ಬೆಂಗಳೂರು – ಕನ್ನಡದಲ್ಲೇ ರಾಮನ ಅರ್ಚನೆ ಮಾಡುವ ಕನ್ನಡ ಪೂಜಾರಿ ಎಂದು ಖ್ಯಾತಿ ಪಡೆದಿರುವ ಹಿರೇ ಮಗಳೂರು ಕಣ್ಣನ್ ಅವರ ವೇತನ ಪಾವತಿ ವಿವಾದ ಬೇರೆ ಸ್ವರೂಪ ಪಡೆದುಕೊಂಡಿದೆ. ವಿವಾದದಲ್ಲಿ ದಿಡೀರ್ ಮಧ್ಯಪ್ರವೇಶಿಸಿದ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಕೈಗೊಂಡ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಚಿಕ್ಕಮಗಳೂರು ಹೊರವಲಯದ ಹಿರೇಮಗಳೂರಿನ ಕೋದಂಡರಾಮ ದೇಗುಲದಲ್ಲಿ ಪ್ರಧಾನ ಅರ್ಚಕರಾಗಿರುವ ಹಿರೇಮಗಳೂರು ಕಣ್ಣನ್ ಕನ್ನಡ ಪೂಜಾರಿ ಎಂದೇ ಖ್ಯಾತರಾಗಿದ್ದಾರೆ.
ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯದಲ್ಲಿ ಪೂಜಾ ಕೈಂಕರ್ಯ ಕೈಗೊಳ್ಳಲು ಮುಜರಾಯಿ ಇಲಾಖೆ ವೇತನ ನಿಗದಿಪಡಿಸಲಾಗಿದೆ.
2013-14ರಿಂದ 2016-17ರವರೆಗೆ ವಾರ್ಷಿಕ 24 ಸಾವಿರ ರೂ ಅರ್ಚಕರಿಗೆ ಪಾವತಿಸಬೇಕಿತ್ತು. ಆದರೆ ತಪ್ಪಾಗಿ 90 ಸಾವಿರದಂತೆ ಹೆಚ್ಚುವರಿಯಾಗಿ ವಾರ್ಷಿಕವಾಗಿ 66 ಸಾವಿರ ಪಾವತಿಯಾಗಿದೆ. ಹಾಗೂ 2017-18ರಿಂದ 2021-22ನೇ ಸಾಲಿನವರೆಗೆ ವಾರ್ಷಿಕವಾಗಿ 48 ಸಾವಿರ ಪಾವತಿಸಬೇಕಿದ್ದು, ತಪ್ಪಾಗಿ 90 ಸಾವಿರ ರೂ ಪಾವತಿಸಲಾಗಿದೆ.
ಈ ರೀತಿ ಅವರಿಗೆ ಇಲ್ಲಿಯವರೆಗೆ ಹೆಚ್ಚುವರಿಯಾಗಿ ಪಾವತಿಸಲಾದ 4,74 ಲಕ್ಷ ದೇವಾಲಯ ನಿಧಿಗೆ ಪಾವತಿಸುವಂತೆ ಚಿಕ್ಕಮಗಳೂರು ತಹಶೀಲ್ದಾರ್ ಅವರು ಕಣ್ಣನ್ ಅವರಿಗೆ ತಹಶಿಲ್ದಾರ್ ನೋಟಿಸ್ ನೀಡಿದ್ದರು.ಇದು ಬಾರಿ ವಿವಾದಕ್ಕೆ ಕಾರಣವಾಯಿತು. ಹಿರೇ ಮಗಳೂರು ಕಣ್ಣನ್ ಅವರಿಗೆ ನೋಟೀಸ್ ನೀಡಿದ ಕ್ರಮದ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದವು.
ಇದರ ಬೆನ್ನಲ್ಲೇ ಮಧ್ಯಪ್ರವೇಶಿಸಿದ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಹಿರೇಮಗಳೂರು ಕಣ್ಣನ್ ಅವರಿಗೆ ನೀಡಲಾಗಿರುವ ವೇತನ ವಾಪಸ್ ಕೇಳಿದ್ದ ನೋಟಿಸ್ ಹಿಂಪಡೆಯಲು ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸ್ಥಳೀಯ ತಹಶೀಲ್ದಾರ್ ತಪ್ಪು ತೀರ್ಮಾನದಿಂದ ನೋಟಿಸ್ ಜಾರಿಯಾಗಿದೆ. ಅದನ್ನು ಹಿಂಪಡೆಯುತ್ತೇವೆ” ಎಂದರು.
ಅಷ್ಟೇ ಅಲ್ಲ, ನೋಟಿಸ್ ಅನ್ನು ವಾಪಸ್ ಪಡೆದು, ಆ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಹಶೀಲ್ದಾರ್ ಮತ್ತು ಸಿಬ್ಬಂದಿಯಿಂದ ವಸೂಲಿ ಮಾಡಿ, ಜಮಾ ಮಾಡುವಂತೆ ಸೂಚಿಸಿರುವುದಾಗಿ ತಿಳಿಸಿದರು.