ಬೆಂಗಳೂರು, ಮಾ.31- ಅವಧಿ ಮೀರಿದ ನಂತರವೂ ಪಬ್ ನಲ್ಲಿ ಪಾರ್ಟಿ ಮಾಡಿದ ಆರೋಪ ಎದುರಿಸುತ್ತಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan), ರಾಕ್ ಲೈನ್ ವೆಂಕಟೇಶ್ ಮತ್ತಿತರರ ವಿರುದ್ಧ ದಾಖಲಾಗಿದ್ದ ಪ್ರಕರಣ ಸಿನಿಮಿಯ ತಿರುವು ಪಡೆದುಕೊಂಡಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲಿನ ಅಂಶಗಳು ಹಲವಾರು ರೀತಿಯ ಸಂಶಯಗಳಿಗೆ ಕಾರಣವಾಗುತ್ತಿದ್ದು ಪ್ರತಿಷ್ಠಿತರು ಎನಿಸಿಕೊಂಡರೆ ಪ್ರಕರಣಗಳು ಏನು ಬೇಕಾದರೂ ಆಗಬಹುದು ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆದಿದೆ.
ಬೆಂಗಳೂರಿನ ಒರಿಯನ್ ಮಾಲ್ ಸಮೀಪದಲ್ಲಿರುವ ಜೆಟ್ಲ್ಯಾಗ್ ಪಬ್ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ ಪ್ರಕರಣ ಸಂಬಂಧ ನಟ ಚಾಲೆಜಿಂಗ್ ಸ್ಟಾರ್ ದರ್ಶನ್ (Darshan) ಸೇರಿ ಎಲ್ಲರಿಗೂ ಬಿಗ್ ರಿಲೀಫ್ ಸಿಕ್ಕಿದೆ.
ಕಾಟೇರ ಸಿನೆಮಾ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಜೆಟ್ಲ್ಯಾಗ್ ಪಬ್ನಲ್ಲಿ ಅವಧಿ ಮೀರಿದ ನಂತರವೂ ಸೇರಿಕೊಂಡ ಸಿನಿಮಾ ತಂಡ, ಸಿನಿಮಾ ರಂಗದ ಇತರೆ ಗಣ್ಯರೊಂದಿಗೆ ಸಕ್ಸಸ್ ಪಾರ್ಟಿ ಮಾಡಿದೆ ಎಂದು ಆರೋಪಿಸಿ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಈಗ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ತಡ ರಾತ್ರಿ ಮದ್ಯದ ಪಾರ್ಟಿ ಮಾಡಿಲ್ಲ. ಆರೋಪಿಗಳು ಕೇವಲ ಊಟ ಮಾತ್ರ ಮಾಡಿದ್ದಾರೆ ಎಂದು ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಏನಿದು ಪ್ರಕರಣ:
ಕಳೆದ ಜನವರಿ 3ರಂದು ರಾತ್ರಿ ಸೌಂದರ್ಯ ಜಗದೀಶ್ ಒಡೆತನದ ಜೆಟ್ ಲ್ಯಾಗ್ ಪಬ್ನಲ್ಲಿ ಕನ್ನಡ ಸಿನಿಮಾ ಒಂದರ ಸಕ್ಸಸ್ ಪಾರ್ಟಿ ನಡೆದಿತ್ತು. ಖ್ಯಾತ ನಟ-ನಟಿಯರು, ನಿರ್ಮಾಪಕರು ಸೇರಿದಂತೆ ಹಲವಾರು ಸಿನಿಮಾ ಸೆಲೆಬ್ರೆಟಿಗಳು ಭಾಗಿಯಾಗಿದ್ದರು. ರಾತ್ರಿ 10 ಗಂಟೆ ಬಳಿಕ ಆರಂಭವಾಗಿದ್ದ ಪಾರ್ಟಿ ನಿಯಮ ಪ್ರಕಾರ ಪ್ರಕಾರ ರಾತ್ರಿ 1 ಗಂಟೆಗೆ ಮುಗಿಯಬೇಕಾಗಿತ್ತು.ಆದರೆ, ಪೊಲೀಸರನ್ನು ಕೇರ್ ಮಾಡದ ಪಬ್ ಮಾಲೀಕರು ಹಾಗೂ ಅಲ್ಲಿನ ಸಿಬ್ಬಂದಿ ಸೆಲೆಬ್ರಿಟಿಗಳಿಗೆ ಮುಂಜಾನೆವರೆಗೂ ಪಾರ್ಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದರು ಎನ್ನಲಾಗಿದ.
