ಬೆಂಗಳೂರು, ಆ.20- ಸರ್ಕಾರದ ವಿವಿಧ ಕಾಮಗಾರಿಗಳ ಟೆಂಡರ್ ಪಡೆದು ಕೆಲಸ ಪೂರ್ಣಗೊಳಿಸಿರುವ ಗುತ್ತಿಗೆದಾರರು ಇದೀಗ ತಮ್ಮ ಬಾಕಿ ಬಿಲ್ ಪಾವತಿಸಲು ಸರ್ಕಾರಕ್ಕೆ ಆಗಸ್ಟ್ 31ರ ಗಡುವು ನೀಡಿದ್ದಾರೆ. ಅಷ್ಟರೊಳಗೆ ಬಿಲ್ ಬಾಕಿ ಪಾವತಿಯಾಗದೆ ಹೋದರೆ ಕೆಲಸ ನಿಲ್ಲಿಸಿ ಹೋರಾಟಕ್ಕೆ ಧುಮುಕುವುದಾಗಿ ಗುತ್ತಿಗೆದಾರರ ಸಂಘದ ಮುಖಂಡ ಕೆಂಪಣ್ಣ ಎಚ್ಚರಿಸಿದ್ದಾರೆ.
ಜಲ ಸಂಪನ್ಮೂಲ,ಬೆಂಗಳೂರು ನಗರಾಭಿವೃದ್ಧಿ, ನಗರಾಭಿವೃದ್ಧಿ, ಪೌರಾಡಳಿತ, ಲೋಕೋಪಯೋಗಿ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ- ಪಂಚಾಯತ್ ರಾಜ್, ಇಂಧನ, ಮೂಲ ಸೌಲಭ್ಯ ಸೇರಿದಂತೆ 7 ಕ್ಕೂ ಹೆಚ್ಚು ಇಲಾಖೆಗಳಿಂದ ಸುಮಾರು 25 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಬಾಕಿ ಪಾವತಿಯಾಗಬೇಕಿದೆ ಎಂದು ಹೇಳಲಾಗಿದೆ.
ಈ ಬಾಕಿ ಬಿಡುಗಡೆ ಮಾಡುವ ದೃಷ್ಟಿಯಿಂದ ಸರ್ಕಾರದ ಜೊತೆ ಚರ್ಚೆ ನಡೆಸಿದ ಗುತ್ತಿಗೆದಾರರಿಗೆ ಸರ್ಕಾರದಲ್ಲಿ ಪಂಚಖಾತ್ರಿ ಯೋಜನೆಗಳಿಗೆ ಹಣ ಖರ್ಚಾಗಿದೆ. ಹೀಗಾಗಿ ಬಾಕಿ ಬಿಲ್ಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ಹಣ ಇಲ್ಲ. ಸ್ವಲ್ಪ ದಿನ ಸಹನೆಯಿಂದಿರುವಂತೆ ಹೇಳಿದೆ ಇದು ಗುತ್ತಿಗೆದಾರರನ್ನು ಕೆರಳುವಂತೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆಗಸ್ಟ್ 31ರ ಗಡುವು ನೀಡಿರುವ ಗುತ್ತಿಗೆದಾರರು ಗುತ್ತಿಗೆ ವಿಭಾಗದಲ್ಲಿ ತೊಡಗಿಸಿಕೊಂಡಿರುವ 61 ಸಂಘಟನೆಗಳ ಸಭೆ ಕರೆದು ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಲು ಮುಂದಾಗಿವೆ.
ಈ ಬಗ್ಗೆ ಹೇಳಿಕೆ ನೀಡಿರುವ ಗುತ್ತಿಗೆದಾರರ ಸಂಘದ ಕೆಂಪಣ್ಣ, ಮೂರು ವರ್ಷದಿಂದ ಬಿಲ್ ಬಾಕಿ ಉಳಿದಿದೆ. ಈ ತಿಂಗಳ 30 ರವರೆಗೂ ಸರ್ಕಾರಕ್ಕೆ ಗಡುವು ನೀಡಿದ್ದೇವೆ. ಆ ವೇಳೆಗೆ ಸರಿಯಾದ ಸ್ಪಂದನೆ ಬರದೇ ಇದ್ದರೆ ಗುತ್ತಿಗೆದಾರರ ಸಂಘದ ಪದಾಕಾರಿಗಳ ಸಭೆ ಕರೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು.
ಪ್ರಸ್ತುತ ಜೀವನ ವೆಚ್ಛ ದುಬಾರಿಯಾಗಿದೆ. ಗುತ್ತಿಗೆದಾರರು ಸಾಲದ ಸುಳಿಗೆ ಸಿಲುಕಿದ್ದಾರೆ. ಬಾಕಿ ಬಿಡುಗಡೆ ಮಾಡದೇ ಇದ್ದರೆ, ಕೆಲಸಗಳನ್ನು ಸ್ಥಗಿತಗೊಳಿಸದೇ ನಮಗೆ ಬೇರೆ ದಾರಿ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.