ಬೆಂಗಳೂರು – ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿರುವ ಶಿಕ್ಷಣ ತಜ್ಞ ಮನ್ಸೂರ್ ಅಲಿ ಖಾನ್ ತಮ್ಮ ವಿಶಿಷ್ಟ ವಾದ ಪ್ರಚಾರ ಶೈಲಿಯಿಂದ ಮತದಾರರ ಮನೆಗೆಲ್ಲಲು ಪ್ರಯತ್ನ ನಡೆಸಿದ್ದಾರೆ.
ಯುವ ಮುಖಂಡರು, ಪರಿಸರವಾದಿಗಳು, ಶಿಕ್ಷಣ ತಜ್ಞರು, ಸಮಾಜ ಸೇವಕರು, ಉದ್ಯಮಿಗಳು ಹೀಗೆ ಸಮಾಜದ ನಾನಾವಲಯಗಳ ಪ್ರಮುಖರ ಜೊತೆಗೆ ಕ್ಷೇತ್ರದ ಹಲವೆಡೆ ಬಿರುಸಿನ ಪ್ರಚಾರ ಕೈಗೊಂಡು ಮತದಾರರಿಗೆ ಬದಲಾವಣೆಯ ಭರವಸೆ ನೀಡುವ ಮೂಲಕ ಮತ ಯಾಚನೆ ಮಾಡುತ್ತಿದ್ದಾರೆ.
ಇಂದು ಮುಂಜಾನೆ ಕಗ್ಗದಾಸಪುರ ಪಾರ್ಕ್ ಮತ್ತು ಡಿಫೆನ್ಸ್ ಕಾಲೋನಿ ಪಾರ್ಕ್ನಲ್ಲಿ ಗಿಡ ನೆಡುವ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ ಅವರು ಪರಿಸರ ಉಳಿದರೆ ಮನುಕುಲ ಉಳಿಯಲಿದೆ ರಾಜಕಾರಣ ಯಾವಾಗಲೂ ಇದ್ದದ್ದೇ ಆದರೆ ಪರಿಸರ ಮಾತ್ರ ಎಲ್ಲರಿಗೂ ಬೇಕಾದ ಅತ್ಯಮೂಲ್ಯವಾದ ಸಂಗತಿಯಾಗಿದೆ ಹೀಗಾಗಿ ಪರಿಸರ ಉಳಿಸಿ ಮತದಾನ ಮಾಡಿ ಬದಲಾವಣೆ ತನ್ನಿ ಎಂದು ಮನವಿ ಮಾಡಿದರು.
ಈ ವೇಳೆ ಅನೇಕ ಯುವ ಸೈಕ್ಲಿಸ್ಟ್ಗಳು ಹಾಗೂ ಹಿರಿಯ ನಾಗರಿಕರು ಹಾಗೂ ವಾಯುವಿಹಾರಿಗಳ ಜತೆ ಆತ್ಮೀಯ ಸಂವಾದ ನಡೆಸಿ, ಈ ಬಾರಿ ಬೆಂಗಳೂರು ಕೇಂದ್ರದಿಂದ ನನ್ನನ್ನು ಬೆಂಬಲಿಸುವ ದೇಶ ಕಟ್ಟುವ ಕಾರ್ಯಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು ಈ ಮಾತುಕತೆಯ ಸಮಯದಲ್ಲಿ ಆ ಪ್ರದೇಶದ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಮತ್ತು ಪರಿಸರ ಸಮತೋಲನದ ಬಗ್ಗೆ ಗಮನ ಪಡೆದರು ಸೈಕ್ಲಿಂಗ್ ಟ್ರ್ಯಾಕ್ ಹಾಗೂ ಉತ್ತಮ ವಾಕಿಂಗ್ ಪಾಥ್ ಗಳ ನಿರ್ಮಾಣದ ಅಗತ್ಯದ ಕುರಿತು ಅವರು ಮನವಿ ಮಾಡಿದರು.
ಮುಂಬರುವ ದಿನಗಳಲ್ಲಿ ಬೆಂಗಳೂರು ಕೇಂದ್ರದ ಶ್ವಾಸಕೋಶಗಳಂತಿರುವ ಈ ಪಾರ್ಕ್ ಗಳಲ್ಲಿ ವಾಯುವಿಹಾರಿಗಳಿಗೆ ಅಗತ್ಯ ಸೌಲಭ್ಯ ಒದಗಿಸುವ ಭರವಸೆ ನೀಡಿದ ಮನ್ಸೂರ್ ಅಲಿಖಾನ್ ಮಳೆ ನೀರು ಕೊಯ್ಲು , ತ್ಯಾಜ್ಯ ನೀರು ಸಂರಕ್ಷ ಸಂಸ್ಕರಣೆ ಯಂತಹ ವಿನೂತನ ಕ್ರಮಗಳಿಂದ ಜಲಮೂಲಗಳನ್ನು ಉಳಿಸಬೇಕಾಗಿದೆ ಎಂದು ಹೇಳಿದರು.
ಈ ವೇಳೆ ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಲವು ವಿಧಾನಸಭೆ ಕ್ಷೇತ್ರಗಳ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.