ಬೆಂಗಳೂರು – ಉಕ್ಕಿನ ಮಹಿಳೆ ಎಂದೇ ಖ್ಯಾತಿ ಪಡೆದ ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ (Indira Gandhi)
ರಾಜಕೀಯವಾಗಿ ತೀವ್ರ ಹಿನ್ನಡೆ ಅನುಭವಿಸಿದ ನಂತರ ಅವರಿಗೆ ರಾಜಕೀಯ ಮರು ಹುಟ್ಟು ನೀಡಿದ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಕರ್ನಾಟಕ.
ಕರ್ನಾಟಕದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಉದ್ದೇಶದ ಚರಿತ್ರೆಯಲ್ಲಿ ಹೊಸ ದಾಖಲೆ ನಿರ್ಮಿಸಿದ ಇಂದಿರಾ ಗಾಂಧಿಯವರ ಅಂದಿನ ಚುನಾವಣೆಯ ಕುರಿತು ಒಂದು ವರದಿ ಇಲ್ಲಿದೆ.
ತುರ್ತು ಪರಿಸ್ಥಿತಿಯ ನಂತರ 1978ರಲ್ಲಿ ನಡೆದ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಸೋತ ಇಂದಿರಾಗಾಂಧಿ, ಉಪ ಚುನಾವಣೆಗಾಗಿ ಚಿಕ್ಕಮಗಳೂರು ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ರಾಜ್ಯದಲ್ಲಿ ಡಿ. ದೇವರಾಜ ಅರಸು ನೀಡಿದ ಆಡಳಿತವೇ ಕಾರಣ. ಇಂದಿರಾಗಾಂಧಿ ಅವರ ಜೀವನ ಚರಿತ್ರೆ ಬರೆದಿರುವ ಕಾಥೇಲಿನ್ ಫ್ರಾಂಕ್ ಅವರೇ ಇದನ್ನು ಹೇಳಿದ್ದಾರೆ.
ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ.50 ರಷ್ಟು ಮಹಿಳೆಯರು, ಶೇ.45 ರಷ್ಟು ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತ ಮತದಾರರು ಇದ್ದರು. ಅರಸು ಅವರು ತಳವರ್ಗದ ಜನರಲ್ಲಿ ಭರವಸೆ ತುಂಬುವ ಅನೇಕ ಯೋಜನೆ ತಂದಿದ್ದರು. ಭೂ ಸುಧಾರಣಾ ಕಾಯ್ದೆ, ಜೀತ ವಿಮುಕ್ತಿ, ಮಲ ಹೊರುವ ಪದ್ದತಿ ನಿಷೇಧ ಇವೆಲ್ಲ ಈ ಕ್ಷೇತ್ರದಲ್ಲಿ ಪರಿಣಾಮ ಬೀರಿರುವ ಮಾಹಿತಿ ಇಂದಿರಾ ಸಂಗ್ರಹಿಸಿದ್ದರು.
ತಳ ವರ್ಗದ ಜನ, ಬಡವರು ಅರಸು ಆಡಳಿತದ ಫಲಾನುಭವಿಗಳಾಗಿದ್ದಾರೆ ಎಂಬ ಆಶಾದಾಯಕ ವಿವರವೂ ಸಿಕ್ಕಿತ್ತು. ಆದ್ದರಿಂದಲೇ ಕರ್ನಾಟಕದಲ್ಲಿ ಕಾಂಗ್ರೆಸ್ 26 ಸ್ಥಾನಗಳನ್ನು ಆ ಚುನಾವಣೆಯಲ್ಲಿ
ಗೆದ್ದಿತ್ತು. ಆದ್ದರಿಂದಲೇ ಅವರು ಈ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದರು.
ರಾಯ್ಬರೇಲಿಯಲ್ಲಿ ಇಂದಿರಾಗಾಂಧಿ 1,22,517 ಮತಗಳನ್ನು ಪಡೆದಿದ್ದರೆ, ಅವರ ಎದುರು ಭಾರತೀಯ ಲೋಕದಳದ ಅಭ್ಯರ್ಥಿ ರಾಜನಾರಾಯಣ್ ಅವರು 1.77,719 ಮತಗಳನ್ನು ಪಡೆದು ಚುನಾಯಿತರಾಗಿದ್ದರು.
