ಬೆಂಗಳೂರು, ಆ.7- ಸರ್ಕಾರಿ ನೌಕರರ ವರ್ಗಾವಣೆಗೆ ಲಂಚ ಪಡೆಯಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಕೇಳಿಬಂದಿರುವ ಬೆನ್ನಲ್ಲೇ
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಲಂಚದ ಆರೋಪ ಕೇಳಿಬಂದಿದ್ದು,ಕೃಷಿ ಇಲಾಖೆ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
ಇದರ ಬೆನ್ನಲ್ಲೇ ಈ ದೂರಿನ ಪತ್ರ ನಕಲಿ ಎಂದು ಆರೋಪಿಸಿರುವ ಕೃಷಿ ಮಂತ್ರಿ ಚಲುವರಾಯಸ್ವಾಮಿ ಈ ಬಗ್ಗೆ ಇಲಾಖಾ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
ಸಚಿವ ಚಲುವರಾಯಸ್ವಾಮಿ ಅವರು ಲಂಚಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ಕೃಷಿ ಇಲಾಖೆಯ 7 ಮಂದಿ ಸಹಾಯಕ ನಿರ್ದೇಶಕರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಪತ್ರ ತಮ್ಮ ಕೈ ಸೇರುತ್ತಿದ್ದಂತೆ ಈ ಬಗ್ಗೆ ಕ್ರಮ ವಹಿಸುವಂತೆ ರಾಜ್ಯಪಾಲರ ಅಧೀನ ಕಾರ್ಯದರ್ಶಿ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಬರೆದಿದ್ದಾರೆ ಈ ರೀತಿಯ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಪತ್ರದಲ್ಲಿ ಸಚಿವ ಚಲುವರಾಯಸ್ವಾಮಿ ಅವರು 8ರಿಂದ 10 ಲಕ್ಷ ರೂಪಾಯಿವರೆಗೆ ಲಂಚ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ಲಂಚಕ್ಕೆ ಕಡಿವಾಣ ಹಾಕದಿದ್ದರೆ ನಾವು ಹಾಗೂ ನಮ್ಮ ಕುಟುಂಬ ಸದಸ್ಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಪತ್ರದಲ್ಲಿ ದೂರುದ್ದಾರೆ. ಈ ಅರ್ಜಿಯನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ವಹಿಸುವಂತೆ ಕೋರುತ್ತೇನೆ' ಎಂದು ರಾಜ್ಯಪಾಲರ ಅಧೀನ ಕಾರ್ಯದರ್ಶಿ ಜಿ.ಪ್ರದೀಪ್ ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ ಮತ್ತು ಮದ್ದೂರು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಮತ್ತು ಸಿಬ್ಬಂದಿಗಳು ಉಲ್ಲೇಖಿತ ದೂರು ಅರ್ಜಿಯನ್ನು ಸಲ್ಲಿಸುತ್ತಾರೆ.ದೂರಿನ ಅರ್ಜಿಯ ಮೂಲ ಪ್ರತಿಯನ್ನು ಈ ಪತ್ರದೊಂದಿಗೆ ಲಗ್ಗತಿಸಲಾಗಿದೆ.
ಸಚಿವರು ಮಂಡ್ಯ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಮೂಲಕ ಒತ್ತಡ ಹೇರುತ್ತಿದ್ದಾರೆಂದು ಆರೋಪಿಸಿರುತ್ತಾರೆ,
ಲಂಚ ಕೇಳುವ ಇಂತಹ ಅನಿಷ್ಠ ಪದ್ಧತಿಗೆ ಕಡಿವಾಣ ಹಾಕುವ ಸಂಬಂಧ ಕ್ರಮವಹಿಸದಿದ್ದಲ್ಲಿ ಅಧಿಕಾರಿಗಳು ಕುಟುಂಬ ಸದಸ್ಯರ ಜತೆಗೆ ವಿಷ ಕುಡಿಯುವುದಾಗಿ ತಿಳಿಸಿರುವುದ್ದರಿಂದ ಈ ದೂರಿನ ಅರ್ಜಿಯನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮವಹಿಸುವಂತೆ ತಮ್ಮನ್ನು ಕೋರಲು ರಾಜ್ಯಪಾಲರಿಂದ ನಿರ್ದೇಶಿತನಾಗಿದ್ದಾನೆ ಎಂದು ಪತ್ರದಲ್ಲಿ ಹೇಳಲಾಗಿದೆ.
ತನಿಖೆಗೆ ಸೂಚನೆ:
ಈ ಕುರಿತು ಮಂಡ್ಯದದಲ್ಲಿ ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ ತಮ್ಮ ವಿರುದ್ಧ ಲಂಚದ ಆರೋಪ ಹೊರಿಸಿರುವ ಪತ್ರದ ಸತ್ಯಾಸತ್ಯತೆ ತಿಳಿಯಲು ತನಿಖೆಗೆ ಸೂಚಿಸುವುದಾಗಿ ತಿಳಿಸಿದರು.
ಇದೊಂದು ನಕಲಿ ಪತ್ರವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳೇ ಹೇಳಿದ್ದಾರೆ. ಆದರೂ ಪತ್ರದ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ' ಎಂದು ಹೇಳಿದರು.
ರಾಜ್ಯಪಾಲರಿಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಪತ್ರ ಬರೆದಿರುವ ವಿಚಾರ ಗೊತ್ತಿಲ್ಲ. ಬಹಳಷ್ಟು ಜನರು ಹುಡುಕಿ ಹುಡುಕಿ ತಮ್ಮ ವಿರುದ್ಧ ಗೊಂದಲ ಸೃಷ್ಟಿ ಮಾಡಲು ಕಾದಿದ್ದಾರೆ. ಒಂದು ವೇಳೆ ಯಾರಾದರೂ ತಪ್ಪು ಮಾಡಿದ್ದರೆ ತನಿಖೆ ನಡೆಸಲು ಕಾರ್ಯದರ್ಶಿಗೆ ನಿರ್ದೇಶನ ನೀಡಲಾಗುವುದು ಎಂದರು.
ನಮ್ಮನ್ನು ಹೆಚ್ಚೆಚ್ಚು ಟಾರ್ಗೆಟ್ ಮಾಡುವುದರಿಂದ
ಮತ್ತಷ್ಟು ನಾವು ಪ್ರಕಾಶಮಾನವಾಗುತ್ತೇವೆ. ಮಂಡ್ಯ ಜಿಲ್ಲೆಯಲ್ಲಿ ಜಂಟಿ ನಿರ್ದೇಶಕರು ಯಾರ ಬಳಿ ಮಾತನಾಡುವುದಾಗಲೀ, ಭೇಟಿ ಮಾಡುವುದಾಗಲೀ ಮಾಡಿಲ್ಲ. ಅಷ್ಟೇ ಅಲ್ಲ ನಾನೂ ಕೂಡ ರಾಜ್ಯದ ಯಾವುದೇ ಜಿಲ್ಲೆಯ ಸಹಾಯಕ ನಿರ್ದೇಶಕರನ್ನು ಭೇಟಿ ಮಾಡಿಲ್ಲ ಎಂದು ಅವರು ತಿಳಿಸಿದರು.
ಕೆಲವರು ಬೆಳಿಗ್ಗೆ ಎದ್ದು ತಿಂಡಿ, ಊಟ ಮಾಡದೆ ನನ್ನನ್ನು ಟಾರ್ಗೆಟ್ ಮಾಡುವುದೇ ಕೆಲಸವಾಗಿದೆ. ಅದಕ್ಕೆ ಯಾವುದೇ ಬೇಸರವಿಲ್ಲ. ನನ್ನ ಕೆಲಸವನ್ನು ನಾನು ಮಾಡುತ್ತೇನೆ ಎಂದು ಹೇಳಿದರು.
ಪತ್ರ ಬರೆದಿಲ್ಲ:
ಈ ವಿದ್ಯಮಾನಗಳ ಕುರಿತು ಸ್ಪಷ್ಟನೆ ನೀಡಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ‘ನಮ್ಮ ಇಲಾಖೆಯ ಸಹಾಯಕ ನಿರ್ದೇಶಕರು ಕೃಷಿ ಸಚಿವರ ವಿರುದ್ಧ ಪತ್ರ ಬರೆದಿಲ್ಲ, ನಮ್ಮ ಜಿಲ್ಲೆಯಿಂದ ಯಾವುದೇ ದೂರು ರಾಜ್ಯಪಾಲರ ಕಚೇರಿಗೆ ಹೋಗಿಲ್ಲ' ಎಂದು ತಿಳಿಸಿದರು.
ಎಲ್ಲಾ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದೇನೆ, ಕೃಷಿ ಸಚಿವರ ವಿರುದ್ಧ ಪತ್ರ ಬರೆದಿಲ್ಲ ಎಂದು ಎಲ್ಲರೂ ತಿಳಿಸಿದ್ಧಾರೆ. ಈ ಬಗ್ಗೆ ಸಚಿವರು ವಿವರಣೆ ಕೋರಿದ್ದರು. ನಮ್ಮ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿಲ್ಲ ಎಂದು ತಿಳಿಸಿದ್ದೇನೆ' ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಆರೋಪ:
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ‘ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಗರಿಷ್ಠ ಮಟ್ಟ ತಲುಪಿದೆ. ಹಣ ಕೊಟ್ಟವರಿಗೆ ಹುದ್ದೆಗಳನ್ನು ಹರಾಜು ಹರಾಜು ಹಾಕಲಾಗುತ್ತಿದೆ' ಎಂದು ಆರೋಪಿಸಿದ್ಧಾರೆ.
ಚೆಲುವರಾಯಸ್ವಾಮಿ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಶಾಸಕರ ಪತ್ರ ನಕಲು ಎಂದಿದ್ದ ನೀವು, ಈಗ ನಿಮ್ಮ ಸಚಿವರ ಕರ್ಮಕಾಂಡ ಬಯಲು ಮಾಡುವ ಪತ್ರವೂ ನಕಲು ಎನ್ನುತ್ತಿರೋ ಹೇಗೆ…?, ನೀವು ಈ ಕೂಡಲೇ ಭ್ರಷ್ಟ ಸಚಿವರ ರಾಜೀನಾಮೆ ಪಡೆದುಕೊಳ್ಳಬೇಕು ಅಥವಾ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು' ಎಂದು ಬಿಜೆಪಿ ಒತ್ತಾಯಿಸಿದೆ