ಚಿಕ್ಕಮಗಳೂರು,ಏ.22- ಕಡೂರು ತಾಲೂಕಿನ ಹೇಮಗಿರಿ ಗೇಟ್ ಬಳಿ ಇಂದು ಬೆಳಿಗ್ಗೆ ಕಾರು ಅಪಘಾತಕ್ಕೀಡಾಗಿ ಅದೃಷ್ಟವಶಾತ್ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಪಾರಾಗಿದ್ದಾರೆ. ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಒನ್ವೇನಲ್ಲಿ ಬರುತ್ತಿದ್ದ ಗೂಡ್ಸ್ ವಾಹನ ತಪ್ಪಿಸಲು ಹೋಗಿ ಮಾಜಿ ಸಚಿವರ ಕಾರು ಮತ್ತೊಂದು ಕಾರಿಗೆ ಹೊಡೆದು ಅದೃಷ್ಟವಶಾತ್, ಮಾಧುಸ್ವಾಮಿ ಹಾಗೂ ಅವರ ಕಾರು ಚಾಲಕ ಇಬ್ಬರು ಪಾರಾಗಿದ್ದಾರೆ.
ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪರವಾಗಿ ಪ್ರಚಾರ ಮಾಡಲು ಬೀರೂರಿಗೆ ತೆರಳುತ್ತಿದ್ದರು. ಬೀರೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಲು ಅವರು ಕಾರಿನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಅವರ ಕಾರು ಲಘು ಅಪಘಾತಕ್ಕೀಡಾಗಿದೆ. ಇನ್ನು, ಬೀರೂರು ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ. ಬೃಹತ್ ಸಮಾವೇಶದಲ್ಲಿ ಬಳಿಕ ಮಾಧುಸ್ವಾಮಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.