ಚಿಕ್ಕಮಗಳೂರಿನಿಂದ ಸ್ಪರ್ಧಿಸಲು ಇಂದಿರಾ ನಿರ್ಧರಿಸಿದ ನಂತರ ಅಲ್ಲಿಂದ ಗೆದ್ದಿದ್ದ ಡಿ.ಬಿ. ಚಂದ್ರೇಗೌಡ ರಾಜೀನಾಮೆ ನೀಡಿದರು. ಇಂದಿರಾ ಎದುರು ಜನತಾ ಪರಿವಾರದ ಅಭ್ಯರ್ಥಿಯಾಗಿ ವೀರೇಂದ್ರ ಪಾಟೀಲ್ ಸ್ಪರ್ಧೆ ಮಾಡಿದರು.
ಅಟಲ್ ಬಿಹಾರಿ ವಾಜಪೇಯಿ ಲಾಲ್ ಕೃಷ್ಣ ಅಡ್ವಾಣಿ ಜಾರ್ಜ್ ಫರ್ನಾಂಡಿಸ್ ಸೇರಿದಂತೆ ಅಂದಿನ
ಜನತಾ ಪರಿವಾರದ ಘಟಾನುಘಟಿ ನಾಯಕರು ಇಂದಿರಾ ವಿರುದ್ಧ ಪ್ರಚಾರದಲ್ಲಿ ತೊಡಗಿದ್ದರು.
ಉಗ್ರ ಭಾಷಣಕಾರರಾಗಿದ್ದ ಜಾರ್ಜ್ ಫರ್ನಾಂಡೀಸ್ ಅವರು, ಇಂದಿರಾ ಅವರನ್ನು ಕುರಿತು ‘ಶೀ ಈಸ್ ಕೊಬ್ರಾ' ಎಂಬ ಆರೋಪವನ್ನೇ ಮಾಡಿದ್ದರು. ಆಗ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ಅವರಿಗೆ ಇಂದಿರಾ ಮತ್ತೆ ಸಂಸತ್ಗೆ ಬರುವುದು ಇಷ್ಟವಿರಲಿಲ್ಲ. ಆದ್ದರಿಂದಲೇ ಅವರನ್ನು ಸೋಲಿಸಲು ಎಲ್ಲ ಪ್ರಯತ್ನ ಮಾಡಿದ್ದರು. ಹೆಜ್ಜೆ ಹೆಜ್ಜೆಗೂ ಪ್ರಚಾರದಲ್ಲಿ ಕಿರುಕುಳ ನೀಡಿದ್ದರು.
ಪ್ರಚಾರ ವೈಖರಿ:
ಪ್ರಚಾರ ಹೇಗಿತ್ತು ಇಂದಿರಾ ಅವರ ಪ್ರಚಾರದಲ್ಲಿ ಬಹಳ ಭದ್ರತೆ ಇರುತ್ತಿತ್ತು. ಯಾವುದೇ ಸೌಲಭ್ಯಗಳೇ ಇಲ್ಲದ ಅತಿಥಿ ಗೃಹಗಳಲ್ಲಿ ತಂಗುತ್ತಿದ್ದರು. ಕೇಂದ್ರ ಸರ್ಕಾರ ಕಳಸದ ಬಳಿಯ ಅತಿಥಿ ಗೃಹದಲ್ಲಿ ಒಂದು ದಿನ ಕಾಯ್ದಿರಿಸಿದ್ದ ರೂಂನ್ನು ಕೊಡದಂತೆ ಆದೇಶಿಸಿತ್ತು. ಇಂದಿರಾ ಯಾವುದೇ ತಕರಾರು ಮಾಡಲಿಲ್ಲ. ಆಗ ರಾತ್ರಿ 12.30 ಆಗಿತ್ತು. ಅವರನ್ನು ಕಾರ್ಕಳದ ಬಳಿಯ ಎತ್ತರದ ಗುಡ್ಡದ ಮೇಲಿದ್ದ ಅತಿಥಿ ಗೃಹಕ್ಕೆ ಕರೆದುಕೊಂಡು ಹೋಗಲು ಮುಖಂಡರು ನಿರ್ಧರಿಸಿದರು. ಆದರೆ ಜೀಪು ಓಡಿಸಲು ಚಾಲಕರು ಹಿಂದೇಟು ಹಾಕಿದರು. ಕೊನೆಗೆ ಚಂದ್ರೇಗೌಡರೇ ಚಾಲಕರಾಗಿ ಅವರಿಗೆ ಧೈರ್ಯ ತುಂಬಿ ದೀಪು ಚಲಾಯಿಸಿಕೊಂಡು ಬಂದಿದ್ದರು.
ಇಂದಿರಾ ಅವರಿದ್ದ ಜೀಪು ಅತಿಥಿಗೃಹದ ಬಳಿಗೆ ತಂದಾಗ ‘ಯೂ ಆರ್ ಗುಡ್ ಡ್ರೈವರ್' ಎಂದು ಪ್ರಶಂಸೆ ಮಾಡಿದ್ದರು. ಅಲ್ಲಿ ಕಾರ್ಯಕರ್ತರ ಜತೆ ಊಟ ಮಾಡಿ ವಿಶ್ರಾಂತಿಗೆ ಹೋದರೆ, ರಾಜ್ಯದ ಮುಖಂಡರೆಲ್ಲ ಚಳಿಯಲ್ಲಿ ಕೂತು ರಾತ್ರಿ ಇಡೀ ಜಾಗರಣೆ ಮೂಲಕ ಕಾಲಕಳೆದಿದ್ದರು.
ಪ್ರಚಾರದಲ್ಲಿ ಮೌನ:
ಚಂದ್ರೇಗೌಡರ ಸ್ವಂತ ಊರು ದಾರದಹಳ್ಳಿಯಲ್ಲಿ ಅವರ ಅಣ್ಣನ ಮನೆಯಲ್ಲಿ ಒಮ್ಮೆ ಇಂದಿರಾ ವಾಸ್ತವ್ಯ ಮಾಡಿದ್ದರು. ಒಂದು ದಿನ ಬೆಳಗಿನ ಜಾವ ಗೌಡರ ಅಣ್ಣ ಹೃದಯಾಘಾತದಿಂದ ನಿಧನರಾದರು. ಹೆಣ್ಣು ಮಕ್ಕಳೆಲ್ಲ ಅಳಲು ಪ್ರಾರಂಭಿಸಿದ್ದರು. ಬೆಳಗ್ಗೆ ಎದ್ದು ಬಂದ ಇಂದಿರಾಗಾಂಧಿ ಅಲ್ಲಿನ ಪರಿಸ್ಥಿತಿ ನೋಡಿ ಬೇಸರ ಪಟ್ಟರು. ಶವಕ್ಕೆ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಹೋದರು. ಇಡೀ ದಿನ ಯಾವ ಸಭೆಯಲ್ಲೂ ಮಾತನಾಡಲಿಲ್ಲ. ಬರೀ ಕೈ ಮುಗಿದರು. ಊಟ, ತಿಂಡಿಯನ್ನು ಮಾಡಲಿಲ್ಲ. ಸಂಜೆ ಬರೀ ಒಂದೇ ಒಂದು ಸೇಬು ತಿಂದಿದ್ದರು. ಪ್ರಚಾರದ ಸಂದರ್ಭದಲ್ಲಿ ನಿದ್ದೆ, ಊಟ, ತಿಂಡಿಗೆ ಯಾವತ್ತೂ ಯೋಚಿಸಿದವರೇನು ಅಲ್ಲ.
ಚಂದ್ರೇಗೌಡರು ಇಂದಿರಾ ಅವರಿಗೆ ಒಂದು ಲಕ್ಷ ಅಂತರದಲ್ಲಿ ಗೆಲ್ಲುತ್ತೀರಿ ಎಂಬ ಮಾತನ್ನು ಹೇಳಿದ್ದರು. ಫಲಿತಾಂಶ ಬಂದಾಗ ಇಂದಿರಾ ಅವರು 2,49,376 ಹಾಗೂ ವೀರೇಂದ್ರ ಪಾಟೀಲ್ 1,72,043 ಮತಗಳನ್ನು ಪಡೆದಿದ್ದರು. ಇಂದಿರಾ 77,333 ಮತಗಳ ಅಂತರದಿಂದ ಆಯ್ಕೆಯಾಗಿದ್ದರು. ಆಗ ಅವರು ಚಂದ್ರೇಗೌಡ ಅವರ ಬಳಿಯಲ್ಲಿ ಉಳಿದ 23 ಸಾವಿರ ಮತ ಎಲ್ಲಿ ಎಂಬ ಹಾಸ್ಯ ಚಟಾಕಿ ಹಾರಿಸಿದ್ದರು. ಮತಗಳು ಕಡಿಮೆಯಾಗಿದ್ದರ ಬಗ್ಗೆ ಮಾಹಿತಿ ಸಹ ಪಡೆದಿದ್ದರು. ಚುನಾವಣೆ ಮುಗಿಸಿ ವಾಪಾಸು ಹೋದ ನಂತರ ಸ್ವತಃ ಇಂದಿರಾ ಅವರೇ ಇಲ್ಲಿನ ಮುಖಂಡರಿಗೆ ಪತ್ರ ಬರೆದು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದರು.