ತಿರುಪತಿ: ವೈಕುಂಠ ಏಕಾದಶಿ (Ekadashi) ಆಸ್ತಿಕರ ಪಾಲಿಗೆ ಅತ್ಯಂತ ಪವಿತ್ರವಾದ ದಿನ ಅಂದು ಎಲ್ಲರಿಗೂ ಸ್ವರ್ಗದ ಬಾಗಿಲು ಮುಕ್ತವಾಗಿ ತೆರೆದಿರುತ್ತದೆ ಎನ್ನುವುದು ನಂಬಿಕೆ.
ಇಂತಹ ವೈಕುಂಠ ಏಕಾದಶಿಯಂದು ವೈಕುಂಠಾಧಿಪತಿ ಶ್ರೀ ವೆಂಕಟೇಶ್ವರನ ದರ್ಶನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವುದು ಬಲವಾದ ನಂಬಿಕೆ. ಹೀಗಾಗಿ ವೈಕುಂಠಾಧಿಪತಿಯ ದರ್ಶನಕ್ಕೆ ಮುಗಿ ಬೀಳುತ್ತಾರೆ.
ಅದರಲ್ಲೂ ಕಲಿಯುಗದ ಪ್ರತ್ಯಕ್ಷ ದೈವ ನೆಲೆಸಿದ್ದಾನೆಂದು ನಂಬಲಾಗುವ ತಿರುಪತಿಯಲ್ಲಿ ವೆಂಕಟೇಶ್ವರನ ದರ್ಶನ ತಮ್ಮ ಪೂರ್ವ ಜನ್ಮದ ಸುಕೃತಫಲ ಎನ್ನುವರಿದ್ದಾರೆ.ಈ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ವೈಕುಂಠ ಏಕಾದಶಿ ಯಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬೇಕೆಂದು ಹಾತೊರೆಯುತ್ತಾರೆ.
ಭಕ್ತರ ಈ ಹಪಾಹಪಿಯನ್ನು ಗಮನಿಸಿದ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಈ ಬಾರಿ ವೈಕುಂಠ ಏಕಾದಶಿಗಾಗಿ ವಿಶೇಷ ವ್ಯವಸ್ಥೆ ಮಾಡಿದೆ.ದೇವರ ದರ್ಶನ ಮಾಡ ಬಯಸುವ ಸಾಮಾನ್ಯ ಜನತೆ ಯಾವುದೇ ಅಡಚಣೆ ಇಲ್ಲದೆ ಬರಬಹುದು ಎಂದು ಹೇಳಿದೆ.
ಈ ಬಾರಿ ಡಿಸೆಂಬರ್ 23 ರಂದು ವೈಕುಂಠ ಏಕಾದಶಿ (Ekadashi). ಸುಮಾರು ಒಂದು ಕೋಟಿ ಭಕ್ತರು ವೈಕುಂಠ ದ್ವಾರದ ಮೂಲಕ ತಿಮ್ಮಪ್ಪನ ದರ್ಶನ ಮಾಡಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ಹತ್ತು ದಿನಗಳ ಕಾಲ ದೇವಾಲಯದಲ್ಲಿ ವೈಕುಂಠ ಪ್ರವೇಶ ದ್ವಾರ ತೆರೆದಿಡಲು ತೀರ್ಮಾನ ಮಾಡಿದ್ದಾರೆ.
ಈ ಹತ್ತೂ ದಿನಗಳ ಕಾಲ ಅತಿ ಗಣ್ಯ ಅತಿಥಿಗಳ ವಿಶೇಷ ದರ್ಶನ, ಬ್ರೇಕ್ ದರ್ಶನ ಮೊದಲಾದ ಎಲ್ಲಾ ದರ್ಶನಗಳನ್ನು ರದ್ದು ಪಡಿಸಲಾಗಿದೆ.ಎಲ್ಲಾ ದಿನಗಳಲ್ಲೂ ಜನ ಸಾಮಾನ್ಯರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ
ದರ್ಶನಕ್ಕಾಗಿ ಭಕ್ತರಿಗೆ ಇದೇ ತಿಂಗಳ 10 ರಿಂದ 300 ರೂಪಾಯಿಗಳ ವಿಶೇಷ ಪ್ರವೇಶ ದರ್ಶನ ಟೋಕನ್ ಲಭ್ಯವಾಗಲಿದೆ.10 ದಿನಗಳ ಕಾಲ ಎರಡು ಲಕ್ಷ 25 ಸಾವಿರ ಟೋಕನ್ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುವುದು.ಇನ್ನೂ ಹೆಚ್ಚಿನ ಬೇಡಿಕೆ ಬಂದರೂ ಅದಕ್ಕೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಟಿಟಿಡಿ ಆಡಳಿತ ಮಂಡಳಿ ಸಿದ್ದತೆ ನಡೆಸಿದೆ.