ಬೆಂಗಳೂರು, ಡಿ.5- ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಉದ್ಯಮಿಯೊಬ್ಬರ ಮನೆಗೆ ನುಗ್ಗಿ 700 ಗ್ರಾಂ ಚಿನ್ನಾಭರಣ, 60 ಲಕ್ಷ ನಗದು ದರೋಡೆ ಮಾಡಿ ಪರಾರಿಯಾಗಿರುವ ವಿದ್ಯಮಾನ ಬೆಂಗಳೂರಿನ ಪೀಣ್ಯದಲ್ಲಿ ನಡೆದಿದೆ
ಪೀಣ್ಯದ ಹೆಚ್ಎಂಟಿ ಲೇಔಟ್ನ ಎಸ್.ಎನ್.ಆರ್ ಪಾಲಿಫಿಲಮ್ಸ್ ಪ್ಯಾಕೇಜಿಂಗ್ ಕಂಪನಿ ಮಾಲೀಕ ಮನೋಹರ್ ಅವರ ಮನೆಗೆ ನುಗ್ಗಿದ ಪೊಲೀಸರ ಸೋಗಿನ ದುಷ್ಕರ್ಮಿಗಳು ಉದ್ಯಮಿ ಪುತ್ರ ರೂಪೇಶ್ ಮೇಲೆ ಹಲ್ಲೆ ಮಾಡಿ ಬೆದರಿಸಿ 700 ಗ್ರಾಂ ಚಿನ್ನಾಭರಣ, 60 ಲಕ್ಷ ನಗದು ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಹಲ್ಲೆಯಿಂದ ಸಣ್ಣ ಪುಟ್ಟ ಗಾಯಗಳಾಗಿರುವ ರೂಪೇಶ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾತ್ರಿ 7.30ರ ಸುಮಾರಿಗೆ, ಮನೆಯಲ್ಲಿ 5 ರಿಂದ 6 ಮಂದಿ ದುಷ್ಕರ್ಮಿಗಳು ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿದ್ದಾರೆ.ಈ ವೇಳೆ ಉದ್ಯಮಿ ಮನೋಹರ್ ಅವರು ಮನೆಯಲ್ಲಿರಲಿಲ್ಲ. ಮನೋಹರ್ ಪತ್ನಿ ಸುಜಾತ ಹಾಗೂ ಮಗ ರೂಪೇಶ್ ಮಾತ್ರ ಇದ್ದರು. ಉದ್ಯಮಿ ಮನೋಹರ್ ಹಾಗೂ ಅವರ ಅಣ್ಣ ತಮ್ಮಂದಿರ ನಡುವೆ ಹಲವು ವಿಚಾರಗಳಲ್ಲಿ ಕಲಹವಿದೆ. ಹೀಗಾಗಿ ಅದೇ ವಿಚಾರಕ್ಕೆ ಪೊಲೀಸರು ಬಂದಿರುವುದಾಗಿ ರೂಪೇಶ್ ಅಂದುಕೊಂಡಿದ್ದಾರೆ. ಆದರೆ ಮನೆಯೊಳಗೆ ಬರುತ್ತಿದ್ದಂತೆ ಪೊಲೀಸರ ವೇಷದಲ್ಲಿದ್ದ ಖದೀಮರು ಏಕಾಏಕಿ ಡ್ರಾಗರ್ ಹಾಗೂ ಮಚ್ಚುಗಳನ್ನು ತೋರಿಸಿ ಹೆದರಿಸಿದ್ದಾರೆ. ರೂಪೇಶ್ ಮೇಲೆ ಹಲ್ಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ನಗದು ಲೂಟಿ ಮಾಡಿದ್ದಾರೆ.
700 ಗ್ರಾಂ ಚಿನ್ನಾಭರಣ ಹಾಗೂ 60 ಲಕ್ಷ ನಗದು ದರೋಡೆ ಮಾಡಿ ಕೃತ್ಯದ ಬಳಿಕ ಮನೆಯಲ್ಲಿನ ಸಿಸಿಟಿವಿ ಡಿವಿಆರ್ ಸಮೇತ ಪರಾರಿಯಾಗಿದ್ದಾರೆ.ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿ ದುಷ್ಕರ್ಮಿಗಳ ಪತ್ತೆಗೆ ಶೋಧ ಕೈಗೊಂಡಿದ್ದಾರೆ.