ಬೆಂಗಳೂರು, ಡಿ.1: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಅತ್ಯಧಿಕ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಬೇಕೆಂದು ಪಣತೊಟ್ಟಿರುವ ರಾಜ್ಯ ಕಾಂಗ್ರೆಸ್ ನಾಯಕರು ಇದೀಗ ಇದಕ್ಕಾಗಿ ಹೊಸದೊಂದು ತಂತ್ರವನ್ನು ರೂಪಿಸಿದ್ದಾರೆ.
ಕನಿಷ್ಠ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬೇಕೆಂದು ಪಣ ತೊಟ್ಟಿರುವ ರಾಜ್ಯ ಕಾಂಗ್ರೆಸ್ ನಾಯಕರು ಎಲ್ಲ ಕ್ಷೇತ್ರಗಳಲ್ಲಿ ಆಂತರಿಕ ಸಮೀಕ್ಷೆ ನಡೆಸಿ ವರದಿಯನ್ನು ಪಡೆದುಕೊಂಡಿದ್ದಾರೆ ಈ ವರದಿಯಲ್ಲಿ ರಾಜ್ಯದ ಮತದಾರರು ಕಾಂಗ್ರೆಸ್ ಪರವಾದ ಅಭಿಪ್ರಾಯ ಹೊಂದಿದ್ದರೂ ಕೂಡ ಅವುಗಳನ್ನು ಮತಗಳನ್ನಾಗಿ ಪರಿವರ್ತಿಸಿ ತಮ್ಮ ಪರವಾಗಿ ಮಾರ್ಪಡಿಸಿಕೊಳ್ಳುವಂತಹ ನಾಯಕರು ಸಿಕ್ಕಿಲ್ಲ.ಹೀಗಾಗಿ 20ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳ ಕೊರತೆಯನ್ನು ಕಾಂಗ್ರೆಸ್ ಎದುರಿಸುತ್ತಿದೆ.
ಹೈಕಮಾಂಡ್ ಕೂಡ ಆಂತರಿಕ ಸಮೀಕ್ಷೆ ನಡೆಸಿದ್ದು,ಅದರಲ್ಲೂ ಪ್ರಬಲ ಅಭ್ಯರ್ಥಿಗಳ ಕೊರತೆ ಎದ್ದು ಕಂಡಿದೆ.ಹೀಗಾಗಿ ವರಿಷ್ಠರು ಪ್ರಬಲ ಅಭ್ಯರ್ಥಿಗಳನ್ನು ಹುಡುಕುವಂತೆ ಸೂಚಿಸಿದ್ದಾರೆ. ಮೊನ್ನೆ ಬೆಂಗಳೂರಿಗೆ ಬಂದಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹೈಕಮಾಂಡ್ ಸೂಚಿಸಿರುವ ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿ ಪರ್ಯಾಯ ಕಾರ್ಯತಂತ್ರ ರೂಪಿಸುವಂತೆ ಸಲಹೆ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಅದರಂತೆ,ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ಥಳೀಯ ನಾಯಕರ ವರದಿ ಮತ್ತು ರಾಜ್ಯ ಕಾಂಗ್ರೆಸ್ನ ಚುನಾವಣಾ ನಿಪುಣ ಸುನಿಲ್ ಕುನುಗೋಳು ಅವರ ಅಭಿಪ್ರಾಯವನ್ನು ಆಲಿಸಿ ಪ್ರತ್ಯೇಕವಾದ ತಂತ್ರವನ್ನು ರೂಪಿಸಿದ್ದಾರೆ.
ಈ ಹಿಂದೆ 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಂದಿನ ಜನತಾದಳ ನೇತೃತ್ವದ ಸರ್ಕಾರ ಹೊಸದೊಂದು ತಂತ್ರವನ್ನು ರೂಪಿಸಿ ಯಶಸ್ವಿಯಾಗಿತ್ತು. ಇದೀಗ ಅದೇ ತಂತ್ರಕ್ಕೆ
ಶರಣಾಗಿದ್ದಾರೆ.
ಅಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದ ದೇವೇಗೌಡರು ರಾಜ್ಯದ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೂಪಿಸಿದ ತಂತ್ರಗಾರಿಕೆಯ ಪರಿಣಾಮವಾಗಿ ಜನತಾದಳ ರಾಜ್ಯದ ಇತಿಹಾಸದಲ್ಲಿ ಅತ್ಯಧಿಕ ಎನ್ನಿಸಬಹುದಾದ 16 ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸಿತ್ತು.
