ಬೆಂಗಳೂರು, ಡಿ.5- ಮಾರುಕಟ್ಟೆ ವ್ಯವಸ್ಥೆಯಲ್ಲಿ ಗ್ರಾಹಕನೇ ಮಹಾರಾಜ. ಗ್ರಾಹಕರ ಹಿತ ಕಾಯುವುದು ಎಲ್ಲಾ ವ್ಯಾಪಾರಿಗಳ ಕರ್ತವ್ಯ. ತಪ್ಪಿದಲ್ಲಿ ಗ್ರಾಹಕ ವ್ಯವಹಾರಗಳ ನ್ಯಾಯಾಲಯ ಸುಮ್ಮನಿರುವುದಿಲ್ಲ.ಅದಕ್ಕೆ ಉದಾಹರಣೆ ಈ ಘಟನೆ.
ಚಿಕನ್ ಬಿರಿಯಾನಿ (Chicken Biryani) ಕೊಂಡ ಗ್ರಾಹಕನಿಗೆ ಹೋಟೆಲ್ ಕೋಳಿ ಮಾಂಸ ಇಲ್ಲದಿರುವ ಬಿರಿಯಾನಿ ನೀಡಿದ ತಪ್ಪಿಗಾಗಿ 1000 ರೂ. ಪರಿಹಾರ ಮತ್ತು 150 ರೂ ಗಳ ಬಿರಿಯಾನಿ ಹಣವನ್ನು ಗ್ರಾಹಕನಿಗೆ ನೀಡುವಂತೆ ಹೊಟೇಲ್ ಮಾಲೀಕನಿಗೆ ಗ್ರಾಹಕರ ನ್ಯಾಯಾಲಯ ಆದೇಶ ನೀಡಿದೆ.
ಕಳೆದ ಏಪ್ರಿಲ್ 2 ರಂದು ಬೆಂಗಳೂರಿನ ನಾಗರಭಾವಿಯ ನಿವಾಸಿ ಕೃಷ್ಣಪ್ಪ ಅವರು ತಮ್ಮ ಮನೆಯಲ್ಲಿ ಅಡುಗೆ ಅನಿಲ ಖಾಲಿಯಾಗಿದ್ದರಿಂದ ಐಟಿಐ ಲೇಔಟ್ನಲ್ಲಿರುವ ಹೊಟೇಲ್ ಗೆ ಹೋಗಿ 150 ರೂ ಕೊಟ್ಟು ಚಿಕನ್ ಬಿರಿಯಾನಿ ಖರೀದಿಸಿದರು.
ಆತ ಮನೆಗೆ ಬಂದು ಪಾರ್ಸೆಲ್ ತೆರೆದು ನೋಡಿದಾಗ ಬಿರಿಯಾನಿಯಲ್ಲಿ ಒಂದು ಚೂರು ಮಾಂಸ ಇರಲಿಲ್ಲ.ಕೂಡಲೇ ಕೃಷ್ಣಪ್ಪ ಅಂಗಡಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಚಿಕನ್ ಬಿರಿಯಾನಿಗೆ ಹಣ ಕೊಟ್ಟರೂ ಮಾಂಸವಿಲ್ಲದ ಬಿರಿಯಾನಿ ಕೊಡಲಾಗಿದೆ ಎಂದು ತಿಳಿಸಿದರು.
ಆಗ ಹೊಟೇಲ್ ಮಾಲಿಕ,ಏನೋ ಯಡವಟ್ಟಾಗಿದೆ ಚಿಕನ್ ಬಿರಿಯಾನಿಯ ಪಾರ್ಸೆಲ್ ಸಿದ್ಧವಾಗಿದೆ 30 ನಿಮಿಷಗಳಲ್ಲಿ ನಿಮ್ಮ ನಿವಾಸದ ವಿಳಾಸಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.ಇದಕ್ಕಾಗಿ ಕೃಷ್ಣಪ್ಪ ಎರಡು ಗಂಟೆಗಳ ಕಾಲ ಕಾದು ಕುಳಿತಿದ್ದರು.ಆದರೆ ಚಿಕನ್ ಬಿರಿಯಾನಿ ಪಾರ್ಸೆಲ್ ಬರಲಿಲ್ಲ.
ದಂಪತಿಗಳು ವಿಧಿ ಇಲ್ಲದೆ ರಾತ್ರಿ ಸಾದಾ ಬಿರಿಯಾನಿಯನ್ನೇ ತಿಂದು ಮಲಗಿದರು.
ಬಳಿಕ ಕೃಷ್ಣಪ್ಪ ಅವರು ಏಪ್ರಿಲ್ 28 ರಂದು ಹೋಟೆಲ್ ಮಾಲಿಕನಿಗೆ ತಾನು (ಕೃಷ್ಣಪ್ಪ) ಕಾನೂನು ಮೊರೆ ಹೋಗುವುದಾಗಿ ತಿಳಿಸಿದರೂ ಹೋಟೆಲ್ ಮಾಲೀಕ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ.
ಕೊನೆಗೆ ಕೃಷ್ಣಪ್ಪ ಅವರು ಮೇ ತಿಂಗಳಿನಲ್ಲಿ ಶಾಂತಿನಗರದಲ್ಲಿರುವ ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಹೋಟೆಲ್ ಮಾಲಿಕರ ವಿರುದ್ಧ ದೂರು ದಾಖಲಿಸಿ 30 ಸಾವಿರ ರೂ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಗ್ರಾಹಕ ಕಾನೂನಿನ ಪ್ರಕಾರ ಈ ಪ್ರಕರಣವನ್ನು ಕೃಷ್ಣಪ್ಪ ಅವರು ತಾವೇ ನ್ಯಾಯಾಲಯದಲ್ಲಿ ವಾದಿಸಿದರು. ಕೋರ್ಟ್ ಹೋಟೆಲ್ ಮಾಲೀಕರಿಗೆ ನೋಟೀಸ್ ನೀಡಿದರೂ ಅವರು ನ್ಯಾಯಾಲಯಕ್ಕೆ ಹಾಜರಾಗಲಿಲ್ಲ.
ನ್ಯಾಯಾಲಯವು ಕೃಷ್ಣಪ್ಪ ವಾದವನ್ನು ಆಲಿಸಿ ಮತ್ತು ನೀಡಿದ ಸಾಕ್ಷಾಧಾರವನ್ನು ಪರಿಶೀಲಿಸಿ ಅಕ್ಟೋಬರ್ 5, 2023 ರಂದು ತೀರ್ಪು ನೀಡಿತು. ಹೋಟೆಲ್ ತಿಳಿದೋ ತಿಳಿಯದೆಯೋ ತಪ್ಪು ಮಾಡಿರುವುದು ಸ್ಪಷ್ಟವಾಗಿದೆ. ಹೋಟೆಲ್ ಗ್ರಾಹಕರಿಂದ ಚಿಕನ್ ಬಿರಿಯಾನಿಗೆ 150 ರೂ. ಪಡೆದು ತಪ್ಪಾದ ಪಾರ್ಸೆಲ್ ಅನ್ನು ನೀಡಿದೆ. ಇದು ಅನ್ಯಾಯ. ಅಲ್ಲದೆ ತಮ್ಮ ತಪ್ಪಿನ ಬಗ್ಗೆ ಹೋಟೆಲ್ಗೆ ಎಚ್ಚರಿಕೆ ನೀಡಿದರೂ ಬದಲಿ ಪಾರ್ಸಲ್ ಅನ್ನು ನೀಡದೆ ಗ್ರಾಹಕರಿಗೆ ಸೇವೆ ಸಲ್ಲಿಸುವಲ್ಲಿ ಹೋಟೆಲ್ ವಿಫಲವಾಗಿದೆ ಎಂದು ಹೇಳಿ ಒಂದು ಸಾವಿರ ರೂಪಾಯಿ ದಂಡ ವಿಧಿಸಿ ಅದನ್ನು ಗ್ರಾಹಕನಿಗೆ ನೀಡುವಂತೆ ನ್ಯಾಯಾಧೀಶರು ಆದೇಶಿಸಿದರು.