ಮುಂಜಾನೆ ಪೊಲೀಸ್ ದಾಳಿ:
ಸ್ಥಳಕ್ಕೆ ಹೋಗಿದ್ದ ಪೊಲೀಸರು ಪಬ್ ಕ್ಲೋಸ್ ಮಾಡುವಂತೆ ಸೂಚಿಸಿದ್ದರು. ಆದರೆ, ಅದಕ್ಕೆ ಕೇರ್ ಮಾಡದ ಪಬ್ ಮಾಲೀಕರು ಸೆಲೆಬ್ರೆಟಿಗಳಿಗೆ ತುಂಡು ಗುಂಡು ಸಪ್ಲೈ ಮಾಡಿ ಮೋಜು ಮಸ್ತಿ ಮಾಡಲು ಅವಕಾಶ ನೀಡಿದ್ದರು. ಬಳಿಕ ಮುಂಜಾನೆ ಐದು ಗಂಟೆ ಸುಮಾರಿಗೆ ದಾಳಿ ಮಾಡಿದ ಪೊಲೀಸರು ಪಬ್ ಮಾಲೀಕರಾದ ಶಶಿರೇಖಾ ಜಗದೀಶ್ ಹಾಗೂ ಪಬ್ ಕ್ಯಾಶಿಯರ್ ಪ್ರಕಾಶ್ ವಿರುದ್ಧ ಕೆಪಿ. ಆಕ್ಟ್ ಹಾಗೂ ಅಬಕಾರಿ ಕಾಯಿದೆಯಡಿ ಕೇಸು ದಾಖಲಿಸಿದ್ದರು.
8 ಮಂದಿಗೆ ನೋಟೀಸ್:
ಈ ಸಂಬಂಧ ನಟ ದರ್ಶನ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸೇರಿ 8 ಮಂದಿಗೆ ನೋಟಿಸ್ ಜಾರಿಯಾಗಿತ್ತು. ನಟ ದರ್ಶನ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣ, ನಟರಾದ ನಿನಾಸಂ ಸತೀಶ್, ಡಾಲಿ ಧನಂಜಯ್, ಅಭಿಷೇಕ್ ಅಂಬರೀಶ್ ಹಾಗೂ ಚಿಕ್ಕಣ್ಣ ಅವರಿಗೆ ಪ್ರಧಾನವಾಗಿ ನೋಟಿಸ್ ಜಾರಿ ಮಾಡಲಾಗಿತ್ತು. 8 ಜನರು ವಿಚಾರಣೆಗೆ ಹಾಜರಾಗಿ ನಾವು ಪಾರ್ಟಿ ಮಾಡಿಲ್ಲ. ಕೇವಲ ಊಟ ಮಾತ್ರ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಆಧಾರಿಸಿ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ.
ಚಾರ್ಜ್ಶೀಟ್ ಸಲ್ಲಿಕೆ:
ಅವಧಿ ಮೀರಿ ಪಾರ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಟ್ಲ್ಯಾಗ್ ಪಬ್ ಮಾಲೀಕ, ಮ್ಯಾನೇಜರ್ ಮೇಲೆ ಕೇಸ್ ದಾಖಲಾಗಿತ್ತು. ಈ ಸಂಬಂಧ ನಟ ದರ್ಶನ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸೇರಿ 8 ಮಂದಿಗೆ ನೋಟಿಸ್ ಜಾರಿಯಾಗಿತ್ತು. 8 ಮಂದಿಯು ವಿಚಾರಣೆಗೆ ಹಾಜರಾಗಿ ನಾವು ಪಾರ್ಟಿ ಮಾಡಿಲ್ಲ. ಕೇವಲ ಊಟ ಮಾತ್ರ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಆಧರಿಸಿ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ.