ಬೆಂಗಳೂರು, ಜು.15:
ಡಿ.ಕೆ.ಶಿವಕುಮಾರ್ ರಾಜ್ಯದ ಪ್ರಭಾವಿ ರಾಜಕಾರಣಿ, ಕೆಪಿಸಿಸಿ ರಾಜ್ಯಾಧ್ಯಕ್ಷ, ಮೇಲಾಗಿ ರಾಜ್ಯದ ಉಪ ಮುಖ್ಯಮಂತ್ರಿ.ಇವರ ಚಲನವಲನಗಳನ್ನು ತೀವ್ರ ನಿಗಾವಹಿಸಿ ಭದ್ರತಾ ಸಿಬ್ಬಂದಿ ಕಾಯುತ್ತಿರುತ್ತಾರೆ. ಇಷ್ಟೊಂದು ಭದ್ರತೆ ಇರುವ ವ್ಯಕ್ತಿಯ ಶೂ ಕಳ್ಳತನವಾಗಿದೆ.
ಆಶ್ಚರ್ಯಕರ ಘಟನೆ ಅಲ್ಲವೆ..? ಆದರೂ ನಿಜ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದ ಹಲವು ರಸ್ತೆಗಳ ವೈಟ್ ಟ್ಯಾಪಿಂಗ್ ಯೋಜನೆ ರೂಪಿಸಿದ್ದು, ಕಾಮಗಾರಿ ಆರಂಭಕ್ಕೆ ಚಾಲನೆ ನೀಡಲಾಗುತ್ತಿದೆ.
ಅದೇ ರೀತಿಯಲ್ಲಿ ಸದಾಶಿವನಗರದ ಭಾಷ್ಯಂ ಸರ್ಕಲ್ ನಲ್ಲಿ ಆಯೋಜನೆ ಮಾಡಿದ್ದ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿ ಪೂಜೆಗೆ ಡಿಕೆಶಿ ಆಗಮಿಸಿದ್ದರು. ಈ ವೇಳೆ ಡಿ.ಕೆ.ಶಿವಕುಮಾರ್ ಶೂ ತೆಗೆದಿಟ್ಟು ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿ ಪೂಜೆ ನೆರವೇರಿಸಿದ್ದಾರೆ.
ಪೂಜೆ ನೆರವೇರಿದ ಬಳಿಕ ಹೊರಡಲು ಸಿದ್ಧರಾದ ಡಿಸಿಎಂ ಡಿ.ಕೆ.ಶಿವಕುಮಾರ್, ಶೂ ಹಾಕಿಕೊಳ್ಳಲೆಂದು ಬಂದರೆ ಅವರು ಶೂ ಕಳಚಿಟ್ಟಿದ್ದ ಜಾಗದಲ್ಲಿ ಅದು ಇರಲೇ ಇಲ್ಲ.ತಕ್ಷಣವೇ ಅವರ ಸಿಬ್ಬಂದಿ ಶೂ ಗಾಗಿ ಅಲ್ಲಿ-ಇಲ್ಲಿ ಹುಡುಕಾಟ ನಡೆಸಿದರು. ಆದರೆ,ಅದು ಪತ್ತೆಯಾಗಲೇ ಇಲ್ಲ.ಹೀಗಾಗಿ ಅವರ ಶೂ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಇಟ್ಟ ಜಾಗದಲ್ಲಿ ಶೂ ಇಲ್ಲ. ಎಷ್ಟು ಹುಡುಕಾಡಿದರೂ ಶೂ ಸಿಗದ ಕಾರಣ ಡಿ.ಕೆ.ಶಿವಕುಮಾರ್ ತಮ್ಮ ಕಾರಿನಲ್ಲಿದ್ದ ಮತ್ತೊಂದು ಶೂ ಧರಿಸಿ ಪ್ರಯಾಣ ಮುಂದುವರೆಸಿದರು.

