ಬೆಂಗಳೂರು, ಡಿ.29- ವೃದ್ದೆಯೊಬ್ಬರ ಮನೆ ಮಾರಾಟ ಮಾಡಿಸಲು ಸಹಾಯ ಮಾಡುವ ನೆಪದಲ್ಲಿ ಅವರ ಆಸ್ತಿಯ ದಾಖಲೆ ಪತ್ರಗಳನ್ನು ಪಡೆದು ಅವುಗಳನ್ನು ಬ್ಯಾಂಕ್ ಗೆ ಅಡಮಾನವಿರಿಸಿ ಮೂರು ಕೋಟಿ ರೂಪಾಯಿ ವಂಚಿಸಿರುವ ಆರೋಪದ ಸುಳಿಗೆ ನಟ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (Rockline Venkatesh) ಅವರ ಪುತ್ರ ಅಭಿಲಾಷ್ ಸಿಲುಕಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಭಾಸ್ಕರ್, ಮಹೇಶ, ಅಭಿಷೇಕ್ ಗೌಡ, ಡಿ.ಆರ್ ಅರುಣ್, ಟಿ.ಪಿ ಶಿವಕುಮಾರ್ ಎಂಬುವವರನ್ನು ಬಂಧಿಸಿದ್ದಾರೆ.
ಜೆ.ಪಿ.ನಗರದಲ್ಲಿರುವ ವೃದ್ಧೆ ಅಂಬುಜಾಕ್ಷಿ ನಾಗರಕಟ್ಟಿ ಎಂಬುವರು ತಮ್ಮ (75) ಹೆಸರಿನಲ್ಲಿರುವ ಮನೆ ಮಾರಾಟ ಮಾಡಲು ಯತ್ನಿಸುತ್ತಿದ್ದರು.ಈ ಮಾಹಿತಿ ಪಡೆದ ತಂಡ, ವೃದ್ಧೆಗೆ ತಮ್ಮ ಆಸ್ತಿ ಮಾರಾಟ ಮಾಡಲು ಸಹಾಯ ಮಾಡುವುದಾಗಿ ನಂಬಿಸಿದೆ.ನಂತರ ಆಸ್ತಿಗೆ ಸಂಬಂಧಪಟ್ಟಂತೆ ದಾಖಲೆಗಳನ್ನು ಪಡೆದು ಅವುಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿದೆ ನಂತರ ಮೂರು ಬ್ಯಾಂಕ್ಗಳಿಂದ 3.85 ಕೋಟಿ ರೂ. ಸಾಲ ಪಡೆದು ವಂಚಿಸಿದೆ.
ಈ ಕುರಿತಂತೆ ಪ್ರಕರಣ ದಾಖಲಿಸಿದ ಪೊಲೀಸರು ಮಹೇಶ್ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಸಾಲ ಪಡೆದು ವಂಚಿಸಿದ ಹಣದ ವರ್ಗಾವಣೆ ಕುರಿತಂತೆ ಪರಿಶೀಲಿಸಿದಾಗ, ‘ಗೋ ಗ್ರೀನ್' ಹೆಸರಿನ ಚಾರ್ಟೆಡ್ ಅಕೌಂಟೆಂಟ್ ಕಂಪನಿಯ ಬ್ಯಾಂಕ್ ಖಾತೆಗೆ ಆಗಸ್ಟ್ ಹಾಗೂ ಸೆಪ್ಟೆಂಬರ್ನಲ್ಲಿ ಹಂತ ಹಂತವಾಗಿ ಸುಮಾರು 65 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿರುವುದು ಪತ್ತೆಯಾಗಿತ್ತು. ಈ ಬಗ್ಗೆ ಸ್ಪಷ್ಟೀಕರಣ ನೀಡಲು ಕಂಪೆನಿಯ ನಿರ್ದೇಶಕರಾದ ವೆಂಕಟೇಶ್, ಮಿಥುನ್ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕ್ ಲೈನ್ ವೆಂಕಟೇಶ್ ಅವರ ಪುತ್ರ ಅಭಿಲಾಷ್ರನ್ನು ವಿಚಾರಣೆ ನಡೆಸಲಾಗಿದೆ.ಇದೀಗ ಅವರಿಗೆ ಸಿಸಿಬಿ ಮತ್ತೊಮ್ಮೆ ನೋಟೀಸ್ ನೀಡಿದ್ದು ಅವರಿಗೆ ಬಂಧನ ಭೀತಿ ಎದುರಾಗಿದೆ.
ವೃದ್ಧೆಯ ಆಸ್ತಿಯ ನಕಲಿ ದಾಖಲೆ ಸೃಷ್ಟಿಸಿ ಪಡೆದ ಸಾಲದ ಮೂರು ಕೋಟಿ ರೂಪಾಯಿ ಪೈಕಿ ಒಂದು ಕೋಟಿ ಮಿಥುನ್ ಎಂಬ ಓರ್ವ ಪಾಲುದಾರನ ಮೂಲಕ ಅಭಿಲಾಷ್ ಪಾಲುದಾರನಾಗಿರುವ ಕಂಪನಿಗೆ ಬಂದಿದೆ. ಬಳಿಕ ನಲವತ್ತು ಲಕ್ಷ ಹಣವನ್ನು ಮಿಥುನ್ ಪಡೆದಿದ್ದಾನೆ. ಉಳಿದ ಅರವತ್ತು ಲಕ್ಷ ಕಂಪನಿಯ ಅಕೌಂಟ್ ನಲ್ಲಿಯೇ ಇದೆ. ಇದು ಕಂಪನಿಯ ಪಾಲುದಾರನಾಗಿರುವ ಅಭಿಲಾಷ್ ಗೆ ಸೇರಿದ್ದು ಈ ಬಗ್ಗೆ ಮಾಹಿತಿ ಪಡೆಯಲು ಸಿಸಿಬಿ ವಿಚಾರಣೆಗೆ ಕರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಅಭಿಲಾಷ್ ಮೊದಲ ವಿಚಾರಣೆ ವೇಳೆ ಸರಿಯಾದ ಮಾಹಿತಿ ನೀಡಿಲ್ಲ. ಹೀಗಾಗಿ ಮತ್ತೆ ವಿಚಾರಣೆಗೆ ಕರೆಯಲಾಗಿದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ಅಭಿಷೇಕ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ALSO READ | Latest Kannada News