ಬೆಂಗಳೂರು,ಡಿ.6 – ನಾಗಪುರದ ಆರ್ ಎಸ್ ಎಸ್ ಕಚೇರಿಯ ವಸ್ತು ಸಂಗ್ರಹಾಲಯ ಪ್ರವೇಶ ಕುರಿತಂತೆ ಯಾರಿಂದಲೋ ಪ್ರೇರಿತರಾಗಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ (Gulihatti Shekar) ಹೇಳಿಕೆ ನೀಡಿದ್ದಾರೆ ಎಂದು ಎಂದು ಮಾಜಿ ಶಾಸಕ ಮತ್ತು ಬಿಜೆಪಿ ರಾಜ್ಯ ವಕ್ತಾರ ಪಿ.ರಾಜೀವ್ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮಾನ್ಯ ಗೂಳಿಹಟ್ಟಿ ಶೇಖರ್ ಅವರು ಹೇಳಿದ್ದು ತಪ್ಪು ಮಾಹಿತಿ. ನಾನು ಒಬ್ಬ ದಲಿತನಾಗಿದ್ದು, ರಾಜಕಾರಣಕ್ಕೆ ಬಂದ ಮೇಲೆ ಆರೆಸ್ಸೆಸ್ ಸಂಪರ್ಕದಲ್ಲಿದ್ದು, ಹತ್ತಿರದಿಂದ ನೋಡಿದ್ದೇನೆ ಎಂದು ತಿಳಿಸಿದರು ಗೂಳಿಹಟ್ಟಿ ಶೇಖರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ನೀಡಿದ ಹೇಳಿಕೆ ವೈರಲ್ ಆಗಿದ್ದನ್ನು ಗಮನಿಸಿದ್ದೇನೆ. ಯಾವ ಮಾನಸಿಕ ಸ್ಥಿತಿಯಲ್ಲಿ, ಯಾರಿಂದ ದುಷ್ಪ್ರೇರಣೆಗೆ ಒಳಗಾಗಿ, ಯಾವ ಕಾಣದ ಕೈಗಳ ಒತ್ತಡಕ್ಕೆ ಒಳಗಾಗಿ ಈ ಮಾತು ಹೇಳಿದ್ದಾರೋ ಗೊತ್ತಿಲ್ಲ. ಆರೆಸ್ಸೆಸ್ ಎಲ್ಲರನ್ನೂ ಜೋಡಿಸುತ್ತದೆ. ಸಂಪೂರ್ಣ ಹಿಂದೂ ಸಮಾಜವನ್ನು ಒಗ್ಗೂಡಿಸುತ್ತದೆ. ಆರೆಸ್ಸೆಸ್, ಭಾರತ ಮಾತೆಯ ಫೋಟೊ ಇಟ್ಟುಕೊಂಡು ಪೂಜೆ ಮಾಡುತ್ತದೆ. ಅಲ್ಲಿ ಜಾತೀಯತೆ, ಒಡೆಯುವಂಥದ್ದು, ಜಾತಿ ಕೇಳುವ ಆಚರಣೆ ನನ್ನ ಗಮನಕ್ಕೆ ಬಂದಿಲ್ಲ ಎಂದರು.
ದೇಶ ಕಟ್ಟಲು ಶ್ರಮಿಸುವ ಸಂಘಟನೆ ಇದು. ಸ್ವಯಂಸೇವಕರು ಯಾವ ಸನ್ಯಾಸಿಗೂ ಕಡಿಮೆ ಇಲ್ಲದಂತೆ ತ್ಯಾಗದ ಜೀವನ ರೂಪಿಸಿಕೊಳ್ಳುತ್ತಾರೆ. ದೇಶಸೇವೆಗೆ ಕಂಕಣಬದ್ಧರಾಗಿ ನಿಂತಿರುತ್ತಾರೆ. ಸ್ವಾರ್ಥರಹಿತ ಸೇವೆ ಮಾಡುವ ಈ ಸಂಘಟನೆಯ ಕುರಿತು ಅರಿವಿಲ್ಲದೆ, ತಿಳಿದುಕೊಳ್ಳದೆ, ಅನುಭವಕ್ಕೆ ಬರಲಾಗದೆ ಇಂಥ ಮಾತು ಹೇಳುವುದು ತಪ್ಪು ಎಂದು ತಿಳಿಸಿದರು.
ಪ್ರಿಯಾಂಕ್ ಖರ್ಗೆ ಅವರಿಗೆ ಆರೆಸ್ಸೆಸ್ ಸಂಪರ್ಕ ಇಲ್ಲ. ಆರೆಸ್ಸೆಸ್ ಚಟುವಟಿಕೆಗಳಲ್ಲಿ ಅವರು ಭಾಗವಹಿಸುವುದಿಲ್ಲ. ಗಂಧ ಗಾಳಿ ಗೊತ್ತಿಲ್ಲದೆ ಆಳ ಅರಿವು ಲೇಖನ ಬರೆದುಕೊಡುವುದು, ಗಂಧ ಗಾಳಿ ಗೊತ್ತಿಲ್ಲದೆ ಇಂಥವರಿಗೆ ಅವಕಾಶ ಇಲ್ಲವೆನ್ನುವುದು ಬಹಳ ದೊಡ್ಡ ತಪ್ಪು. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು, ತಮ್ಮ ಜೀವಿತದ ಸಂಪೂರ್ಣ ಅವಧಿಯಲ್ಲಿ ಕಾಂಗ್ರೆಸ್ಸನ್ನು ಟೀಕಿಸಿದ್ದರು. ಅವರು ಎಲ್ಲಿ ಕೂಡ ಆರೆಸ್ಸೆಸ್ ಅನ್ನು ಟೀಕಿಸಲಿಲ್ಲ. ಆ ಸಂದರ್ಭದಲ್ಲಿ ಆರೆಸ್ಸೆಸ್, ಅಂಬೇಡ್ಕರರ ಜೊತೆಗೆ ಗಟ್ಟಿಯಾಗಿ ನಿಂತಿತ್ತು. ಕಾಂಗ್ರೆಸ್ ಅವರನ್ನು ತುಳಿಯುವ ಕೆಲಸ ಮಾಡಿತ್ತು. ಕಾಂಗ್ರೆಸ್ನ ದಲಿತ ವಿರೋಧಿ ನೀತಿಯನ್ನು ಅಂಬೇಡ್ಕರ್ ವಿರೋಧಿಸುತ್ತಿದ್ದರು ಎಂದು ವಿವರಿಸಿದರು ಗೂಳಿಹಟ್ಟಿಯವರು ತೊದಲುತ್ತ ಮಾತನಾಡಿದ್ದಾರೆ. ರಾತ್ರಿ 8ರ ನಂತರ ಮಾತನಾಡಿದ ಧ್ವನಿಯಂತಿದೆ ಎಂದು ನುಡಿದರು. ಇದರ ಕುರಿತು ರಾಜ್ಯದ ಜನತೆ ತೀರ್ಮಾನಿಸಲಿ ಎಂದು ತಿಳಿಸಿದರು.