ಬೆಂಗಳೂರು. ಫೆ.1: ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಂಸದ ಡಿಕೆ ಸುರೇಶ್ ಇದೀಗ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮಂಡಿಸಿದ್ದಾರೆ ಈ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.
ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಮಂಡಿಸಿದ ಮಧ್ಯಮಾವಧಿ ಬಜೆಟ್ ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಸುರೇಶ್ ಅವರು ಕೇಂದ್ರದಿಂದ ದಕ್ಷಿಣದ ರಾಜ್ಯಗಳಿಗೆ ನಿರಂತರ ಅನ್ಯಾಯ ನಡೆದಿದೆ ಎಂದು ಆಪಾದಿಸಿದರು.
ದಕ್ಷಿಣದ ರಾಜ್ಯಗಳು ದೇಶಕ್ಕೆ ಅತ್ಯಂತ ಹೆಚ್ಚು ತೆರಿಗೆ ಪಾವತಿಸುತ್ತವೆ ಆದರೆ ಪ್ರಮಾಣಕ್ಕೆ ಅನುಗುಣವಾಗಿ ದಕ್ಷಿಣ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಆದರೆ ಕೇಂದ್ರ ಸರ್ಕಾರ ಉತ್ತರದ ರಾಜ್ಯಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಿದೆ ಈ ಅನ್ಯಾಯ ಇದೇ ರೀತಿ ಮುಂದುವರಿದರೆ ದಕ್ಷಿಣ ರಾಜ್ಯಗಳೆಲ್ಲ ಒಟ್ಟಾಗಿ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮಂಡಿಸಲು ಚಿಂತಿಸಬೇಕಾಗುತ್ತದೆ ಎಂದು ಹೇಳಿದರು.
ನಮ್ಮ ರಾಜ್ಯಗಳ ಹಣ ನಮಗೇ ಹಂಚಿಕೆಯಾಗಬೇಕಾದರೆ ಪ್ರತ್ಯೇಕ ರಾಷ್ಟ್ರದ ಕೂಗು ಅನಿವಾರ್ಯವಾಗಿದೆ. ಹೀಗಾಗಿ ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಬೇಕಾಗುತ್ತದೆ.ಪ್ರತ್ಯೇಕ ರಾಷ್ಟ್ರದ ಕೂಗು ಏಳುವ ಮುನ್ನವೇ ಕೇಂದ್ರ ಸರ್ಕಾರ ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬೇಕು. ದಕ್ಷಿಣ ಭಾರತದ ತೆರಿಗೆ ಹಣವನ್ನು ದಕ್ಷಿಣ ಭಾರತಕ್ಕೇ ಖರ್ಚು ಮಾಡಬೇಕು. ನಮ್ಮ ಹಣವನ್ನು ಉತ್ತರ ಭಾರತಕ್ಕೆ ಹಂಚಿಕೆ ಮಾಡಬಾರದು ಎಂದು ಆಗ್ರಹಿಸಿದರು.
ದಕ್ಷಿಣ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಕೇವಲ ಅನುದಾನ ಹಂಚಿಕೆಯಲ್ಲಿ ಮಾತ್ರ ಅನ್ಯಾಯ ಆಗುತ್ತಿಲ್ಲ.ಇತರೆ ಎಲ್ಲಾ ವಿಚಾರಗಳಲ್ಲೂ ಕೂಡ ಅನ್ಯಾಯ ಆಗುತ್ತಿದೆ. ಇದನ್ನು ಸರಿಪಡಿಸದೆ ಹೋದರೆ,ಮುಂದಿನ ದಿನಗಳಲ್ಲಿ ನಾವು ಪ್ರತ್ಯೇಕವಾದ ರಾಷ್ಟ್ರ ಬೇಡಿಕೆ ಇಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಲವಂತವಾಗಿ ನಮ್ಮ ಮೇಲೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ರಾಜ್ಯಪಾಲರು ನಮ್ಮ ಕನ್ನಡದ ನಾಮಫಲಕ ಅಳವಡಿಕೆ ಕುರಿತು ಸುಗ್ರೀವಾಜ್ಞೆಗೆ ಅಂಕಿತ ಹಾಕಲು ತಿರಸ್ಕಾರ ಮಾಡಿದರು ಏತಕ್ಕಾಗಿ ಅವರು ತಿರಸ್ಕಾರ ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
ಎಲ್ಲಾ ರಾಜ್ಯದ ರಾಜ್ಯಪಾಲರು ಇದೇ ತರ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಹೋದರೆ ನಮ್ಮ ಕನ್ನಡಿಗರಿಗೆ ಕೊಡುವ ಗೌರವ ಏನು? ತುಂಬಾ ನಮ್ಮ ಹಣಕಾಸು ಪರಿಸ್ಥಿತಿ ನಮ್ಮಿಂದ ನಾಲ್ಕು ಲಕ್ಷಕ್ಕೂ ಹೆಚ್ಚು ಕೋಟಿ ತೆರಿಗೆ ರೂಪದಲ್ಲಿ ಪಡೆಯುತ್ತಿದ್ದಾರೆ.
ನಮಗೆ ಕೊಡುತ್ತಿರುವುದು ಎಷ್ಟು? ಇದನ್ನು ಪ್ರಶ್ನೆ ಮಾಡಬೇಕಾಗುತ್ತದೆ ಇದು ಸರಿ ಹೋಗಲಿಲ್ಲ ಅಂದರೆ ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಬೇಕಾದ ಅನಿವಾರ್ಯತೆ ಬರಲಿದೆ ಎಂದು ತಿಳಿಸಿದ್ದಾರೆ.
ಒಡೆಯಲು ಬಿಡುವುದಿಲ್ಲ:
ಪತ್ರಿಕ ರಾಷ್ಟ್ರ ಕುರಿತಾದ ಡಿಕೆ ಸುರೇಶ್ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದೆ ಇದನ್ನು ಬಲವಾಗಿ ಖಂಡಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ ಎಂದಾದೆ ಪರಿಸ್ಥಿತಿ ಬಂದರೂ ದೇಶ ಒಡೆಯಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ ಜೋಡೋ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತ ದೇಶವನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದರೆ ಅವರದೇ ಪಕ್ಷದ ಸಂಸದ ಡಿಕೆ ಸುರೇಶ್ ದೇಶವನ್ನು ಒಡೆಯುವ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಒಡೆದು ಆಳುವ ನೀತಿಯ ಕಾಂಗ್ರೆಸ್ ನಿಂದಾಗಿ ದೇಶ ಈಗಾಗಲೇ ವಿಭಜನೆಗೊಂಡು ನಾವು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದೇವೆ ಇದೀಗ ದೇಶದ ಅಖಂಡತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಕಾಂಗ್ರೆಸ್ ಸಂಸದರು ದೇಶ ಒಡೆಯಲು ಮುಂದಾಗಿದ್ದಾರೆ ಎಂದು ಆಪಾದಿಸಿದರು.