ಬೆಂಗಳೂರು, ಏ.28: ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಿದೆ’ ರಾಜ್ಯ ಸಿಐಡಿ ಪೊಲೀಸ್ ಮುಖ್ಯಸ್ಥ ಬಿ.ಕೆ. ಸಿಂಗ್ ವಿಶೇಷ ತನಿಕಾ ತಂಡದ ಮುಖ್ಯಸ್ಥರಾಗಿದ್ದು ಇನ್ನು ಐಪಿಎಸ್ ಅಧಿಕಾರಿಗಳಾದ ಸುಮನ್ ಡಿ.ಪನ್ನೇಕರ್ ಮತ್ತು ಸಿನಿಮಾ ಲಾಟ್ಕರ್ ವಿಶೇಷ ತನಿಖಾ ತಂಡದ ಸದಸ್ಯರಾಗಿದ್ದಾರೆ. ಈ ನಡುವೆ ಸಂಸದ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗಿದ್ದಾರೆ ಎಂಬ ವರದಿಗಳಿವೆ.
ಸಂತ್ರಸ್ತ ಮಹಿಳೆಯರ ದೂರು ಆಧರಿಸಿ ಹಾಸನದ ಸಂಸದರ ವಿರುದ್ಧ ಕೇಳಿಬಂದಿರುವ ದೂರು ತನಿಖೆಗೆ ವಿಶೇಷ ದಳವನ್ನು ರಚಿಸಲಾಗಿದ್ದು, ಶಂಕಿತ ಆರೋಪಿ ದೇಶ ಬಿಟ್ಟು ಪರಾರಿಯಾಗಿದ್ದರೆ ಆ ಸಂಬಂಧಪಟ್ಟಂತೆ ಎಸ್ಐಟಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ತ ಮಹಿಳೆಯರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಅದನ್ನು ಆಧರಿಸಿ ಮಹಿಳಾ ಆಯೋಗ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದೆ. ಪತ್ರದ ಹಿನ್ನೆಲೆಯಲ್ಲಿ ಸರ್ಕಾರ ವಿಶೇಷ ತನಿಖಾ ದಳ ರಚಿಸಲಾಗಿದೆ ಎಂದರು.
ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗಿದ್ದಾರೆ ಎಂಬ ಸುದ್ದಿ ಬಂದಿದೆ. ಕಾನೂನು ಪ್ರಕಾರ ಎಸ್ಐಟಿ ಅಗತ್ಯವಾದ ಸೂಕ್ತ ಕ್ರಮ ಕೈಗೊಳ್ಳಲಿದೆ. ವಿದೇಶದಿಂದ ವಾಪಸ್ ಕರೆತರುವ ಕೆಲಸವನ್ನೂ ಎಸ್ಐಟಿ ಮಾಡಲಿದೆ ಎಂದು ಹೇಳಿದರು.
ನಾಚಿಕೆಗೇಡು:
ಈ ಬಗ್ಗೆ ಪ್ರತಿಕ್ರಿಯಿಸಿರುವ,ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ
ತಲೆ ತಗ್ಗಿಸುವ ಕೆಲಸ ಮಾಡಿ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ ವಿಚಾರವಾಗಿದೆ ಎಂದು ಹೇಳಿದರು.
ಈ ಪ್ರಕರಣದಿಂದ ಮಾಜಿ ಪ್ರಧಾನಿಗಳು,ತಲೆ ತಗ್ಗಿಸುವಂತಾಗಿರುವುದಕ್ಕೆ ತೀವ್ರ ನೋವಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮಹಿಳೆ ನೀಡಿದ ದೂರು ಆಧರಿಸಿ ಮಹಿಳಾ ಆಯೋಗ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದೆ. ಮುಖ್ಯಮಂತ್ರಿಯವರೇ ಖುದ್ದಾಗಿ ನಿಗಾ ವಹಿಸಿದ್ದು, ಗೃಹಸಚಿವರು ಉಸ್ತುವಾರಿ ವಹಿಸಿದ್ದಾರೆ ಎಂದರು.
ಮಾಧ್ಯಮಗಳಿಂದ ತಿಳಿದಿರುವ ಮಾಹಿತಿ ಪ್ರಕಾರ, ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಇದು ಅಕ್ಷಮ್ಯ ಅಪರಾಧ. ಇಡೀ ದೇಶವೇ ನಾಚಿಕೆಪಡುವಂತಹ ವಿಚಾರ. ಸಂಸದರಾಗಿರುವವರು, ಮಾಜಿ ಪ್ರಧಾನಿಯವರ ಮೊಮ್ಮಗ ಈ ರೀತಿ ಕೆಲಸ ಮಾಡಿ ತಲೆ ಮರೆಸಿಕೊಂಡಿರುವುದು ನಾಚಿಕೆಗೇಡು ಎಂದರು ಬಿಜೆಪಿ ನಾಯಕರು ಈ ವಿಚಾರವಾಗಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡುತ್ತೇನೆ. ಇಲ್ಲಿ ಮಹಿಳೆಯರ ಘನತೆ ಅತೀ ಮುಖ್ಯವಾದ ವಿಚಾರ. ಕಾನೂನು ತನ್ನದೇ ಆದ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪ್ರತಿಭಟನೆ:
ಈ ವಿದ್ಯಮಾನದ ಬಗ್ಗೆ ತೀವ್ರ ದಿಗ್ಭ್ರಮೆ ಮತ್ತು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮಹಿಳಾ ನಾಯಕಿಯರು,ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳಾ ನಾಯಕಿಯರಾದ, ಮಂಜುಳಾ ನಾಯ್ಡು, ಕವಿತಾ ರೆಡ್ಡಿ, ಭವ್ಯಾ ನರಸಿಂಹಮೂರ್ತಿ ಸೇರಿದಂತೆ ಹಲವರು ಪ್ರಜ್ವಲ್ ರೇವಣ್ಣ ಅತ್ಯಂತ ಪ್ರಭಾವಿ ಕುಟುಂಬದಿಂದ ಬಂದವರು, ಅವರ ತಾತ ಪ್ರಧಾನಿಯಾಗಿದ್ದರು, ಚಿಕ್ಕಪ್ಪ ಮುಖ್ಯಮಂತ್ರಿಯಾಗಿದ್ದರು, ತಂದೆ ಸಚಿವರಾಗಿದ್ದರು, ಪ್ರಜ್ವಲ್ ರೇವಣ್ಣ ಖುದ್ದು ಸಂಸದರಾಗಿದ್ದಾರೆ. ಅವರ ವಿರುದ್ಧ ಹೋರಾಟ ನಡೆಸುವುದು ಸಾಮಾನ್ಯ ಮಹಿಳೆಯರಿಗೆ ಸುಲಭದ ವಿಚಾರವಲ್ಲ. ಹೀಗಾಗಿ ಸರ್ಕಾರ ಸಂತ್ರಸ್ತ ಮಹಿಳೆಯರಿಗೆ ಮತ್ತು ಅವರ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.

1 Comment
Tried it but im still on the fence about whether its really my thing, tbh. dreamcatcher game seems ok so far but gonna give it more time before I decide if I’m sticking with it.