಭ್ಯಂತರವಿಲ್ಲ ಎಂಬಿ ಪಾಟೀಲ್ ಅವರು ಕೂಡ ಮುಖ್ಯಮಂತ್ರಿ ಯಾಗಲಿ ಎಂದು ಹೇಳುತ್ತಾ ಹೊರ ನಡೆದರು.
ಯಾರಿಗೂ ಇಲ್ಲ:
ಇನ್ನು ಸಂಸದ ಡಿಕೆ ಸುರೇಶ್ ಅವರು ತಮಗೆ ಎಚ್ಚರಿಕೆ ನೀಡಿರುವ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ಎಂಬಿ ಪಾಟೀಲ್ ನನಗೆ ಯಾರು ಎಚ್ಚರಿಕೆ ಕೊಡುವವರು ನನ್ನ ತಂದೆ ತಾಯಿ ಅವರೇ ನನಗೆ ಎಚ್ಚರಿಕೆ ಕೊಡಲಿಲ್ಲ ಇಂತಹ ಎಚ್ಚರಿಕೆಗಳಿಗೆಲ್ಲ ನಾನು ಬಗ್ಗುವುದಿಲ್ಲ ಎಂದರು
ಡಿಕೆ ಸುರೇಶ್ ಅವರು ನನ್ನನ್ನು ನೋಡಿ ಎಂಬಿ ಪಾಟೀಲರೇ ಎಂದು ಹೇಳಿದರು ನಾನು ಬನ್ನಿ ಕಚೇರಿಯಲ್ಲಿ ಮಾತನಾಡೋಣ ಎಂದು ಹೇಳಿದ್ದೇನೆ ಎಚ್ಚರಿಕೆ ಗಿಚ್ಚರಿಕೆಯ ಪ್ರಶ್ನೆ ಇಲ್ಲ ಎಂದು ತಿಳಿಸಿದರು.