ಅಂದು ರೂಪಿಸಿದ್ದ ರಾಜಕೀಯ ರಣತಂತ್ರವನ್ನು ಇದೀಗ ಅಧ್ಯಯನ ನಡೆಸಿರುವ ಡಿಕೆ ಶಿವಕುಮಾರ್ ನೇತೃತ್ವದ ತಂಡ ವರದಿಯೊಂದನ್ನು ಸಿದ್ಧಪಡಿಸಿ ಅದನ್ನು ಹೈಕಮಾಂಡ್ ಗೆ ರವಾನಿಸಿದೆ.
ಡಿಕೆ ಶಿವಕುಮಾರ್ ಅವರು ಸಲ್ಲಿಸಿರುವ ವರದಿಯಲ್ಲಿ,ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಬೇಕಾದರೆ,ರಾಜ್ಯ ಸರ್ಕಾರದ ಪ್ರಭಾವಿ ಮಂತ್ರಿಗಳು ಚುನಾವಣೆಯ ಅಖಾಡಕ್ಕೆ ಧುಮುಕಬೇಕು. 1996ರಲ್ಲಿ ಇದೇ ತಂತ್ರ ರೂಪಿಸಲಾಗಿತ್ತು. ಅದನ್ನೇ ಈಗಲೂ ಮಾಡಬೇಕಿದೆ ಎಂದು ಹೇಳಿದ್ದಾರೆ.
ಕೆಪಿಸಿಸಿ ಮೂಲಗಳ ಪ್ರಕಾರ ಶಿವಕುಮಾರ್ ಹೈಕಮಾಂಡ್ ಗೆ ಸಲ್ಲಿಸಿರುವ ತಮ್ಮ ವರದಿಯಲ್ಲಿ ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ,ಬೀದರ್ ನಿಂದ ಈಶ್ವರ ಖಂಡ್ರೆ,ಬಾಗಲಕೋಟೆಯಿಂದ ಎಂ.ಬಿಬೆಂಗಳೂರ ಹಾವೇರಿಯಲ್ಲಿ ಎಚ್.ಕೆ.ಪಾಟೀಲ್, ದಾವಣಗೆರೆ ಗೆ ಎಸ್.ಎಸ್.ಮಲ್ಲಿಕಾರ್ಜುನ, ಚಾಮರಾಜನಗರ ದಿಂದ ಡಾ.ಎಚ್.ಸಿ.ಮಹಾದೇವಪ್ಪ, ಕೋಲಾರದಿಂದ ಡಾ.ಜಿ.ಪರಮೇಶ್ವರ್, ಬೆಂಗಳೂರು ಉತ್ತರದಿಂದ ಕೃಷ್ಣ ಬೈರೇಗೌಡ, ಬೆಂಗಳೂರು ದಕ್ಷಿಣಕ್ಕೆ ರಾಮಲಿಂಗಾರೆಡ್ಡಿ ಮತ್ತು ಬೆಂಗಳೂರು ಕೇಂದ್ರದಿಂದ ಜಮೀರ್ ಅಹಮದ್ ಖಾನ್ ಅವರನ್ನು ಕಣಕ್ಕಿಳಿಸಿದರೆ ಗೆಲುವು ಸಾಧ್ಯ ಎಂದು ತಿಳಿಸಿರುವುದಾಗಿ ಗೊತ್ತಾಗಿದೆ.
ಸುರ್ಜೇವಾಲಾ ಅವರೊಂದಿಗೆ ನಿಗಮ ಮಂಡಳಿ ನೇಮಕಾತಿ ಕುರಿತಂತೆ ಸಭೆ ನಡೆಸಿದ ನಂತರ ಶಿವಕುಮಾರ್ ಪ್ರತ್ಯೇಕವಾಗಿ ಈ ವಿಷಯದ ಕುರಿತಂತೆ ಚರ್ಚೆ ನಡೆಸಿದ್ದು,ಹೈಕಮಾಂಡ್ ಗೆ ತಮ್ಮ ವರದಿ ಕುರಿತು ಮನವರಿಕೆ ಮಾಡಿಕೊಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.