ಚಿಕ್ಕಮಗಳೂರು,ಅ.27- ರಾಜ್ಯದಲ್ಲಿ ಹುಲಿ ಉಗುರು (Tiger Nail) ಭಾರೀ ಸದ್ದು ಮಾಡುತ್ತಿದ್ದು, ಹುಲಿ ಉಗುರು ಧರಿಸಿದ ಕಳಸದ ಅರಣ್ಯಾಧಿಕಾರಿಯೊಬ್ಬರು ಸೇವೆಯಿಂದ ಅಮಾನತುಗೊಂಡಿದ್ದಾರೆ.
ಕಳಸದ ಡಿಆರ್ ಎಫ್ಓ ದರ್ಶನ್ ಅಮಾನತಾದ ಅಧಿಕಾರಿಯಾಗಿದ್ದಾರೆ. ಇವರ ವಿರುದ್ಧ ಹುಲಿ ಉಗುರು ಧರಿಸಿದ್ದ ದೂರು ಬಂದಿತ್ತು. ಈ ಬಗ್ಗೆ ತನಿಖೆಗೆ ಹಾಜರಾಗುವಂತೆ ಇಲಾಖೆ ಸೂಚಿಸಿತ್ತು. ತನಿಖೆಗೆ ಹಾಜರಾಗದ ಹಿನ್ನೆಲೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಅಧಿಕಾರಿ ವಿರುದ್ಧ, ಹುಲಿ ಉಗುರು ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಲಿಖಿತ ದೂರು ನೀಡಲಾಗಿತ್ತು. ಅಲ್ಲದೇ ವನ್ಯ ಜೀವಿ ಕಾಯ್ದೆ ಅಡಿ ಪ್ರಕರಣ ದಾಖಲಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೊಪ್ಪದ ಡಿಎಫ್ಓ ನಂದೀಶ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಅರೆನೂರು ಗ್ರಾಮದ ಸುಪ್ರೀತ್ ಹಾಗೂ ಅಬ್ದುಲ್ ಎಂಬವರು ಆಲ್ದೂರು ವಲಯ ಅರಣ್ಯಾಧಿಕಾರಿಗೆ ಈ ಸಂಬಂಧ ದೂರು ನೀಡಿದ್ದರು.