ಬೆಂಗಳೂರು, ಸೆ.7 – ರಾಜಧಾನಿ ಮಹಾ ನಗರಿ ಬೆಂಗಳೂರು ಡೆಂಗ್ಯೂ (Dengue) ರಾಜಧಾನಿಯಾಗಿದೆ.ನಗರದಲ್ಲಿ ಸುರಿದ ಮಳೆ ಹಾಗೂ ನೈರ್ಮಲ್ಯದ ಕಾರಣದಿಂದಾಗಿ ನಗರದಲ್ಲಿ ಮತ್ತೆ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗಿವೆ. ಹಿರಿ-ಕಿರಿಯ ಆಸ್ಪತ್ರೆಗೆ ಬರುತ್ತಿರುವ ಡೆಂಗ್ಯೂ ಪೀಡಿತರ ಸಂಖ್ಯೆ ಉಲ್ಬಣಿಸುತ್ತಾ ಸಾಗುತ್ತಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 22 ರಷ್ಟು ಡೆಂಗ್ಯೂ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿರುವುದು ವಿಶೇಷ. ಮಳೆಗಾಲ ಆರಂಭವಾಗ್ತಿದಂತೆ ಜ್ವರ, ಶೀತ, ಡೆಂಗ್ಯೂ ಹಾಗೂ ಮಲೇರಿಯಾ ರೋಗಗಳ ಆತಂಕ ಎದುರಾಗುವುದು ಸರ್ವೇ ಸಾಮಾನ್ಯವಾಗಿದೆ.ಇದರ ಜೊತೆಗೆ ಡೆಂಗ್ಯೂ ಕೂಡಾ ಕಾಡತೊಡಗಿದೆ.
ನಗರದಲ್ಲಿ ಕಳೆದ ಎರಡು ತಿಂಗಳಲ್ಲಿ ಬರೋಬ್ಬರಿ 1,649 ಡೆಂಗ್ಯೂ ಪ್ರಕರಣ ದಾಖಲಾಗಿರುವುದು ಕಂಡುಬಂದಿದೆ.
ಆಗಸ್ಟ್ ತಿಂಗಳಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದ್ದ ಡೆಂಗ್ಯೂ ಪ್ರಕರಣಗಳಲ್ಲಿ ಇದೀಗ ಮತ್ತೆ ಏರಿಕೆಯಾಗಿದೆ. 2022ರ ಜನವರಿಯಿಂದ 2023 ಆಗಸ್ಟ್ವರೆಗೆ 4,507 ಪ್ರಕರಣ ದಾಖಲಾಗಿತ್ತು ಆದರೆ, 2023 ಒಂದರಲ್ಲೇ 5,526 ಪ್ರಕರಣ ದಾಖಲಾಗಿರುವುದು ಪತ್ತೆಯಾಗಿದೆ. ಬೆಂಗಳೂರು ಒಂದರಲ್ಲೇ 2,969 ಜನರಿಗೆ ಡೆಂಗ್ಯೂ (Dengue) ಕಾಡುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 22ಕ್ಕಿಂತ ಅಧಿಕವಾದ ಪ್ರಕರಣ ದಾಖಲಾಗಿವೆ.
ಕೀಲು ನೋವು, ಸ್ನಾಯು ನೋವು, ಕೆಳಹೊಟ್ಟೆಯಲ್ಲಿ ನೋವು, ವಾಂತಿ ಅಥವಾ ಮಲದಲ್ಲಿ ರಕ್ತ, ತ್ವಚೆಯ ಮೇಲೆ ಸಣ್ಣ ಕೆಂಪು ಚುಕ್ಕೆಗಳು ಪದೇ ಪದೇ ಜ್ವರ ಮರುಕಳಿಸುವುದು, ಜ್ವರದ ತಾಪಮಾನ 104 ಡಿಗ್ರಿವರೆಗೆ ಏರುವುದು, ಮೈ-ಕೈ ನೋವು ಮತ್ತು ಸ್ನಾಯುಗಳ ಸೆಳೆತ ಕಂಡು ಬರುವುದು ಡೆಂಗ್ಯೂ ಸೋಂಕಿನ ಪ್ರಮುಖ ಲಕ್ಷಣಗಳಾಗಿದೆ.
ಡೆಂಗ್ಯೂ (Dengue) ಇಷ್ಟೊಂದು ವ್ಯಾಪಕವಾಗಿ ಹರಡಲು ಪ್ರಮುಖ ಕಾರಣ ನಗರದ ಒಳ ಚರಂಡಿ ವ್ಯವಸ್ಥೆಯ ಲೋಪ.ಬಹುತೇಕ ಕಡೆ ಚರಂಡಿಗಳಲ್ಲಿ ಹೂಳು ತುಂಬಿದ್ದು ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಲ್ಲುತ್ತಿದೆ.ಮಳೆಯಿಂದಾಗಿ ನಿತ್ಯವೂ ಹೊಸ ನೀರು ಸೇರ್ಪಡೆಯಾಗುತ್ತಿದ್ದು,ಡೆಂಗ್ಯೂ ಹರಡುವ ಸೊಳ್ಳೆಗಳ ಪ್ರಮಾಣ ಹೆಚ್ಚುತ್ತಾ ಸಾಗಿದೆ.ಬಿಬಿಎಂಪಿ ಹೂಳು ತೆಗೆಯುವ ಕೆಲಸ ಮಾಡುವುದಿರಲಿ, ಸೊಳ್ಳೆಗಳ ನಿಯಂತ್ರಣಕ್ಕೆ ಧೂಮೀಕರಣ ಸೇರಿದಂತೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ಇದರಿಂದಾಗಿ ಇವುಗಳ ಪ್ರಮಾಣ ಹೆಚ್ವಳವಾಗುತ್ತಿದೆ.