ಬೆಂಗಳೂರು, ನ.6 -ಮಹಾನಗರ ಬೆಂಗಳೂರಿನಲ್ಲಿ ಸಂಚಲನ ಮೂಡಿಸಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಹಾಗೂ ಹಿರಿಯ ಭೂ ವಿಜ್ಞಾನಿ ಪ್ರತಿಮಾ ಕೊಲೆ ಆರೋಪಿಯನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರತಿಮಾ (Pratima) ಅವರ ಕಾರು ಚಾಲಕನೇ ಹತ್ಯೆ ಆರೋಪಿ.
ಕೆಲಸದಿಂದ ತೆಗೆದ ದ್ವೇಷದ ಹಿನ್ನೆಲೆಯಲ್ಲಿ ಭೂ ವಿಜ್ಞಾನಿ ಪ್ರತಿಮಾ(45) ಅವರನ್ನು ಅವರ ಹಳೆ ಕಾರು ಚಾಲಕ ಕಿರಣ್ ಕೊಲೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ.
ಪ್ರತಿಮಾ (Pratima) ಅವರನ್ನು ಹತ್ಯೆ ಮಾಡಿದ ನಂತರ ಕಿರಣ್ ಚಾಮರಾಜನಗರದತ್ತ ಪರಾರಿಯಾಗಿದ್ದ ಆತನನ್ನು ಕ್ಷಿಪ್ರ ಕಾರ್ಯಚರಣೆ ನಡೆಸಿ ಮೊಬೈಲ್ ಲೋಕೇಶನ್ ಸಿಗ್ನಲ್ ಆಧರಿಸಿ ಮಹದೇಶ್ವರಬೆಟ್ಟದಲ್ಲಿ ಸೆರೆ ಹಿಡಿದು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ.
ಹತ್ಯೆ ಘಟನೆ ವರದಿಯಾದ ತಕ್ಷಣವೇ ಆರು ತಂಡ ರಚಿಸಿದ್ದರು. ಈ ತಂಡಗಳು ಭೂಮಾಫಿಯಾ, ಅಕ್ರಮ ಗಣಿಗಾರಿಕೆ ಕೌಟುಂಬಿಕ ವಿಚಾರ ಇತ್ಯಾದಿ ವಿಷಯಗಳ ಅಂಶಗಳನ್ನು ಆಧರಿಸಿ ತನಿಖೆ ಆರಂಭಿಸಲಾಗಿತ್ತು.
ಹುಣಸಮಾರನಹಳ್ಳಿ ಮತ್ತು ಸೊಣ್ಣಪ್ಪನಹಳ್ಳಿ ಭೂ ಸರ್ವೆ ಮಾಡಿದ್ದ ಪ್ರತಿಮಾ, 4 ಎಕರೆ 5 ಗುಂಟೆ ಜಮೀನಿನಲ್ಲಿ ಅಕ್ರಮ ಗಣಿಗಾರಿಗೆ ಮಾಡಿ 25 ಲಕ್ಷ ನಷ್ಟ ಉಂಟುಮಾಡಿದ್ದನ್ನು ಪತ್ತೆ ಮಾಡಿ ವರದಿ ನೀಡಿದ್ದರು.
ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಶಾಸಕರೊಬ್ಬರು ಸೇರಿದಂತೆ ನಾಲ್ಕು ಜನರ ವಿರುದ್ಧ ಎಫ್.ಐ.ಆರ್ ಕೂಡ ದಾಖಲಾಗಿತ್ತು. ಇತ್ತೀಚೆಗೆ ಹಲವು ಅಕ್ರಮ ಗಣಿಗಾರಿಕೆ ಸಂಬಂಧಿಸಿ ಪ್ರತಿಮಾ ದಾಳಿಗಳನ್ನು ನಡೆಸಿದ್ದರು. ಈ ಕೋನದಲ್ಲೂ ತನಿಖೆ ನಡೆದಿತ್ತು
ಅನುಮಾನದ ಮೇಲೆ ನಿನ್ನೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ಕಿರಣ್ ಕೃತ್ಯ ನಡೆಸಿರುವುದು ಪತ್ತೆಯಾಗಿದೆ.
ಕೆಲ ದಿನಗಳ ಹಿಂದೆ ಆರೋಪಿ ಕಾರು ಚಾಲಕ ಕಿರಣ್ ಅಪಘಾತ ನಡೆಸಿದ್ದು,ಅಲ್ಲದೇ ಅಕ್ರಮ ಗಣಿಗಾರಿಕೆ ಸಂಬಂಧ ದಾಳಿಗೆ ಹೋಗುವ ಸ್ಥಳದ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದ.
ಇದರಿಂದಾಗಿ ಪ್ರತಿಮಾ ಅವರು ಆತನನ್ನು 10 ದಿನಗಳ ಹಿಂದೆ ಕೆಲಸದಿಂದ ತೆಗೆದು ಹಾಕಿದ್ದು,ಕೆಲಸವಿಲ್ಲದೇ ಕಂಗಾಲಾದ ಆತ ಪ್ರತಿಮಾ ಅವರ ಬಳಿ ಮನವಿ ಮಾಡಿ ಕೆಲಸ ಕೇಳಲು ಮುಂದಾಗಿದ್ದ.
ಅದರಂತೆ ಕಳೆದ ನ.4 ರ ರಾತ್ರಿ 8ರ ವೇಳೆ ಹೊಸದಾಗಿ ನೇಮಿಸಿಕೊಂಡ ಕಾರು ಚಾಲಕ ಕೆಲಸ ಮುಗಿಸಿದ ಪ್ರತಿಮಾ ಅವರನ್ನು ದೊಡ್ಡಕಲ್ಲಸಂದ್ರದ ಕುವೆಂಪುನಗರದ ಮನೆ ಬಳಿ ಬಿಟ್ಟು ಹೋದ ಕೆಲವೇ ನಿಮಿಷಗಳಲ್ಲಿ ಅಲ್ಲಿಗೆ ಬಂದ ಕಿರಣ್ ನನ್ನನ್ನು ಕೆಲಸದಿಂದ ತೆಗೆಯಬೇಡಿ ಎಂದು ಪ್ರತಿಮಾರ ಕಾಲಿಗೆ ಬಿದ್ದು ಪರಿ ಪರಿಯಾಗಿ ಬೇಡಿಕೊಂಡಿದ್ದಾನೆ.
ಆದರೂ ಸಹ ಪ್ರತಿಮಾ ಒಪ್ಪಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಕಿರಣ್, ವೈರ್ ಮಾದರಿಯ ವಸ್ತುದಿಂದ ಪ್ರತಿಮಾ ಕುತ್ತಿಗೆಗೆ ಬಿಗಿದಿದ್ದಾನೆ.
ಉಸಿರುಗಟ್ಟಿ ನೆಲಕ್ಕೆ ಬಿದ್ದ ಪ್ರತಿಮಾ ಅವರನ್ನು ಬೆಡ್ ರೂಮ್ ಗೆ ಎಳೆದೊಯ್ದು ಚಾಕುವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿ ಚಾಮರಾಜನಗರದತ್ತ ಪರಾರಿಯಾಗಿದ್ದು ಪ್ರಕರಣ ದಾಖಲಿಸಿದ ಪೊಲೀಸರು ಕ್ಷಿಪ್ರ ಕಾರ್ಯಚರಣೆ ನಡೆಸಿ ಫೋನ್ ಸಿಗ್ನಲ್ ಆಧರಿಸಿ ಕೊನೆಗೆ ಮಹದೇಶ್ವರಬೆಟ್ಟದಲ್ಲಿ ಕಿರಣ್ ನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.